ಲಕನೌ: ದಶಕಗಳ ಕಾಲ ದೇಶವನ್ನು ಆಳಿದ ಅತಿ ದೊಡ್ಡ ಪಕ್ಷ ಕಾಂಗ್ರೆಸ್ ಪಂಚರಾಜ್ಯ (ಉತ್ತರ ಪ್ರದೇಶ, ಗೋವಾ, ಪಂಜಾಬ್, ಮಣಿಪುರ, ಉತ್ತರಾಖಂಡ) ಚುನಾವಣೆಯಲ್ಲಿ ಭಾರೀ ಮುಖಭಂಗ ಅನುಭವಿಸಿದೆ. ಅದರಲ್ಲೂ ಉತ್ತರ ಪ್ರದೇಶದ ಮೇಲೆ ಕಾಂಗ್ರೆಸ್ಗೆ ಭಾರೀ ಭರವಸೆ ಇತ್ತು. ಪ್ರಿಯಾಂಕಾ ಗಾಂಧಿ ವರ್ಚಸ್ಸಿನಡಿಯಲ್ಲಿ ಜನರು ಒಂದು ಅವಕಾಶ ನೀಡುತ್ತಾರೆಂದು ಭಾವಿಸಿದ್ದರು. ಆದರೆ, ಅವರ ಆಸೆ ನಿರಾಸೆಯಾಗಿದೆ. ಉತ್ತರ ಪ್ರದೇಶದಲ್ಲಿ ಎರಡಂಕಿಯನ್ನು ದಾಟದ ಕಾಂಗ್ರೆಸ್ ಇದೀಗ ತನ್ನ ತಪ್ಪನ್ನು ತಿದ್ದಿಕೊಳ್ಳುವ ಸಮಯವಾಗಿದೆ.
ಸಾಕಷ್ಟು ಸಮಾವೇಶಗಳನ್ನು ಹಮ್ಮಿಕೊಂಡಿದ್ದು, ಹಾಥರಸ್ ಅತ್ಯಾಚಾರ ಸಂತ್ರಸ್ತೆಯ ತಾಯಿಗೆ ಟಿಕೆಟ್ ನೀಡಿದ್ದು ಸೇರಿದಂತೆ ನಾನಾ ತಂತ್ರಗಳನ್ನು ಕಾಂಗ್ರೆಸ್ ಹೆಣೆದರೂ ಕೂಡ ಯಾವುದೂ ಫಲಿಸಲಿಲ್ಲ. ಚುನಾವಣೆಯಲ್ಲಿ ಕಾಂಗ್ರೆಸ್ ಕೆಲವು ತಂತ್ರಗಾರಿಕೆಯ ತಪ್ಪುಗಳನ್ನು ಮಾಡಿದ್ದು, ಅವು ಯಾವುವು ಎಂಬುದನ್ನು ಒಮ್ಮೆ ನೋಡೋಣ.
403 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಉತ್ತರ ಪ್ರದೇಶ ಒಂದು ಬಹು ದೊಡ್ಡ ರಾಜ್ಯ. ಇಂತಹ ರಾಜ್ಯದಲ್ಲಿ ಕಾಂಗ್ರೆಸ್ ಯಾವೊಂದು ಪಕ್ಷದ ಜತೆ ಮೈತ್ರಿಯು ಇಲ್ಲದೇ ಏಕಾಂಗಿಯಾಗಿ ಸ್ಪರ್ಧಿಸಿದ್ದು ಹಿನ್ನಡೆ ಅನುಭವಿಸಲು ಕಾರಣವಾಗಿದೆ. ಪ್ರಿಯಾಂಕಾ ಗಾಂಧಿ ಹೊರತುಪಡಿಸಿದರೆ ಪ್ರಬಲ ನಾಯಕರ ಕೊರತೆ ಕಾಂಗ್ರೆಸ್ನಲ್ಲಿ ಎದ್ದು ಕಾಣುತ್ತಿದೆ. ಅಲ್ಲದೆ, ಪಕ್ಷದ ರಾಷ್ಟ್ರಮಟ್ಟದ ದೌರ್ಬಲ್ಯವು ಕೂಡ ಕಾಂಗ್ರೆಸ್ ಅನ್ನು ಹತಾಶೆಗೆ ದೂಡಿದೆ.
ಉತ್ತರ ಪ್ರದೇಶದ ಅಧಿಕಾರದಿಂದ ಬಹು ದೂರ ಉಳಿದಿರುವ ಕಾಂಗ್ರೆಸ್ ಬೇರು ಮಟ್ಟದಲ್ಲಿ ದುರ್ಬಲವಾಗಿದೆ. ಎಷ್ಟೇ ಭರವಸೆಗಳನ್ನು ನೀಡಿದರೂ ಉತ್ತರ ಪ್ರದೇಶದ ಜನ ಕಾಂಗ್ರೆಸ್ ಮೇಲೆ ನಂಬಿಕೆ ಇಡುತ್ತಿಲ್ಲ. ಅತಿಯಾದ ಆತ್ಮ ವಿಶ್ವಾಸವೂ ಕೂಡ ಕಾಂಗ್ರೆಸ್ಗೆ ಮುಳುವಾಗಿದೆ. ಇನ್ನು ಪ್ರಿಯಾಂಕಾರ ಚರಿಷ್ಮಾ ಕೂಡ ಇಲ್ಲಿ ವರ್ಕ್ ಆಗಲಿಲ್ಲ.
ಪ್ರಿಯಾಂಕಾ ಗಾಂಧಿ ಹೋದ ಕಡೆ ಜನ ಸಾಗರ ಸೇರುತ್ತಿತ್ತು. ಉತ್ತರ ಪ್ರದೇಶಲ್ಲಿ ಭರ್ಜರಿ ಪ್ರಚಾರ ಮಾಡಿದ್ರೂ ಮತದಾರರು ಮಾತ್ರ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮನ್ನಣೆ ನೀಡಲಿಲ್ಲ. ಒಟ್ಟು 403 ವಿಧಾನಸಭಾ ಕ್ಷೇತ್ರಗಳ ಪೈಕಿ 2 ಕ್ಷೇತ್ರದಲ್ಲಷ್ಟೇ ಕಾಂಗ್ರೆಸ್ಗೆ ಗೆಲುವಾಗಲಿದೆ. ಈಗಾಗಲೇ 270 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. 2ನೇ ಸ್ಥಾನದಲ್ಲಿರುವ ಸಮಾಜವಾದಿ ಪಕ್ಷಕ್ಕೆ 123 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. (ಏಜೆನ್ಸೀಸ್)
ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ..
ಯಾರಿಗೆ ಪಂಚರಾಜ್ಯ?; ತಜ್ಞರ ವಿಶ್ಲೇಷಣೆ ಒಳಗೊಂಡ ಫಲಿತಾಂಶದ ಕ್ಷಣ ಕ್ಷಣ ಮಾಹಿತಿಯ ನೇರಪ್ರಸಾರ ಇಲ್ಲಿದೆ