ಶಿವಮೊಗ್ಗ: ನಗರದ ಹೊರವಲಯದ ರಾಗಿಗುಡ್ಡದಲ್ಲಿ ಬುಧವಾರ ರಾತ್ರಿ ನಡೆದ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಕುಡಿದ ಮತ್ತಿನಲ್ಲಿ ತಳ್ಳಾಟದಲ್ಲಿ ಬಿದ್ದು ಯುವಕ ಗಾಯಗೊಂಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ರಾಗಿಗುಡ್ಡದ ಬಶೀರ್ ನಜೀರ್ ಅಹಮ್ಮದ್ ಗಾಯಗೊಂಡವ. ಈತನ ತಲೆಗೆ ಗಂಭೀರ ಗಾಯವಾಗಿದ್ದು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅನ್ಯ ಕೋಮಿನ ನಾಲ್ವರು ಹಲ್ಲೆ ನಡೆಸಿ ಆಟೋದಲ್ಲಿ ಪರಾರಿಯಾಗಿದ್ದಾಗಿ ಪೊಲೀಸರ ಎದುರು ಬಶೀರ್ ಹೇಳಿಕೆ ನೀಡಿದ್ದ. ಈ ವಿಷಯ ಎಲ್ಲೆಡೆ ಹರಡಿ ರಾಗಿಗುಡ್ಡ, ಶಾಂತಿನಗರ ಭಾಗದಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು.
ಘಟನೆ ಬೆನ್ನಲ್ಲೇ ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಿದ್ದಿದೆ. ಬುಧವಾರ ರಾತ್ರಿ ರಾಗಿಗುಡ್ಡದ ವೈನ್ಸ್ ಎದುರು ನಿಂತಿದ್ದ ಬಶೀರ್ ಮತ್ತು ನಾಲ್ವರ ನಡುವೆ ಗಲಾಟೆ ನಡೆದಿದ್ದು ತಳ್ಳಾಟದಲ್ಲಿ ಬಶೀರ್ ಕೆಳಗೆ ಬಿದ್ದು ಗಾಯಗೊಂಡಿದ್ದಾನೆ. ಇದು ಪೊಲೀಸರು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಶಾಂತಿನಗರ, ರಾಗಿಗುಡ್ಡ ಭಾಗದಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.