More

    ಮುಸ್ಲಿಮರ ಮೀಸಲಾತಿ ರದ್ಧತಿ ಖಂಡನೀಯ

    ರಾಯಚೂರು: ಮುಸ್ಲಿಮರಿಗೆ ನೀಡಲಾಗುತ್ತಿದ್ದ ಶೇ.4 ಮೀಸಲಾತಿಯನ್ನು ರಾಜ್ಯ ಸರ್ಕಾರ ರದ್ದುಗೊಳಿಸಿರುವುದು ತೀವ್ರ ಖಂಡನೀಯವಾಗಿದೆ. ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಧಾರ ಬಡ ಮುಸ್ಲಿಮರ ಭವಿಷ್ಯ ಮಂಕಾಗುವಂತೆ ಮಾಡಿದೆ ಎಂದು ಅಂಜುಮನ್ ಎ ಸಂಸ್ಥೆ ಸಂಚಾಲಕ ಡಾ.ರಜಾಕ್ ಉಸ್ತಾದ್ ಹೇಳಿದರು.

    ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅತ್ಯಂತ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಇತರ ಸಮುದಾಯಗಳಿಗೆ ಮೀಸಲಾತಿ ನೀಡಲು ನಮ್ಮ ವಿರೋಧವಿಲ್ಲ. ಆದರೆ ಮುಸ್ಲಿಮರ ಮೀಸಲು ಕಸಿದುಕೊಂಡು ಮತ್ತೊಂದು ಸಮುದಾಯಕ್ಕೆ ನೀಡುವುದು ಸರಿಯಲ್ಲ ಎಂದರು.

    ನ್ಯಾಯಮೂರ್ತಿ ರಾಜೇಂದ್ರ ಸಾಚಾರ್, ನ್ಯಾಯಮೂರ್ತಿ ರಂಗನಾಥ ಮಿಶ್ರಾ ಆಯೋಗದ ವರದಿಗಳು ಮುಸ್ಲಿಂ ಸಮುದಾಯ ಆರ್ಥಿಕ ಹಿಂದುಳಿದಿರುವಿಕೆ ಆಧಾರದ ಮೇಲೆ ಮೀಸಲಾತಿ ನಿಗದಿಪಡಿಸಿವೆ. 1999 ರಲ್ಲಿ ರಾಜ್ಯಸಭಾ ಸದಸ್ಯರಾಗಿದ್ದ ಕೆ.ರಹೆಮಾನ್ ಖಾನ್ ನೇತೃತ್ವದಲ್ಲಿ ಉನ್ನತಾಧಿಕಾರ ಸಮಿತಿ ರಚಿಸಿ ನೀಡಿದ್ದ ವರದಿ ಆಧಾರದ ಮೇಲೆ ಎಚ್.ಡಿ.ದೇವೆಗೌಡರು ಪ್ರಧಾನಿಯಾಗಿದ್ದಾಗ ಶೇ.4 ಮೀಸಲಾತಿ ಜಾರಿಗೊಳಿಸಲಾಗಿತ್ತು.

    ಸಂವಿಧಾನದ 64 ಮತ್ತು 63 ರ ಅನ್ವಯ ಕೊಡಮಾಡಿರುವ ಮೀಸಲಾತಿಯನ್ನು ಧಾರ್ಮಿಕ ಅಲ್ಪಸಂಖ್ಯಾತರಿಗೆ ನೀಡಲು ಬರುವುದಿಲ್ಲ ಎಂಬ ಕಾರಣ ನೀಡಿ ರದ್ದುಗೊಳಿಸಿರುವುದರ ಹಿಂದೆ ರಾಜಕೀಯ ದುರುದ್ದೇಶವಿದೆ. ಬಿಜೆಪಿಗೆ ಮುಸ್ಲಿಮರು ಮತ ಹಾಕುವುದಿಲ್ಲ ಎಂಬ ಭಾವನೆಯಿಂದ ಇಂತಹ ನಿರ್ಧಾರ ಸರ್ಕಾರ ಕೈಗೊಂಡಿದೆ.

    ಆರ್ಥಿಕವಾಗಿ ಹಿಂದುಳಿದವರಿಗೆ ಜಾರಿಗೊಳಿಸಲಾಗಿರುವ ಶೇ.10 ಮೀಸಲಾತಿಗೆ ಸೇರ್ಪಡೆ ಮಾಡಿದಲ್ಲಿ ಸಮುದಾಯಕ್ಕೆ ಘೋರ ಅನ್ಯಾಯವಾಗುತ್ತದೆ. ಕೂಡಲೇ ಮುಸ್ಲಿಮರ ಮೀಸಲಾತಿ ರದ್ದುಗೊಳಿಸುವ ತೀರ್ಮಾನವನ್ನು ಕೈಬಿಡಬೇಕು ಎಂದು ಡಾ.ರಜಾಕ್ ಉಸ್ತಾದ್ ಒತ್ತಾಯಿಸಿದರು. ಪದಾಧಿಕಾರಿಗಳಾದ ಅಬ್ದುಲ್ ಹೈ ಫಿರೋಜ್, ಫರೀದ್ ಮಹ್ಮದ್ ಗೋಗಿ, ಸೈಯದ್ ಅಮೀನುಲ್ ಹಕ್, ಮಹ್ಮದ್ ರಫಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts