ರಾಯಚೂರು: ತಾಲೂಕಿನ ಗಿಲ್ಲೆಸುಗೂರಿನ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಸೆ.30ರಂದು ಜನತಾ ಸಮಾವೇಶ ಆಯೋಜಿಸಲಾಗಿದ್ದು, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಪಾಲ್ಗೊಳ್ಳಲಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ ತಿಳಿಸಿದರು.
ಸ್ಥಳೀಯ ಪತ್ರಿಕಾಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಎಚ್.ಡಿ.ಕುಮಾರಸ್ವಾಮಿಯನ್ನು 4 ಸಾವಿರ ಬೈಕ್ ರ್ಯಾಲಿ ಮೂಲಕ ತುಂಗಭದ್ರಾ ಸೇತುವೆಯಿಂದ ಗ್ರಾಮಕ್ಕೆ ಕರೆತರಲಾಗುವುದು. ಪಕ್ಷದ ಸಂಘಟನೆ ಮತ್ತು ಸದಸ್ಯತ್ವ ನೋಂದಣಿಗೆ ವರಿಷ್ಠರು ಸೂಚನೆ ನೀಡಿದ್ದಾರೆ. ನೋಂದಣಿ ಕಾರ್ಯದಲ್ಲಿ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿದವರಿಗೆ ವಿಧಾನಸಭಾ ಚುನಾವಣೆಯ ಟಿಕೆಟ್ ನೀಡಲಾಗುವುದು. ಗ್ರಾಮೀಣ ಕ್ಷೇತ್ರದ ಅಭ್ಯರ್ಥಿಯನ್ನಾಗಿ ನರಸಿಂಹ ನಾಯಕ ಹೆಸರು ಪ್ರಕಟಿಸುವ ಸಾಧ್ಯತೆಯಿದೆ ಎಂದು ಹೇಳಿದರು.
ಕಾರ್ಯಾಧ್ಯಕ್ಷ ಎನ್.ಶಿವಶಂಕರ ಮಾತನಾಡಿ, ಬಿಜೆಪಿ ಮತ್ತು ಕಾಂಗ್ರೆಸ್ ಪೋಸ್ಟರ್ ರಾಜಕೀಯದಲ್ಲಿ ತೊಡಗಿದ್ದು, ಯಾರ ಅವಧಿಯಲ್ಲಿ ಎಷ್ಟು ಕಮೀಷನ್ ಪಡೆಯಲಾಗಿದೆ ಎಂಬುದು ಜನರಿಗೆ ಗೊತ್ತಿದೆ. ಜೆಡಿಎಸ್ನಿಂದ ಮುಂದಿನ ಬಾರಿ ಕುಮಾರಸ್ವಾಮಿ ಪೋಸ್ಟರ್ ಅಭಿಯಾನ ನಡೆಸಲಾಗುವುದು ಎಂದು ತಿಳಿಸಿದರು. ಪದಾಧಿಕಾರಿಗಳಾದ ನಿಜಾಮುದ್ದೀನ್, ಅಮರೇಶ ಪಾಟೀಲ್ ಆಶಾಪುರ, ನರಸಿಂಹ ನಾಯಕ ಇದ್ದರು.