ನವದೆಹಲಿ: ಭಾರತ ಎ ಮತ್ತು ಕಿರಿಯರ ತಂಡದ ಕೋಚ್ ಆಗಿ ಉತ್ತಮ ಯಶಸ್ಸು ಕಂಡಿರುವ ಕಲಾತ್ಮಕ ಬ್ಯಾಟ್ಸ್ಮನ್ ರಾಹುಲ್ ದ್ರಾವಿಡ್, ಅವರಿಗೆ ಭಾರತ ತಂಡದ ತರಬೇತುದಾರರಾಗುವ ಆಫರ್ ಕೂಡ ನೀಡಲಾಗಿತ್ತು. ಮತ್ತೋರ್ವ ಕನ್ನಡಿಗ ಅನಿಲ್ ಕುಂಬ್ಳೆ ಕೋಚ್ ಸ್ಥಾನ ತ್ಯಜಿಸಿದ ಬಳಿಕ ದ್ರಾವಿಡ್ಗೆ ಟೀಮ್ ಇಂಡಿಯಾದ ಕೋಚ್ ಆಗುವಂತೆ ಬಿಸಿಸಿಐನ ಆಗಿನ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಆಹ್ವಾನ ನೀಡಿತ್ತು. ಆದರೆ ದ್ರಾವಿಡ್ ಅದನ್ನು ನಿರಾಕರಿಸಿದ್ದರು. ಯಾಕೆ ಗೊತ್ತೆ?
‘ನನಗೆ ಚಿಕ್ಕ ವಯಸ್ಸಿನ ಇಬ್ಬರು ಮಕ್ಕಳಿದ್ದಾರೆ. ಭಾರತ ತಂಡದ ಜತೆಗೆ ವಿಶ್ವದೆಲ್ಲೆಡೆ ಪ್ರಯಾಣಿಸುತ್ತಿದ್ದರೆ ಅವರಿಗೆ ಸಮಯ ಮತ್ತು ಗಮನ ನೀಡಲು ಸಾಧ್ಯವಾಗುವುದಿಲ್ಲ. ನಾನೀಗ ಮನೆಯಲ್ಲೇ ಹೆಚ್ಚು ಸಮಯವನ್ನು ಕಳೆಯುವುದು ಅಗತ್ಯವಾಗಿದೆ. ಕುಟುಂಬಕ್ಕೆ ಹೆಚ್ಚಿನ ಸಮಯ ನೀಡಲು ಇಷ್ಟಪಡುತ್ತೇನೆ’ ಎಂದು ದ್ರಾವಿಡ್ ಕೋಚ್ ಹುದ್ದೆಯ ಆಫರ್ ನಿರಾಕರಿಸಿದ್ದರು ಎಂದು ಸಿಒಎ ಮುಖ್ಯಸ್ಥರಾಗಿದ್ದ ವಿನೋದ್ ರಾಯ್ ತಿಳಿಸಿದ್ದಾರೆ.
ಇದನ್ನೂ ಓದಿ: VIDEOS | ಧೋನಿ ಬಗ್ಗೆ ಬ್ರಾವೊ ಹಾಡು, ಅಭಿಮಾನಿಗಳಿಂದ ಹೆಲಿಕಾಪ್ಟರ್ ಡ್ಯಾನ್ಸ್!
‘ದ್ರಾವಿಡ್ ಅವರಿಗೆ ನ್ಯಾಯೋಚಿತ ಮನವಿ ಸಲ್ಲಿಸಲಾಗಿತ್ತು. ಅವರು ಟೀಮ್ ಇಂಡಿಯಾದ ಕೋಚ್ ಹುದ್ದೆಗೆ ಅರ್ಹ ವ್ಯಕ್ತಿ’ ಎಂದು ವಿನೋದ್ ರಾಯ್ ತಿಳಿಸಿದ್ದಾರೆ. ಆದರೆ ದ್ರಾವಿಡ್ ನಿರಾಕರಿಸಿದ ಬಳಿಕ ರವಿಶಾಸ್ತ್ರಿ ಅವರನ್ನು ನೇಮಿಸಿಕೊಳ್ಳಲು ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ನಿರ್ಧರಿಸಿತು. ದ್ರಾವಿಡ್ ಈಗ ತವರೂರು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿದ್ದಾರೆ.