ಪುದುಚೇರಿ: ತನ್ನ ಮಗನಿಗಿಂತ ಜಾಸ್ತಿ ಅಂಕ ಪಡೆದಿದ್ದಕ್ಕೆ ವಿಷ ಬೆರೆಸಿದ ಜ್ಯೂಸ್ ನೀಡಿ ಮಗನ ಸಹಪಾಠಿಯನ್ನು ಕೊಂದ ಮಹಿಳೆಯನ್ನು ಪುದುಚೇರಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಮಹಿಳೆಯನ್ನು ಸಹಾಯರಾಣಿ ವಿಕ್ಟೋರಿಯಾ ಎಂದು ಗುರುತಿಸಲಾಗಿದೆ. ಮೃತಪಟ್ಟ ಬಾಲಕನ ಹೆಸರು ಬಾಲ ಮಣಿಕಂದನ್. ಆರೋಪಿಯ ಮಗ ಮತ್ತು ಬಾಲಮಣಿಕಂದನ್, ಕಾರೈಕಲ್ ನೆಹರು ನಗರದಲ್ಲಿರುವ ಖಾಸಗಿ ಶಾಲೆಯೊಂದರ 8ನೇ ತರಗತಿ ವಿದ್ಯಾರ್ಥಿಗಳು. ಪರೀಕ್ಷೆಯಲ್ಲಿ ತನ್ನ ಮಗನಿಗಿಂತ ಹೆಚ್ಚು ಅಂಕ ಪಡೆದಿದ್ದನ್ನು ಸಹಿಸಿಕೊಳ್ಳದ ವಿಕ್ಟೋರಿಯಾ, ವಿಷವುಣಿಸಿ ಬಾಲಮಣಿಕಂದನ್ನನ್ನು ಕೊಲೆ ಮಾಡಿದ್ದಾಳೆ.
ಒಂದು ಬಾಟಲಿಗೆ ತಂಪು ಪಾನೀಯ ತುಂಬಿ, ಅದಕ್ಕೆ ವಿಷದ ಮಾತ್ರೆಗಳನ್ನು ಬೆರೆಸಿದ ವಿಕ್ಟೋರಿಯಾ, ಶಾಲೆಯ ಸೆಕ್ಯುರಿಟಿ ಗಾರ್ಡ್ ಕೈಗೆ ಕೊಟ್ಟು, ಅದನ್ನು ತನ್ನ ಮಗನ ಕ್ಲಾಸ್ಮೇಟ್ ಬಾಲ ಮಣಿಕಂದನ್ ಕೊಡುವಂತೆ ಹೇಳಿದ್ದಾಳೆ. ಅದನ್ನು ಕುಡಿದ ಮಣಿಕಂದನ್, ಸಂಜೆ ಮನೆಗೆ ಹೋಗುವಾಗ ತೀವ್ರ ವಾಂತಿ ಮಾಡಿಕೊಂಡು ಸ್ಥಳದಲ್ಲೇ ಕುಸಿದುಬಿದ್ದ. ತಕ್ಷಣ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಬದುಕುಳಿಯಲಿಲ್ಲ.
ವೈದ್ಯರು ಪರೀಕ್ಷೆ ಮಾಡಿದಾಗ ವಿಷ ಸೇವನೆ ಮಾಡಿರುವುದಾಗಿ ತಿಳಿಯಿತು. ಅದಕ್ಕೂ ಮುನ್ನವೇ ಮಣಿಕಂದನ್, ತನ್ನ ಕ್ಲಾಸ್ಮೇಟ್ ತಾಯಿ ಸೆಕ್ಯುರಿಟಿ ಗಾರ್ಡ್ ಕೈಯಲ್ಲಿ ಜ್ಯೂಸ್ ಕಳಿಸಿದ್ದಾಗಿ ಪಾಲಕರ ಬಳಿ ಹೇಳಿದ್ದ. ನಂತರ ಸೆಕ್ಯುರಿಟಿ ಗಾರ್ಡ್ ವಿಚಾರಣೆ ನಡೆಸಿದಾಗ, ತಾನು ಹುಡುಗನ ಸಂಬಂಧಿ ಎಂದು ಮಹಿಳೆ ಹೇಳಿದಳು ಮತ್ತು ಜ್ಯೂಸ್ ಅನ್ನು ಹುಡುಗನಿಗೆ ನೀಡುವಂತೆ ಕೇಳಿದಳು ಎಂದು ಬಹಿರಂಗಪಡಿಸಿದರು.
ಇದಾದ ಬಳಿಕ ಸಿಸಿಟಿವಿ ದೃಶ್ಯಗಳಿಂದ ವಿಕ್ಟೋರಿಯಾಳನ್ನು ಗುರುತಿಸಿ, ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾಳೆಂದು ತಿಳಿದುಬಂದಿದೆ. (ಏಜೆನ್ಸೀಸ್)
ರಾತ್ರಿ ಸುರಿದ ಭಾರಿ ಮಳೆಗೆ ಬೆಂಗಳೂರು ತತ್ತರ: ವರುಣನ ಅಬ್ಬರ ಮುಂದುವರಿದರೆ ಸಿಲಿಕಾನ್ ಸಿಟಿಗೆ ಆಪತ್ತು
ದೇಶದ ಅತಿ ಕಿರಿಯ ಮೇಯರ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಜ್ಯದ ಅತಿ ಕಿರಿಯ ಶಾಸಕ! ಅಪರೂಪದ ಮದ್ವೆಗೆ ಕೇರಳ ಸಾಕ್ಷಿ
ಬಾಲಿವುಡ್ ಟಾರ್ಗೆಟ್ ಆಗಿರುವುದೇಕೆ? ಸ್ಫೋಟಕ ಮಾಹಿತಿ ಬಿಚ್ಚಿಟ್ಟ ನಟಿ ಸ್ವರಾ ಭಾಸ್ಕರ್!