ಶಿಸ್ತು, ಸಂಯಮ ಹಾಗೂ ನಿಸ್ವಾರ್ಥ ಸೇವೆ ಮುಖ್ಯ
ರಾಯಚೂರು: ಉತ್ತಮ ಪ್ರಜೆಗಳನ್ನು ರೂಪಿಸುವ ಶಕ್ತಿ ಶಿಕ್ಷಕರ ಕೈಯಲ್ಲಿದೆ. ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ದೊಡ್ಡದು ಎಂದು ನಿವೃತ್ತ ಪ್ರಾಚಾರ್ಯ ಗೀತಾ ಬಡಿಗೇರ್ ಹೇಳಿದರು.
ನಗರದಲ್ಲಿ ರೋಟರಿ ಕ್ಲಬ್, ಇನ್ನರ್ ವೀಲ್ ಕ್ಲಬ್ನಿಂದ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಭಾನುವಾರ ಮಾತನಾಡಿದರು. ಶಿಕ್ಷಣ ಒಂದು ನೋಬೆಲ್ ಪ್ರಶಸ್ತಿ ಇದ್ದಂತೆ. ಉತ್ತಮ ಸಮಾಜ ಕಟ್ಟುವಲ್ಲಿ ಶಿಕ್ಷಕರ ಶ್ರಮ ಅತ್ಯಂತ ಮಹತ್ವದಾಗಿದೆ. ಇಂದು ಶಿಕ್ಷಣ ವ್ಯವಸ್ಥೆ ವ್ಯಾಪಾರೀಕರಣವಾಗುತ್ತಿದೆ. ಶಿಕ್ಷಕರು ಸಹ ವೇತನಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ಉತ್ತಮ ವಿದ್ಯಾರ್ಥಿಗಳ ತಯಾರು ಮಾಡಲಾಗುತ್ತಿಲ್ಲ. ಪ್ರತಿ ಶಿಕ್ಷಕರು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕಾಗಿದೆ. ಶಿಸ್ತು, ಸಂಯಮ ಹಾಗೂ ನಿಸ್ವಾರ್ಥ ಸೇವೆ ಮುಖ್ಯವಾಗಿರಬೇಕು ಎಂದರು.
ಕ್ಲಬ್ ಗೌರವಾಧ್ಯಕ್ಷ ಶಿವಶಂಕರ್ ವಕೀಲ ಮಾತನಾಡಿ, ರೋಟರಿ ಕ್ಲಬ್ನಿಂದ ಸರ್ಕಾರಿ ಶಾಲೆಗಳಿಗೆ ಗಣಿತ ಮತ್ತು ವಿಜ್ಞಾನ ಸೇರಿ ಇತರ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ವಿದ್ಯಾರ್ಥಿಗಳಿಲ್ಲಿ ಕಂಪ್ಯೂಟರ್ ಜ್ಞಾನ ಹೆಚ್ಚಿಸಲು 15 ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್ಗಳನ್ನು ವಿತರಣೆ ಮಾಡಲಾಗಿದೆ ಎಂದರು. ಕ್ಲಬ್ ಅಧ್ಯಕ್ಷ ವಿಜಯ ಸಜ್ಜನ್ ಮಾತನಾಡಿದರು. ಈ ವೇಳೆ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.