ಲಖನೌ: ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ಸತ್ಯಪಾಲ್ ಸಿಂಗ್ ಬಾಘೇಲ್ ಅವರ ಬೆಂಗಾವಲು ವಾಹನ ಮೇಲೆ ಕಲ್ಲು ತೂರಾಟ ನಡೆಸಿ, ದಾಳಿ ಮಾಡಿರುವ ಘಟನೆ ಉತ್ತರ ಪ್ರದೇಶದ ಮೇನ್ಪುರಿ ಜಿಲ್ಲೆಯ ಕರ್ಹಾಲದಲ್ಲಿ ಮಂಗಳವಾರ ಸಂಜೆ ನಡೆದಿದೆ.
ಉತ್ತರ ಪ್ರದೇಶ ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಸ್ಪರ್ಧಿಸುತ್ತಿರುವ ಕರ್ಹಾಲ್ ವಿಧಾನಸಭೆ ಕ್ಷೇತ್ರದಿಂದಲೇ ಬಿಜೆಪಿ ಅಭ್ಯರ್ಥಿಯಾಗಿ ಸತ್ಯಪಾಲ್ ಸಿಂಗ್ ಬಾಘೇಲ್ ಅವರು ಸ್ಪರ್ಧಿಸುತ್ತಿದ್ದಾರೆ.
ವರದಿ ಪ್ರಕಾರ ಯಾವುದೇ ಹಾನಿಯಾಗದೇ ಸತ್ಯಪಾಲ್ ಸಿಂಗ್ ಬಚಾವ್ ಆಗಿದ್ದಾರೆ. ಆದಾಗ್ಯೂ, ಬೆಂಗಾವಲು ವಾಹನದ ಕಿಟಕಿ ಗಾಜು ಕಲ್ಲೇಟಿಗೆ ಪುಡಿ ಪುಡಿಯಾಗಿದ್ದು, ಕಾರಿನ ಕೆಲವೆಡೆ ಜಖಂ ಆಗಿವೆ. ಈ ದಾಳಿಯನ್ನು ಬಿಜೆಪಿ ಬಲವಾಗಿ ಖಂಡಿಸಿದೆ. ಈ ಘಟನೆಯ ಹಿಂದೆ ಸಮಾಜವಾದಿ ಪಾರ್ಟಿಯ ಗೂಂಡಾಗಳಿದ್ದಾರೆ ಎಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೆ.ಪಿ. ಮೌರ್ಯ ಆರೋಪ ಮಾಡಿದ್ದಾರೆ.
ಅಖಿಲೇಶ್ ಯಾದವ್ ಜಿ ಅವರೇ ಚುನಾವಣೆಯಲ್ಲಿ ಸೋಲುವ ಭಯದಿಂದ ನಿಮ್ಮ ಗೂಂಡಾಗಳನ್ನು ಬಿಟ್ಟು ಬಿಜೆಪಿ ಅಭ್ಯರ್ಥಿಯಾಗಿರುವ ಕೇಂದ್ರ ಸಚಿವ ಸತ್ಯಪಾಲ್ ಸಿಂಗ್ ಬಾಘೇಲ್ ಮತ್ತು ಬಿಜೆಪಿ ನಾಯಕರ ಮೇಲೆ ದಾಳಿ ಮಾಡಿಸಿದ್ದೀರಿ. ನಿನ್ನೆಯಷ್ಟೇ ಬಿಜೆಪಿ ಸಂಸದೆ ಗೀತಾ ಶಕ್ಯ ಅವರ ಮೇಲೂ ದಾಳಿ ನಡೆದಿದೆ. ಎರಡು ಘಟನೆಯ ದೋಷಿಗಳ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಮೌರ್ಯ ಅವರು ಸರಣಿ ಟ್ವೀಟ್ಗಳ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಕರ್ಹಾಲ್ನ ರಹಮತುಲ್ಲಾಪುರ ಗ್ರಾಮದಲ್ಲಿ ನಿನ್ನೆ ಈ ಘಟನೆ ನಡೆದಿದೆ. ಯುಪಿ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ಮುಂಚಿತವಾಗಿ ಬಾಘೇಲ್ ಅವರು ಆ ಪ್ರದೇಶದಲ್ಲಿ ಪ್ರಚಾರ ನಡೆಸುತ್ತಿದ್ದರು ಮತ್ತು ಇತರ ಪಕ್ಷದ ನಾಯಕರೊಂದಿಗೆ ಅತಿಕುಲ್ಲಾಪುರ ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಗ್ರಾಮದ ಹೊರಗಡೆ ಇದ್ದ ಕೆಲವು ಜನರು ಬಾಘೇಲ್ ಅವರ ಬೆಂಗಾವಲು ವಾಹನ ಬರುತ್ತಿದ್ದಂತೆ ಅದರತ್ತ ಕಲ್ಲು ತೂರಾಟ ನಡೆಸಿದ್ದಾರೆ.
ಘಟನೆಯ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಆದರೆ, ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಕಲ್ಲು ತೂರಾಟಗಾರರು ಪರಾರಿಯಾಗಿದ್ದರು. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಎಎಸ್ಪಿ ಮಧುವನ್ ಕುಮಾರ್ ಸಿಂಗ್ ಹೇಳಿದ್ದಾರೆ. (ಏಜೆನ್ಸೀಸ್)
ಕೆಂಪು ಕೋಟೆ ಹಿಂಸಾಚಾರದ ಪ್ರಮುಖ ಆರೋಪಿ ನಟ ದೀಪ್ ಸಿಧು ಕಾರು ಅಪಘಾತದಲ್ಲಿ ದುರ್ಮರಣ
ಬಾಲಿವುಡ್ನ ಪ್ರಖ್ಯಾತ ಸಂಗೀತ ಸಂಯೋಜಕ ಹಾಗೂ ಗಾಯಕ ಬಪ್ಪಿ ಲಹಿರಿ ವಿಧಿವಶ
ಹಿಜಾಬ್ ಜತೆಗೆ ಈಗ ಟೋಪಿ ವಿವಾದ!; ಹೊನ್ನಾಳಿಯ ಸಾಸ್ವೇಹಳ್ಳಿ ಶಾಲೆಗೆ ಟೋಪಿ ಧರಿಸಿ ಬಂದ ಬಾಲಕರು..