ರಾಯಚೂರು: ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗುತ್ತಿರುವ ಐಐಐಟಿ ಸ್ಥಾಪನೆಗೆ ಸುಮಾರು 125 ಕೋಟಿ ರೂ. ಅಗತ್ಯ ಎನ್ನುವ ಅಂದಾಜಿದ್ದು. ಹಂತ ಹಂತವಾಗಿ ಶೇ.50 ರಷ್ಟು ರಾಜ್ಯ ಸರ್ಕಾರ ನೆರವು ನೀಡಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ತಿಳಿಸಿದರು.
ತಾಲೂಕಿನ ವಡವಾಟಿ ಸೀಮಾಂತರದಲ್ಲಿನ ಐಐಐಟಿ ಸ್ಥಾಪನೆ ಉದ್ದೇಶಿತ ಭೂಮಿ ಪರಿಶೀಲಿಸಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಈಗಾಗಲೆ ಹೈದರಾಬಾದ್ನಲ್ಲಿ ರಾಯಚೂರಿನ ಐಐಐಟಿ ಸ್ಥಾಪಿಸಿ, 30 ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗಿದೆ. ಶಾಶ್ವತ ಸಂಸ್ಥೆ ಆರಂಭಕ್ಕೆ ಅಗತ್ಯ ಕಟ್ಟಡ, ಮೂಲಸೌಕರ್ಯಗಳಿಗಾಗಿ 125ಕೋಟಿ ರೂ. ಪ್ರಸ್ತಾವನೆಯಲ್ಲಿ ಶೇ.50 ಅನುದಾನ ರಾಜ್ಯದ ವಂತಿಗೆ ರೂಪದಲ್ಲಿ ನೀಡಲಿದೆ ಎಂದರು.
ತಾತ್ಕಾಲಿಕವಾಗಿ ಈ ವರ್ಷದಿಂದಲೇ ರಾಯಚೂರಲ್ಲೇ ಆರಂಭಿಸಲು ನಿರ್ಧರಿಸಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ಕಟ್ಟಡದಲ್ಲಿ ಸಿದ್ಧತೆ ನಡೆಯುತ್ತಿದೆ. ವಾರ್ಷಿಕವಾಗಿ 11 ಕೋಟಿ ರೂ. ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ಒದಗಿಸಿದರೆ, ಸಿಬ್ಬಂದಿ, ವಿದ್ಯಾರ್ಥಿಗಳಿಗೆ ತುರ್ತು ಸೌಲಭ್ಯಕ್ಕಾಗಿ ಕ.ಕ. ಮಂಡಳಿಯಿಂದ 2.50 ಕೋಟಿ ರೂ. ಅನುದಾನ ಒದಗಿಸಲು ಸೂಚಿಸಲಾಗಿದೆ ಎಂದರು. ಸ್ಟಾರ್ಟ್ಪ್ಗಳ ಉದ್ಯಮ ಚೇತನಗೊಳ್ಳಲು ಐಐಐಟಿ ಉತ್ತಮ ವೇದಿಕೆ ಆಗುವ ನಿರೀಕ್ಷೆ ಇದೆ. ಕೌಶಲ ತರಬೇತಿ, ಐಐಐಟಿ ಸಂಸ್ಥೆಗಾಗಿ ನಗರದ ಮಧ್ಯದಲ್ಲಿ ಕ್ಯಾಂಪಸ್ ಆರಂಭಿಸಲು ಸ್ಥಳ ನೀಡಲು ಶಾಸಕರು ಮುಂದೆ ಬರಬೇಕು ಎಂದರು.
ಶಾಸಕ ಡಾ. ಶಿವರಾಜ ಪಾಟೀಲ್, ಸಂಸದ ರಾಜಾ ಅಮರೇಶ್ವರ ನಾಯಕ, ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿ, ಡಿಸಿ ಆರ್.ವೆಂಕಟೇಶ ಕುಮಾರ್, ಸಿಇಒ ಜಿ.ಲಕ್ಷ್ಮಿಕಾಂತರಡ್ಡಿ, ವಿವಿ ವಿಶೇಷಾಧಿಕಾರಿ ಮುಜಾಫರ ಅಸಾದಿ ಇತರರಿದ್ದರು.