ರಾಯಚೂರು: ಸರ್ಕಾರದ ಯಾವುದೇ ಯೋಜನೆಗಳು ಹಾಗೂ ಕಾಮಗಾರಿಗಳು ಯಶಸ್ವಿಯಾಗಿ ಜಾರಿಗೊಳಿಸಲು ಅಧಿಕಾರಿಗಳ ಪಾತ್ರ ಬಹುಮುಖ್ಯ. ಅಧಿಕಾರಿಗಳು ಕಾರ್ಯದಕ್ಷತೆಯಿಂದ ಕೆಲಸ ಮಾಡಿದಲ್ಲಿ ಸಮಗ್ರ ಅಭಿವೃದ್ದಿ ಸಾಧ್ಯ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.
ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘ ಗುರುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಹಾಗೂ ಸರ್ವೋತ್ತಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗದ ಜತೆಗೆ ಪತ್ರಿಕಾರಂಗವು ಕೈ ಜೋಡಿಸಿ ಕೆಲಸ ಮಾಡಿದಾಗ ದೇಶದ ಅಭಿವೃದ್ಧಿ ಸಾಧ್ಯವಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಜಾರಿಗೆ ತಂದರೆ ಅವುಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸುವ ಕೆಲಸ ಸರ್ಕಾರಿ ನೌಕರರ ಮಾಡುತ್ತಿದ್ದಾರೆ. ಇದರಿಂದ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ. ದೇಶದಲ್ಲಿ ವಿವಿಧ ಜಾತಿ, ಧರ್ಮಗಳಿದ್ದರೂ ಎಲ್ಲರೂ ಒಂದೇ ಎಂಬ ಭಾವದೊಂದಿಗೆ ಅಭಿವೃದ್ಧಿಯತ್ತ ಕೊಂಡ್ಯೊಯುವ ಕೆಲಸ ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿದ್ದಾರೆ. ಸರ್ಕಾರಿ ನೌಕರರ ಯಾವುದೇ ಕೆಲಸವನ್ನು ತಾರತಮ್ಯ ಮಾಡದೆ ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದರು.
ಶಾಸಕ ಶಿವರಾಜ ಪಾಟೀಲ್ ಮಾತನಾಡಿ, ಸರ್ಕಾರವೇ ಸರ್ಕಾರದ ನೌಕರರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ. ಯಾವುದೇ ಕಾನೂನುಗಳು ಜಾರಿಯಾಗಲು ಅಧಿಕಾರಿಗಳು ಸಹಿ ಮಾಡಿದಾಗ ಮಾತ್ರ ಜಾರಿಗೆ ಬರುತ್ತಿದೆ. ಜನಪ್ರತಿನಿಧಿಗಳು ಐದು ವಷರ್ಕ್ಕೊಮ್ಮೆ ಬದಲಾವಣೆಯಾಗುತ್ತಾರೆ. ನೌಕರರು ಬದಲಾಗುವುದಿಲ್ಲ. ನೌಕರರು ಜನಪ್ರತಿನಿಧಿಗಳು ಒತ್ತಡ ಹಾಕಿದಾಗ ಕೆಲಸ ಮಾಡದೆ ಪ್ರಾಮಾಣಿಕ ಕೆಲಸ ಮಾಡಬೇಕು ಎಂದು ತಿಳಿಸಿದರು.
ಈ ವೇಳೆ ಉತ್ತಮ ಸೇವೆ ಸಲ್ಲಿಸಿದ ಲಿಂಗಸೂಗೂರು ಸಹಾಯಕ ಆಯುಕ್ತ ರಾಹುಲ್ ಸಂಕನೂರು, ದೇವದುರ್ಗ ತಹಸೀಲ್ದಾರ್ ಶ್ರೀನಿವಾಸ್ ಚಾಪೇಲ್ಗೆ ಸರ್ಮೋತ್ತಮ ಪ್ರಶಸ್ತಿ, ಡಿಎಚ್ಒ ಡಾ.ರಾಮಕೃಷ್ಣ, ವೆಂಕಟೇಶ ನಾಯಕ, ತಾಂತ್ರಿಕ ಇಲಾಖೆ ಸದಾಶಿವಪ್ಪ, ಜಿಪಂ ಯೋಜನಾಧಿಕಾರಿ ಮುಡೋಳಪ್ಪ, ನಗರಸಭೆ ಪೌರಾಯುಕ್ತ ಮುನಿಸ್ವಾಮಿ, ಪಶು ಸಂಗೋಪನಾ ಇಲಾಖೆ ಹಿರಿಯ ಪರಿವೀಕ್ಷಕ ಮಹಿಬೂಬ್ರನ್ನು ಸನ್ಮಾನಿಸಲಾಯಿತು.
ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಳ ಆಂಜನೇಯ, ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ, ಜಿಪಂ ಸಿಇಒ ನೂರ್ ಜಹಾರ್ ಖಾನಂ, ಎಸ್ಪಿ ಬಿ.ನಿಖಿಲ್, ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್.ದುರುಗೇಶ, ಜಿಪಂ ಉಪ ಕಾರ್ಯದರ್ಶಿ ಶಶಿಕಾಂತ್ ಶಿವಪೂರೆ ಇತರರಿದ್ದರು.