ರಾಯಚೂರು / ಸಿಂಧನೂರು: ಕನ್ನಡ ಭಾಷೆಗೆ ಮಾರಕವಾಗಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಜಾರಿಗೊಳಿಸುವುದನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಸಿಪಿಐಎಂ ಬುಧವಾರ ಪ್ರತಿಭಟನೆ ನಡೆಸಿತು.
ನಂತರ ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿತು. ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಉನ್ನತ ಶಿಕ್ಷಣವನ್ನು ಕಾರ್ಪೋರೇಟ್ ಕಂಪನಿಗಳ ಕೈಗೆ ಒಪ್ಪಿಸು ಹುನ್ನಾರ ಈ ನೀತಿಯಲ್ಲಿ ಅಡಗಿದೆ. ಇದರಿಂದ ದಲಿತರು, ಹಿಂದುಳಿದವರು, ಬಡವರು ಶಿಕ್ಷಣದಿಂದ ವಂಚಿತರಾಗುವಂತಾಗಲಿದೆ. ಈ ನೀತಿಯಿಂದ ಕನ್ನಡ, ತೆಲುಗು, ತುಳು, ಕೊಡವ, ಉರ್ದು, ಮರಾಠಿ, ಕೊಂಕಣಿ, ಲಮಾಣಿ ಇನ್ನಿತರ ಭಾಷೆಗಳ ಮೇಲೆ ಇಂಗ್ಲೀಷ್, ಸಂಸ್ಕೃತ ಮತ್ತು ಹಿಂದಿ ಭಾಷೆಗಳನ್ನು ಹೇರುವ ಹುನ್ನಾರವಿದೆ. ಇದರಿಂದ ಮಾತೃ ಭಾಷೆಗಳಿಗೆ ಅಪಾಯ ಎದುರಾಗಲಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಲಕ್ಷಾಂತರ ಅಂಗನವಾಡಿ ಕೇಂದ್ರಗಳು ವಿದ್ಯಾರ್ಥಿಗಳ ಕೊರತೆ ಎದುರಿಸುವ ಸಂದರ್ಭದಲ್ಲಿ ನೀತಿ ಜಾರಿಯಿಂದ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳು ಮುಚ್ಚಿ ಹೋಗಲಿವೆ. ಮಹಿಳೆಯರು ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ನೀಡಲಾಗುತ್ತಿರುವ ಪೌಷ್ಟಿಕ ಆಹಾರದ ಯೋಜನೆಯು ಕಣ್ಮರೆಯಾಗಲಿದೆ. ಶಿಕ್ಷಣ ಮತ್ತಿತರ ವಲಯಗಳಲ್ಲಿ ವ್ಯಾಪಕ ನಿರುದ್ಯೋಗ ಸೃಷ್ಟಿಯಾಗಲಿದೆ. ಸಾರ್ವಜನಿಕ ಕ್ಷೇತ್ರದ ಉದ್ಯೋಗಗಳು ಕಡಿತಗೊಳ್ಳಲಿರುವ ಕಾರಣ ಇದನ್ನು ಜಾರಿಗೊಳಿಸಬಾರದು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್ವಾದಿ) ಪ್ರತಿಭಟನೆ
ಸಿಂಧನೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಬಾರದು ಎಂದು ಒತ್ತಾಯಿಸಿ ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್ವಾದಿ) ಬುಧವಾರ ಪ್ರತಿಭಟನೆ ನಡೆಸಿತು.
ಈ ನೀತಿಯ ಹಿಂದೆ ಕನ್ನಡ, ತುಳು, ಕೊಡವ, ತೆಲಗು, ಉರ್ದು, ಮರಾಠಿ, ಕೊಂಕಣಿ, ಲಂಬಾಣಿ ಮೊದಲಾಧ ಭಾಷೆಗಳ ಮೇಲೆ ಇಂಗ್ಲೀಷ್, ಸಂಸ್ಕೃತ, ಹಿಂದಿ ಭಾಷೆಗಳನ್ನು ಹೇರುವ ಹುನ್ನಾರ ಇದೆ. ಪೂರ್ವ ಪ್ರಾಥಮಿಕದಿಂದ ಉನ್ನತ ಶಿಕ್ಷಣವರೆಗೆ ಕಾರ್ಪೋರೇಟ್ ಕಂಪನಿಗಳು, ಖಾಸಗಿ ಶಿಕ್ಷಕ ಸಂಸ್ಥೆಗಳಿಗೆ ಬಲಿ ಕೊಡುವ ಮುಂದುವರಿದ ಭಾಗ ಇದಾಗಿದೆ. ಬಾಣಂತಿಯರು, ಗರ್ಭಿಣಿಯರು, ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರ ಯೋಜನೆಗಳು ಕಣ್ಮರೆಯಾಗಲಿವೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ನಿರುದ್ಯೋಗ ಸೃಷ್ಟಿ, ಸಾರ್ವಜನಿಕ ಕ್ಷೇತ್ರದ ಉದ್ಯೋಗಗಳ ಕಡಿತ ಮಾಡಲಾಗುತ್ತಿದೆ. 2 ವರ್ಷ ರಾಜ್ಯದ ಜನತೆ ಕೋವಿಡ್ ಸಂಕಷ್ಟದಲ್ಲಿತ್ತು. ಆಗ ಜನತೆಗೆ ತಮ್ಮ ಅಭಿಪ್ರಾಯ ಮಂಡಿಸಲು ಸಾಧ್ಯವಾಗಿರಲಿಲ್ಲ. ಕೂಡಲೇ ರಾಜ್ಯದ ವಿಧಾನಸಭೆ, ವಿಧಾನ ಪರಿಷತ್ನಲ್ಲಿ ಎಲ್ಲ ರಾಜಕೀಯ ಪಕ್ಷಗಳು, ಶಿಕ್ಷಣ ತಜ್ಞರು, ಭಾಷಾ ತಜ್ಞರು, ಶಿಕ್ಷಕರು ವಿದ್ಯಾರ್ಥಿ ಸಂಘಟನೆಗಳು, ವಿವಿಗಳ ಮುಖ್ಯಸ್ಥರು ಸೇರಿ ವ್ಯಾಪಾಕವಾಗಿ ಚರ್ಚಿಸಬೇಕು. ಅಲ್ಲಿಯವರೆಗೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಬಾರದು ಎಂದು ಒತ್ತಾಯಿಸಿದರು.
ಸಿಪಿಐ(ಎಂ) ಜಿಲ್ಲಾ ಸಮಿತಿ ಸದಸ್ಯ ಶೇಕ್ಷಖಾದ್ರಿ, ಕಾರ್ಯದರ್ಶಿ ಯಂಕಪ್ಪ ಕೆಂಗಲ್, ಎಸ್.ದೇವೆಂದ್ರಗೌಡ, ನರಸಿಂಹಪ್ಪ ಜನತಾ ಕಾಲನಿ, ಬಂಗಾರೆಪ್ಪ, ಗರೀಬ್ಸಾಬ್ ಇದ್ದರು.