ಗೊರೇಬಾಳ: ಗ್ರಾಮದ ರಸಗೊಬ್ಬರ ಮಾರಾಟ ಅಂಗಡಿಯೊಂದರಲ್ಲಿ ಸಿಂಧನೂರು ಅಗ್ರಿ ಸ್ಟೋರ್ಸ್ ಮತ್ತು ಅಗ್ರಿಕಲ್ಚರಲ್ ಅಸೋಸಿಯೇಷನ್ ಸಭೆ ಆಯೋಜಿಸಲಾಗಿತ್ತು.
ರೈತರು ಭತ್ತ ನಾಟಿ ಮಾಡಿದ್ದು, ರಾಯಚೂರಿನಿಂದ ರಸಗೊಬ್ಬರ ಬರುತ್ತಿದ್ದರೂ ವಿತರಕರಿಗೆ ಸರಿಯಾಗಿ ಸಿಗುತ್ತಿಲ್ಲ. ರೈತರಿಗೆ ಡಿಎಪಿ, ಯೂರಿಯಾ ಅಗತ್ಯವಾಗಿದ್ದು, ಸಕಾಲಕ್ಕೆ ದೊರೆಯದ ಕಾರಣ ರೈತರು ಸಂಕಷ್ಟ ಎದುರಿಸುವಂತಾಗಿದೆ. ಗಂಗಾವತಿಯಿಂದ ರಸಗೊಬ್ಬರ. ಸರಬರಾಜು ಮಾಡುವಂತೆ ಸಂಸದ ಸಂಗಣ್ಣ ಕರಡಿಗೆ ಸಂಘದಿಂದ ಮನವಿ ಸಲ್ಲಿಸಲಾಯಿತು.
ಸಂಸದ ಸಂಗಣ್ಣ ಕರಡಿ ದೂರವಾಣಿ ಮೂಲಕ ಅಧಿಕಾರಿಗಳೊಂದಿಗೆ ಮಾತನಾಡಿ, ಸಿಂಧನೂರು ತಾಲೂಕಿಗೆ ಡಿಎಪಿ ಮತ್ತು ಯೂರಿಯಾ ರಸಗೊಬ್ಬರ ಕಳುಹಿಸುವಂತೆ ಸೂಚಿಸಿದರು. ಅಧಿಕಾರಿಗಳೊಂದಿಗೆ ಚರ್ಚಿಸಿ ಗಂಗಾವತಿ ಮೂಲಕ ಸಿಂಧನೂರಿಗೆ ರಸಗೊಬ್ಬರ ಪೂರೈಸಲು ಶೀಘ್ರ ಕ್ರಮಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ರೈತರಿಗೆ ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು.