ನವದೆಹಲಿ: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹಲ್ಚಲ್ ಎಬ್ಬಿಸಿದ ಹಾಡೆಂದರೆ ಅದು ಕಚ್ಚಾ ಬಾದಾಮ್. ಫೇಸ್ಬುಕ್, ಟ್ವಿಟರ್, ಯೂಟ್ಯೂಬ್ ಮತ್ತು ಇನ್ಸ್ಟಾಗ್ರಾಂ ಎಲ್ಲಿ ನೋಡಿದರೂ ಬರೀ ಕಚ್ಚಾ ಬಾದಾಮ್ ರೀಮಿಕ್ಸ್ ಹಾಡೇ ಕಣ್ಣು ಮುಂದೆ ಮೊದಲು ಬರುತ್ತಿದೆ. ಇದೇ ಹಾಡನ್ನು ಕೇಳಿ ಕೇಳಿ ಸುಸ್ತಾದ ಎಷ್ಟೋ ಮಂದಿ ಸಿಕ್ಕಾಪಟ್ಟೆ ಟ್ರೋಲ್ ಕೂಡ ಮಾಡಿದ್ದಾರೆ. ಇದೀಗ ಈ ಹಾಡಿನ ಕುರಿತಾದ ಒಂದು ಇಂಟೆರೆಸ್ಟಿಂಗ್ ಮಾಹಿತಿ ಹೊರಬಿದ್ದಿದೆ.
ಈ ಕಚ್ಚಾ ಬಾದಾಮ್ ಹಾಡಿನಿಂದ ಭುಬನ್ ಬದ್ಯಕರ್ ಭವಿಷ್ಯವೇ ಬದಲಾಗಿದೆ. ಅಂದಹಾಗೆ ಈ ಭಬನ್ ಬದ್ಯಕರ್ ಯಾರು ಗೊತ್ತಾ? ಆತ ಬೇರೆ ಯಾರು ಅಲ್ಲ ಕಚ್ಚಾ ಬಾದಾಮ್ ಅಥವಾ ಕಡಲೆಕಾಯಿ ಮಾರಾಟಗಾರ. ಈತ ಪಶ್ಚಿಮ ಬಂಗಾಳದ ಬಿರ್ಭಮ್ ನಿವಾಸಿ. ವೈರಲ್ ಆಗಿರುವ ಹಾಡಿನಲ್ಲೂ ತಮ್ಮ ಕಂಠದ ಕರಾಮತ್ತನ್ನು ಈ ಭುಬನ್ ಬದ್ಯಕರ್ ತೋರಿದ್ದಾರೆ.
ಕಚ್ಚಾ ಬಾದಾಮ್ ಹಾಡು ಹೇಳಿಕೊಂಡು ಊರೂರು ತಿರುಗುತ್ತಾ ಕಡಲೆಕಾಯಿ ಮಾರಾಟ ಮಾಡಿ ಒಂದೆರೆಡು ಕಾಸು ಸಂಪಾದನೆ ಮಾಡುತ್ತಿದ್ದ ಭುಬನ್ ಬದ್ಯಕರ್ಗೆ ಅದೇ ಹಾಡು ಒಂದಲ್ಲ ಒಂದು ದಿನ ತನ್ನನ್ನು ಲಕ್ಷಾಧಿಪತಿಯನ್ನಾಗಿ ಮಾಡುತ್ತದೆ ಎಂದು ಕಸನು ಮನಸ್ಸಲ್ಲೂ ತಿಳಿದಿರಲಿಲ್ಲ.
ಇದೀಗ ಕಚ್ಚಾ ಬಾದಾಮ್ ಹಾಡಿನ ಮೂಲಕ ಅಂತರ್ಜಾಲದಲ್ಲಿ ಧೂಳೆಬ್ಬಿಸಿರುವ ಬದ್ಯಕರ್ ತನ್ನ ಹಾಡಿಗಾಗಿ ಗೋಧುಲಿಬೆಲಾ ಮ್ಯೂಸಿಕ್ ಕಂಪನಿಯಿಂದ 3 ಲಕ್ಷ ರೂಪಾಯಿ ಪಡೆದಿದ್ದಾರೆ. ಕಚ್ಚಾ ಬಾದಾಮ್ ಒರಿಜಿನಲ್ ಸಾಂಗ್ ಅನ್ನು ರೀಮಿಕ್ಸ್ ಮಾಡಲು ಸಂಭಾವನೆಯಾಗಿ ಹಾಡಿನ ಸೃಷ್ಟಿಕರ್ತ ಬದ್ಯಕರ್ಗೆ ಗೌರವ ಧನವಾಗಿ 3 ಲಕ್ಷ ರೂ. ನೀಡಲಾಗಿದೆ.
ಈ ಸಾಂಗ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದಾಗ ಭುಬನ್ ಬದ್ಯಕರ್ಗೆ ಹಣ ಸಿಕ್ಕಿರಬಹುದಾ ಅಥವಾ ದುರ್ಬಳಕೆ ಮಾಡಿಕೊಂಡಿರಬಹುದಾ ಎಂದು ಅನೇಕರು ಕಳವಳ ವ್ಯಕ್ತಪಡಿಸಿದ್ದರು. ಈ ಹಾಡಿನ ಮೂಲ ಸೃಷ್ಟಿಕರ್ತ ಎಂಬ ಗೌರವ ಬದ್ಯಕರ್ಗೆ ಸಿಗುತ್ತಿಲ್ಲ ಎಂದು ಹಲವರು ಬೇಸರ ವ್ಯಕ್ತಪಡಿಸಿದ್ದರು.
ಇದರ ಬೆನ್ನಲ್ಲೇ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಗೋಧುಲಿಬೆಲಾ ಮ್ಯೂಸಿಕ್ ಕಂಪನಿ ಹೆಡ್ ಗೋಪಾಲ್ ಘೋಷ್, ನಾವು ಭುಬನ್ ಜತೆ 3 ಲಕ್ಷ ರೂಪಾಯಿಗೆ ಒಪ್ಪಂದ ಮಾಡಿಕೊಂಡಿದ್ದೆವು ಮತ್ತು ಅದರಲ್ಲಿ ಅರ್ಧದಷ್ಟು ಮೊತ್ತ ಅಂದರೆ 1.5 ಲಕ್ಷದ ಹಣದ ಚೆಕ್ ಅನ್ನು ನೀಡಿದ್ದೇವೆ. ಮುಂದಿನ ವಾರದಲ್ಲಿ ಉಳಿದ ಹಣವನ್ನು ನೀಡುತ್ತೇವೆ ಎಂದು ಹೇಳಿದ್ದಾರೆ.
ಈ ವೈರಲ್ ಹಾಡನ್ನು ಕೇಳಿದ ಪಶ್ಚಿಮ ಬಂಗಾಳ ಪೊಲೀಸರು ಬದ್ಯಾಕರ್ ಅವರನ್ನು ಸನ್ಮಾನಿಸಿದ್ದಾರೆ. ಅಲ್ಲದೆ, ದೇಶದೆಲ್ಲಡೆ ಸಾಕಷ್ಟು ಮೆಚ್ಚುಗೆಯ ಮಾತುಗಳು ಸಹ ಕೇಳಿಬರುತ್ತಿವೆ. (ಏಜೆನ್ಸೀಸ್)
ನನಗೆ ಇಷ್ಟೊಂದು ವಯಸ್ಸಾ! ಸರಿಯಾದ ಮಾಹಿತಿ ಕೊಡಿ ಎಂದು ಮಾಧ್ಯಮ ವಿರುದ್ಧ ಹರಿಹಾಯ್ದ ಅನಸೂಯ
ಉಡುಪಿ ವಕೀಲನಿಗೆ ಜೀವಾವಧಿ ಶಿಕ್ಷೆ: ಸಂತ್ರಸ್ತ ಕುಟುಂಬಕ್ಕೆ ಕೊನೆಗೂ ಸಿಕ್ತು ನ್ಯಾಯ
ಸಿಕ್ಕಾಪಟ್ಟೆ ಟ್ರೋಲ್ ಆಗ್ತಿದೆ ಬಚ್ಚನ್ ಪಾಂಡೆ ಚಿತ್ರದ ಕ್ರೋಚ್ ಗ್ರ್ಯಾಬಿಂಗ್ ದೃಶ್ಯ! ಕಾರಣ ಹೀಗಿದೆ ನೋಡಿ…