ರಾಯಚೂರು: ನಗರದ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತದ ಸಹಯೋಗದಲ್ಲಿ ನ.11ರಂದು ಕನಕದಾಸ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕುರುಬರ ಸಂಘದ ಜಿಲ್ಲಾಧ್ಯಕ್ಷ ಕೆ.ಬಸವಂತಪ್ಪ ತಿಳಿಸಿದರು.
ಸ್ಥಳೀಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಬೆಳಗ್ಗೆ 10ಕ್ಕೆ ಗಂಜ್ ವೃತ್ತದಲ್ಲಿನ ಕನಕದಾಸ ಪುತ್ಥಳಿಗೆ ಮಾಲಾರ್ಪಣೆ ನಂತರ ರಂಗಮಂದಿರದವರೆಗೆ ಕನಕದಾಸ ಭಾವಚಿತ್ರದ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಮತ್ತು ಕುಂಭ ಹೊತ್ತ ಮಹಿಳೆಯರು ಪಾಲ್ಗೊಳ್ಳಲಿದ್ದಾರೆ ಎಂದರು.
ರಂಗಮಂದಿರದಲ್ಲಿ ಮಧ್ಯಾಹ್ನ 1.30ಕ್ಕೆ ವೇದಿಕೆ ಕಾರ್ಯಕ್ರಮ ಆರಂಭವಾಗಲಿದೆ. ಮಾನ್ವಿಯ ಪ್ರಾಧ್ಯಾಪಕ ಶಿವರಾಜ ಕೊಪ್ಪರ ಉಪನ್ಯಾಸ ನೀಡಲಿದ್ದಾರೆ. ಹನುಮಂತಪ್ಪ ಜಾಲಿಬೆಂಚಿಗೆ ಕನಕರತ್ನ ಪ್ರಶಸ್ತಿ ಪ್ರದಾನ ಹಾಗೂ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ಡಾ.ಸದಾನಂದ ಪೂಜಾರಿ, ಕರಿಯಪ್ಪ, ಶಶಿಕಲಾ ಈರಣ್ಣ, ಚಿದಾನಂದ ಸಾಲಿ, ಜೀವನಸಾಬ್, ಕೆ.ಸತ್ಯನಾರಾಯಣ, ಗಾಯತ್ರಿ ಅವರನ್ನು ಸನ್ಮಾನಿಸಲಾಗುವುದು. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚಿನ ಅಂಕ ಗಳಿಸಿರುವ ತಲಾ ಐವರನ್ನು ಪುರಸ್ಕರಿಸಲಾಗುವುದು ಎಂದು ಕೆ.ಬಸವಂತಪ್ಪ ಹೇಳಿದರು. ಪದಾಧಿಕಾರಿಗಳಾದ ಮಿರ್ಜಾಪುರ ಮಹಾದೇವಪ್ಪ, ಈಶಪ್ಪ, ನಾಗರಾಜ, ಹನುಮಂತಪ್ಪ ಉಪಸ್ಥಿತರಿದ್ದರು.