ಚಂಡೀಗಢ: ಸಂಸತ್ತಿನಲ್ಲಿ ಕೃಷಿ ಮಸೂದೆಗಳು ಮಂಡನೆಯಾಗುವ ಸಂದರ್ಭದಲ್ಲಿ ಹಾಜರಿರದೇ ಈಗ ಪ್ರತಿಭಟನೆ ಮಾಡ್ತಾ ಇರೋದೇಕೆ ಎಂದು ಶಿರೋಮಣಿ ಅಕಾಲಿ ದಳದ ನಾಯಕರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ನಡೆಯನ್ನು ಪ್ರಶ್ನಿಸಿದ್ದರು. ಕಾಂಗ್ರೆಸ್ ಪಕ್ಷ ಪಂಜಾಬ್ನಲ್ಲಿ ನಡೆಸುತ್ತಿರುವ ಪ್ರತಿಭಟನೆ, ಕೃಷಿ ಜಾಥಾವನ್ನು ಟೀಕಿಸುತ್ತಲೇ ಬಂದಿರುವ ಅಕಾಲಿದಳದ ನಾಯಕರು, ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಇದಕ್ಕೆ ರಾಹುಲ್ ಗಾಂಧಿ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.
ಖೇತಿ ಬಚಾವೋ ಯಾತ್ರೆಯಲ್ಲಿ ಪಾಲ್ಗೊಳ್ಳುವುದಕ್ಕೆ ಪಂಜಾಬ್ಗೆ ಆಗಮಿಸಿರುವ ರಾಹುಲ್ ಗಾಂಧಿ, ಕೃಷಿ ಮಸೂದೆ ಬಗ್ಗೆ ಕಾಂಗ್ರೆಸ್ ಪಕ್ಷದ ವಿರೋಧವಿದೆ. ಸಂಸತ್ತಿನ ಮುಂಗಾರು ಅಧಿವೇಶನದ ವೇಳೆ ಮಸೂದೆ ಮಂಡನೆಯಾಗುವ ಸಂದರ್ಭದಲ್ಲಿ ಭಾಗವಹಿಸುವುದು ಸಾಧ್ಯವಾಗಲಿಲ್ಲ. ಯಾಕೆಂದರೆ ನಾನೂ ಒಬ್ಬ ಮಗ, ನನ್ನ ತಾಯಿಯ ಆರೋಗ್ಯವನ್ನೂ ಗಮನಿಸುವ ಹೊಣೆಗಾರಿಕೆಯೂ ನನಗಿದೆ ಎಂದು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.
ಇದನ್ನು ಓದಿ: ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಬಳಿ ಕ್ಷಮೆ ಯಾಚಿಸಿದ ಉತ್ತರ ಪ್ರದೇಶ ಪೊಲೀಸರು
ತಾಯಿಯವರನ್ನು ಮೆಡಿಕಲ್ ಚೆಕ್ಅಪ್ಗೆ ಕರೆದೊಯ್ಯಬೇಕಿತ್ತು. ನನ್ನ ತಂಗಿಯ ಸಿಬ್ಬಂದಿಗೆ ಕರೊನಾ ಬಂದ ಕಾರಣ, ಆಕೆ ಅಮ್ಮನ ಜತೆಗೆ ತೆರಳುವುದು ಸಾಧ್ಯವಾಗಲಿಲ್ಲ. ಹೀಗಾಗಿ ನಾನು ತೆರಳಬೇಕಾಗಿ ಬಂತು. ನಾನು ಅವರ ಮಗನಾಗಿ ಅಷ್ಟೂ ಮಾಡದಿದ್ದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. (ಏಜೆನ್ಸೀಸ್)