ರಾಯಚೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಕೆ.ಚಂದ್ರಶೇಖರ ನಾಯಕ ನೇತೃತ್ವದಲ್ಲಿ ತಾಲೂಕಿನ ಗಿಲ್ಲೆಸುಗೂರಿನಿಂದ ಪಂಚಮುಖಿ ಗಾಣಧಾಳವರೆಗೆ ಮಂಗಳವಾರ ಪಾದಯಾತ್ರೆ ನಡೆಸಲಾಯಿತು.
ಪಂಚಮುಖಿ ದೇವಸ್ಥಾನದ ಆವರಣದಲ್ಲಿ ಜರುಗಿದ ಬಹಿರಂಗ ಸಭೆಯಲ್ಲಿ ಕೆ.ಚಂದ್ರಶೇಖರ ನಾಯಕ, ಕ್ಷೇತ್ರದ ಎರಡು ಬದಿಯಲ್ಲಿ ನದಿಗಳಿದ್ದರೂ ರೈತರಿಗೆ ಸಮರ್ಪಕ ನೀರು ದೊರೆಯುತ್ತಿಲ್ಲ. ರಾಜ್ಯಕ್ಕೆ ವಿದ್ಯುತ್ ನೀಡುವ ಆರ್ಟಿಪಿಎಸ್, ವೈಟಿಪಿಎಸ್ ಇದ್ದರೂ ಜನರಿಗೆ ಸಮರ್ಪಕ ವಿದ್ಯುತ್ ದೊರೆಯುತ್ತಿಲ್ಲ.
ಕ್ಷೇತ್ರದಲ್ಲಿ ಹೊರಗಿನವರು ಶಾಸಕರಾಗಿ ಆಯ್ಕೆಯಾಗುತ್ತಿರುವುದರಿಂದ ಕ್ಷೇತ್ರದ ಅಭಿವೃದ್ಧಿ ಸಾಧ್ಯವಾಗಿಲ್ಲ. ಸ್ಥಳೀಯರಿಗೆ ಅವಕಾಶ ದೊರೆತರೆ ಮಾತ್ರ ಕ್ಷೇತ್ರದ ಅಭಿವೃದ್ಧಿ ಸಾಧ್ಯವಾಗಲಿದ್ದು, ಮುಂಬರುವ ಚುನಾವಣೆಯಲ್ಲಿ ಪಕ್ಷದ ವರಿಷ್ಠರು ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂದರು.
ಹಿರಿಯ ನ್ಯಾಯವಾದಿ ದೇವಣ್ಣ ನಾಯಕ, ಎಪಿಎಂಸಿ ಮಾಜಿ ಅಧ್ಯಕ್ಷ ನರಸನಗೌಡ, ಮುಖಂಡರಾದ ಬಷೀರುದ್ದೀನ್, ಹನುಮಂತು ಜೂಕೂರು, ಎಂ.ವಸಂತಕುಮಾರ, ಸಿದ್ದಪ್ಪಗೌಡ, ಅಬ್ದುಲ್ ಹಮೀದ್, ಶಕೀಲ್ ಅನ್ಸಾರಿ, ಚಾಂದ್ಪಾಷಾ ಇತರರಿದ್ದರು.