ಲಖನೌ: ನೋಯ್ಡಾದ ಹೌಸಿಂಗ್ ಸೊಸೈಟಿಯಲ್ಲಿ ಮಹಿಳೆಯೊಬ್ಬರ ಮೇಲೆ ಕೈ ಮಾಡಿದ ಬಿಜೆಪಿ ನಾಯಕನನ್ನು ತಕ್ಷಣ ಬಂಧಿಸುವಂತೆ ರಾಷ್ಟ್ರೀಯ ಮಹಿಳಾ ಆಯೊಗ (ಎನ್ಸಿಡಬ್ಲ್ಯು) ಆಗ್ರಹಿಸಿದೆ.
ಈ ಘಟನೆ ಸಂಬಂಧ ಸೂಕ್ತ, ಸರಿಯಾದ ಹಾಗೂ ಶೀಘ್ರ ತನಿಖೆ ನಡೆಸುವಂತೆ ಉತ್ತರ ಪ್ರದೇಶದ ಡಿಜಿಪಿಗೆ ಎನ್ಸಿಡಬ್ಲ್ಯು ಮುಖ್ಯಸ್ಥೆ ರೇಖಾ ಶರ್ಮಾ ಅವರು ನಿರ್ದೇಶನ ನೀಡಿದ್ದಾರೆ. ಅಲ್ಲದೆ, ಬಿಜೆಪಿ ನಾಯಕನ ವಿರುದ್ಧ ಎಫ್ಐಆರ್ ದಾಖಲಿಸಿ, ಬಂಧಿಸುವಂತೆ ಆಯೋಗ ಕೇಳಿದೆ.
ನಡೆದಿದ್ದೇನು?
ಬಿಜೆಪಿ ನಾಯಕ ಶ್ರೀಕಾಂತ್ ತ್ಯಾಗಿ ವಿರುದ್ಧ ಆಗಸ್ಟ್ 5ರಂದ ನೊಯ್ಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನೊಯ್ಡಾ ಸೆಕ್ಟರ್-93ಬಿನಲ್ಲಿರುವ ಗ್ರಾಂಡ್ ಒಮ್ಯಾಕ್ಸಿ ಸೊಸೈಟಿಯ ಮಹಿಳಾ ನಿವಾಸಿಯೊಬ್ಬರನ್ನು ನಿಂದಿಸಿ, ಹಲ್ಲೆ ಮಾಡಿರುವ ಸಂಬಂಧ ಪ್ರಕರಣ ದಾಖಲಾಗಿದೆ. ಆದರೆ, ಈವರೆಗೂ ಆರೋಪಿಯ ಬಂಧನವಾಗಿಲ್ಲ. ಆರೋಪಿ ಪ್ರಭಾವಿ ಆಗಿರುವುದರಿಂದ ಬಂಧಿಸಲು ಪೊಲೀಸ್ ಸಿಬ್ಬಂದಿ ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪವಿದೆ. ಈ ಹಿನ್ನೆಲೆ ಮಹಿಳಾ ಆಯೋಗ ಮಧ್ಯ ಪ್ರವೇಶಿಸಿದೆ.
ಗ್ರಾಂಡ್ ಒಮ್ಯಾಕ್ಸಿ ಸೊಸೈಟಿಯಲ್ಲಿ ಶ್ರೀಕಾಂತ್ ತ್ಯಾಗಿ ಅವರು ಕೆಲವು ಮರಗಳನ್ನು ನೆಡುವುದನ್ನು ಮಹಿಳೆ ಆಕ್ಷೇಪಿಸಿದ್ದರು. ಇದು ನಿಯಮಗಳಿಗೆ ವಿರುದ್ಧವಾಗಿದೆ ಎಂದು ಮಹಿಳೆ ಹೇಳಿದರೂ, ಹೀಗೆ ಮಾಡಲು ನನಗೂ ಹಕ್ಕಿದೆ ಎಂದು ಬಿಜೆಪಿ ನಾಯಕ ವಾದಿಸಿದ್ದ. ಬಳಿಕ ಇಬ್ಬರ ನಡುವೆ ಮಾತಿಗೆ ಮಾತಿಗೆ ಬೆಳೆದು ವಾಗ್ವಾದವೇ ಶುರುವಾಯಿತು. ತಾಳ್ಮೆ ಕಳೆದುಕೊಂಡು ತ್ಯಾಗಿ ಮಹಿಳೆಯನ್ನು ಕೆಟ್ಟ ಪದಗಳಿಂದ ನಿಂದಿಸಿದ್ದಾರೆ ಎಂಬ ಆರೋಪವಿದೆ. ಅಲ್ಲದೆ, ಮಹಿಳೆ ತ್ಯಾಗಿ ವಿರುದ್ಧ ಪ್ರತಿಭಟಿಸಲು ಆರಂಭಿಸಿದಾಗ ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತ್ಯಾಗಿ ವಿರುದ್ಧ ಆಕ್ರೋಶಗಳ ಸುರಿಮಳೆ ಬಂದಿದೆ. ಮಹಿಳೆಯ ಜೊತೆ ಈ ರೀತಿ ನಡೆದುಕೊಳ್ಳಬಾರದಿತ್ತು ಎಂದು ಖಂಡಿಸಿದ್ದಾರೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ತ್ಯಾಗಿ ವಿರುದ್ಧ ನೋಯ್ಡಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಭಾರತೀಯ ಸಂಹಿತಿಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಶ್ರೀಕಾಂತ್ ತ್ಯಾಗಿ ಸೊಸೈಟಿ ಪಾರ್ಕ್ ಅನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದು, ಇದರಿಂದ ಇತರ ನಿವಾಸಿಗಳಿಗೆ ಅನಾನುಕೂಲವಾಗಿದೆ. ಉದ್ಯಾನವನವನ್ನು ಅಕ್ರಮವಾಗಿ ವಶಪಡಿಸಿಕೊಂಡಿರುವ ಬಗ್ಗೆ ಅವರಿಗೆ ನೋಟಿಸ್ ನೀಡಲಾಗಿದೆ. ಆದರೆ ಶ್ರೀಕಾಂತ್ ತಮ್ಮ ನಿಲುವು ಬದಲಿಸಲು ನಿರಾಕರಿಸಿದ್ದು, ತಮ್ಮ ಅನುಕೂಲಕ್ಕೆ ತಕ್ಕಂತೆ ಪಾರ್ಕ್ ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪವಿದೆ.
ಶ್ರೀಕಾಂತ್ ತ್ಯಾಗಿ ಅವರ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬರೆದುಕೊಂಡಿರುವ ಪ್ರಕಾರ ಅವರು ಬಿಜೆಪಿಯ ಕಿಸಾನ್ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿದ್ದಾರೆ. (ಏಜೆನ್ಸೀಸ್)
ನಾಪತ್ತೆಯಾದ 9 ವರ್ಷದ ಬಳಿಕ ಮರಳಿ ಗೂಡು ಸೇರಿದ ಹುಡುಗಿ: ಈಕೆಯ ಕತೆ ಕೇಳಿದ್ರೆ ಮನಕಲಕುತ್ತೆ
ಬೆಳಗಾವಿ ಜಿಲ್ಲಾಧಿಕಾರಿ ನಿವಾಸದ ಹಿಂಬದಿಯ ಕ್ವಾರ್ಟರ್ಸ್ ನಲ್ಲಿ ಕಾಣಿಸಿಕೊಂಡ ಚಿರತೆ: ಜನರಲ್ಲಿ ಹೆಚ್ಚಿದ ಆತಂಕ