ರಾಯಚೂರು: ನಗರದ ಅಭಿವೃದ್ಧಿಗಾಗಿ ಬಿಡುಗಡೆಯಾಗಿರುವ ಅಮೃತ ನಗರೋತ್ಥಾನ ಯೋಜನೆಯ 40 ಕೋಟಿ ರೂಪಾಯಿಯನ್ನು ಪರ್ಸೆಂಟೇಜ್ ಆಸೆಗಾಗಿ ಲೋಕೋಪಯೋಗಿ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ ಆರೋಪಿಸಿದರು.
ಸ್ಥಳೀಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದರು. ನಗರದಲ್ಲಿನ ರಸ್ತೆ, ಚರಂಡಿ, ನೈರ್ಮಲ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಬಿಡುಗಡೆಯಾದ ಅನುದಾನವನ್ನು ನಗರಸಭೆ ಆಡಳಿತ ಲೋಕೋಪಯೋಗಿ ಇಲಾಖೆಗೆ ನೀಡಿದ್ದು, ನಿಯಮ ಬಾಹಿರವಾಗಿ ಪ್ಯಾಕೇಜ್ ಟೆಂಡರ್ ಕರೆಯಲಾಗುತ್ತಿದೆ ಎಂದರು.
ಲೋಕೋಪಯೋಗಿ ಇಲಾಖೆಯಿಂದ ಕರೆಯಲಾಗಿರುವ ಟೆಂಡರ್ನಲ್ಲಿ ಯಾವುದೇ ಸ್ಪಷ್ಟತೆಯಿಲ್ಲ. ನಿಯಮ ಪ್ರಕಾರ ನಗರಸಭೆಯಿಂದ ಟೆಂಡರ್ ಕರೆಯಬೇಕಾಗಿತ್ತು. ಒಂದು ಕೋಟಿ ರೂ.ಗಿಂತ ಹೆಚ್ಚಿನ ಕಾಮಗಾರಿ ಪ್ಯಾಕೇಜ್ ಮಾಡದಂತೆ ಆದೇಶವಿದ್ದರೂ 3 ಕೋಟಿ ರೂ.ಗಳ ಕಾಮಗಾರಿಗಳ ಪ್ಯಾಕೇಜ್ ಟೆಂಡರ್ ಕರೆಯಲಾಗಿದೆ.
ನಗರಸಭೆಯಿಂದ ನಡೆಯಬೇಕಾದ ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆಗೆ ನೀಡುವಲ್ಲಿ ಶಾಸಕರ ಪಾತ್ರವಿದ್ದು, ಕೂಡಲೇ ನಿಯಮಾನುಸಾರ ನಗರಸಭೆಯಿಂದ ಟೆಂಡರ್ ನಡೆಸಿ ಕಾಮಗಾರಿ ಕೈಗೊಳ್ಳಬೇಕು ಎಂದು ಎಂ.ವಿರೂಪಾಕ್ಷಿ ಒತ್ತಾಯಿಸಿದರು. ಪ್ರಮುಖರಾದ ಯೂಸೂಫ್ ಖಾನ್, ರಾಮನಗೌಡ ಏಗನೂರು, ಅಕ್ಬರ್ ಹುಸೇನ್ ನಾಗುಂಡಿ, ರಾಮು ಇದ್ದರು.