ರಬಕವಿ/ಬನಹಟ್ಟಿ: ದೈನಂದಿನ ನಾಗಾಲೋಟದ ಬದುಕಿಗೆ ಅಧ್ಯಾತ್ಮದ ಅರಿವು ಬಹು ಮುಖ್ಯವಾಗಿ ಬೇಕಾಗಿದೆ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ತಿಳಿಸಿದರು.
ರಬಕವಿ ನಗರದ ಡಾ.ಪದ್ಮಜೀತ ನಾಡಗೌಡಪಾಟೀಲ ಅವರ ತ್ರಿಷಲಾದೇವಿ ನೇತ್ರ ತಪಾಸಣೆ ಆಸ್ಪತ್ರೆಯಲ್ಲಿ ಇತ್ತೀಚೆಗೆ ಪಾದಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರೈತರು ಹೆಚ್ಚಿನ ಪ್ರಮಾಣದಲ್ಲಿ ಸಾವಯವ ಕೃಷಿಯತ್ತ ಗಮನ ಹರಿಸಬೇಕು. ಪರಿಸರ ಹಾಳು ಮಾಡುವಂತಹ ವಿಷಕಾರಿಕ ಔಷಧ ಬಳಸಿ ಭೂಮಿಯನ್ನು ಹಾಳು ಮಾಡಬಾರದು. ಕರೊನಾಗೆ ಯಾರೂ ಭಯಪಡಬಾರದು. ಉತ್ತಮ ಆಹಾರ, ಹಸಿ ತಪ್ಪಲು, ನೆನಸಿಟ್ಟ ಕಾಳು, ಬಿಸಿ ನೀರು ಹಾಗೂ ಬಿಸಿ ತಿಂಡಿ ತಿನ್ನುವುದು ಸೂಕ್ತ. ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು. ತಂದೆ-ತಾಯಿಗಳ ಸೇವೆ ಮಾಡಿದರೆ ಶಿವ-ಪಾರ್ವತಿಯರ ಸೇವೆ ಮಾಡಿದಷ್ಟೆ ಸಮವಾಗುತ್ತದೆ ಎಂದು ಹೇಳಿದರು.
ಇರುವಷ್ಟು ದಿನ ಸಮಾಜ ಸೇವೆ ಮಾಡಿ ಸಮಾಜಕ್ಕೆ ಏನಾದರೂ ಕೊಡುಗೆ ಕೊಟ್ಟು ಹೋದರೆ ಬಹುಕಾಲ ಜನರ ಮನಸ್ಸಿನಲ್ಲಿ ಉಳಿಯುತ್ತೀರಿ. ದಾನ, ಧರ್ಮ, ಬಡವರ ಸೇವೆ, ಅನ್ನದಾನ ಸೇರಿ ಬಡವರಿಗೆ ಕೈಲಾದಷ್ಟು ಸಹಾಯ ಮಾಡಿದರೆ ನಿಮ್ಮ ಜೀವನ ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ನಾಡಗೌಡಪಾಟೀಲರ ಸೇವೆ ಅನನ್ಯ. ಅವರ ಬಡವರ ಸೇವೆ ಹೀಗೆಯೇ ಮುಂದುವರಿಯಲಿ ಎಂದುಶ್ರೀಗಳು ಆಶೀರ್ವದಿಸಿದರು.
ಡಾ.ಪದ್ಮಜೀತ ನಾಡಗೌಡಪಾಟೀಲ ದಂಪತಿ ಶ್ರೀಗಳ ಪಾದಪೂಜೆ ನೆರವೇರಿಸಿದರು. ಮುತ್ತುಸ್ವಾಮಿ ಹಿರೇಮಠ, ಮಹಾದೇವ ದುಪದಾಳ, ಜಿನ್ನಪ್ಪ ಪಡ್ನಾಡ, ಸಂಜಯ ಅಮ್ಮಣಗಿಮಠ. ಶಿವಾನಂದ ದಾಶಾಳ ಸೇರಿ ಅನೇಕರಿದ್ದರು.