ರಾಯಚೂರು: ಮುಂಗಾರು ಮಳೆ ವಿಫಲವಾಗಿ ರೈತರು ಸಂಕಷ್ಟದಲ್ಲಿದ್ದು ಸರ್ಕಾರ ಕೂಡಲೇ ಬರ ಪರಿಹಾರ ಕಾಮಗಾರಿ ಕೈಗೆತ್ತಿಕೊಳ್ಳುವುದರ ಜತೆಗೆ ರೈತರಿಗೆ ಎಕರೆಗೆ 35 ಸಾವಿರ ರೂ. ಬೆಳೆ ನಷ್ಟ ಪರಿಹಾರ ನೀಡಬೇಕು ಎಂದು ಲೋಕ ಜನಶಕ್ತಿ ಒತ್ತಾಯಿಸಿದೆ.
ಪಕ್ಷದ ನಿಯೋಗ ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಮಹ್ಮದ್ ಅನೀಫ್ಗೆ ಗುರುವಾರ ಮನವಿ ಸಲ್ಲಿಸಿ, ಸರ್ಕಾರ ಕೇವಲ ಬರ ತಾಲೂಕು ಘೋಷಣೆ ಮಾಡಿ ಸುಮ್ಮನಾಗಿದ್ದು, ಯಾವುದೇ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳುತ್ತಿಲ್ಲ ಎಂದು ದೂರಿದರು.
ಇದನ್ನೂ ಓದಿ: ಬಿಜೆಪಿ ಬರ ಅಧ್ಯಯನ ಪ್ರವಾಸದ ಎಫೆಕ್ಟ್, ತಿಕೋಟಾ ಬರಪೀಡಿತ ಪಟ್ಟಿಗೆ ಸೇರ್ಪಡೆ, ಏನಿದು ಅಚ್ಚರಿ?
ಜನರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗುವ ಸಾಧ್ಯತೆಯಿದ್ದು, ಸಮಸ್ಯೆ ನಿವಾರಣೆಗೆ ಕ್ರಮಕೈಗೊಳ್ಳಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಕಾರ್ಮಿಕರಿಗೆ 200 ದಿನಗಳ ಕೆಲಸ ಒದಗಿಸಬೇಕು. ಕೂಲಿಯನ್ನು 600 ರೂ.ಗೆ ಹೆಚ್ಚಿಸಬೇಕು.
ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಲು ಎನ್ಡಿಆರ್ಎಫ್ ಮಾನದಂಡವನ್ನು ಮಾರ್ಪಾಡು ಮಾಡಬೇಕು. ಅಂತರ್ಜಲ ವೃದ್ಧಿಗೆ ಕ್ರಮಕೈಗೊಳ್ಳಬೇಕು. ತುಂಗಭದ್ರಾ ಎಡದಂಡೆ ಕಾಲುವೆ ಕೊನೆಭಾಗಕ್ಕೆ ನೀರು ಹರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿತು.