ಕೀಯೆವ್/ಮಾಸ್ಕೋ/ಹಾವೇರಿ: ವೈದ್ಯನಾಗಬೇಕೆಂಬ ಕನಸು ಕಟ್ಟಿಕೊಂಡು ಅದನ್ನು ನನಸು ಮಾಡಿಕೊಳ್ಳಲು ತಾಯ್ನಾಡನ್ನು ತೊರೆದು ದೂರದ ಯೂಕ್ರೇನ್ಗೆ ತರಳಿದ್ದ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ ಗ್ಯಾನಗೌಡರ, ರಷ್ಯಾ-ಯೂಕ್ರೇನ್ ನಡುವಿನ ಯುದ್ಧದಲ್ಲಿ ಶೆಲ್ ದಾಳಿಗೆ ಬಲಿಯಾಗಿದ್ದಾರೆ.
ನವೀನ್ ಸಾವಿಗೆ ಇಡೀ ರಾಜ್ಯವೇ ಕಂಬನಿ ಮಿಡಿಯುತ್ತಿದ್ದು, ಆತನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಕಾರ್ಕಿವ್ ನಗರದಲ್ಲಿ ನವೀನ್ ಎಂಬಿಬಿಎಸ್ ಓದುತ್ತಿದ್ದ. ಯೂಕ್ರೇನ್ ಮೇಲೆ ರಷ್ಯಾ ಸೇನಾಪಡೆ ಯುದ್ಧ ಮುಂದುವರಿಸಿದ್ದು, ನಿನ್ನೆ ನಡೆದ ದಾಳಿಯಲ್ಲಿ ನವೀನ್ ಮೃತಪಟ್ಟಿದ್ದಾರೆ.
ನಿನ್ನೆ ನಡೆದ ಘಟನೆಯನ್ನು ಮೃತ ನವೀನ್ ಸ್ನೇಹಿತ ಆರ್. ಗೌತಮ್ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅಗತ್ಯ ವಸ್ತುಗಳನ್ನು ಖರೀದಿಸಲು ನವೀನ್ ಜತೆ ನಾವೆಲ್ಲ ತೆರಳಿದ್ದೆವು. ಆ ಕ್ಷಣದಲ್ಲಿ ದಿಢೀರನೇ ಫೈರಿಂಗ್ ಶುರುವಾಯಿತು. ನಮ್ಮನ್ನು ನಾವು ಕಾಪಾಡಿಕೊಳ್ಳಲು ಓಡೋಡಿ ಬರುತ್ತಿದ್ದೆವು. ಅಷ್ಟರಲ್ಲಿ ನವೀನ್ ಮೇಲೆ ಗುಂಡಿನ ದಾಳಿ ಆಯಿತು. ಆತ ಸ್ಥಳದಲ್ಲೇ ಮೃತಪಟ್ಟ. ನಾವು ನವೀನ್ ಸಮೀಪಕ್ಕೆ ತೆರಳಲು ಪ್ರಯತ್ನಿಸಿದೆವು. ಆದರೆ, ಗುಂಡಿನ ದಾಳಿ ಮುಂದುವರಿದರಿಂದ ನವೀನ್ ಬಳಿ ತಲುಪಲ ನಮಗೆ ಸಾಧ್ಯವಾಗಲಿಲ್ಲ ಎಂದು ಗೌತಮ್ ತಮ್ಮ ಅಸಹಾಯಕತೆ ಜತೆ ಮುಂದೇನಾಗುತ್ತೋ ಎಂಬ ಭಯವನ್ನು ವ್ಯಕ್ತಪಡಿಸಿದ್ದಾರೆ.
ಯೂಕ್ರೇನ್ ಮೇಲೆ ರಷ್ಯಾ ಯುದ್ಧ ಘೋಷಣೆ ಮಾಡಿದಾಗಿನಿಂದ ಮಗ ಹುಟ್ಟೂರಿಗೆ ಸುರಕ್ಷಿತವಾಗಿ ಬಂದ್ರೆ ಸಾಕಪ್ಪ ಎಂದು ಪಾಕಲರು-ಕುಟುಂಬಸ್ಥರು ಕಣ್ಣೀರು ಹಾಕುತ್ತಾ ದೇವರ ಬಳಿ ಲೆಕ್ಕವಿಲ್ಲದಷ್ಟು ಬಾರಿ ಬೇಡಿಕೊಂಡಿದ್ದರು. ಆದರೂ ಮಗ ಬದುಕಲಿಲ್ಲ ಎಂಬ ಸುದ್ದಿ ಕೇಳಿ ನವೀನ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ನವೀನನ ಸಾವಿನ ಸುದ್ದಿ ಕೇಳಿ ಆತನ ಮನೆಗೆ ಸಂಬಂಧಿಕರು, ಗ್ರಾಮಸ್ಥರು ದೌಡಾಯಿಸಿದ್ದಾರೆ. ನಮ್ಮ ಮಕ್ಕಳನ್ನು ಕರೆಸುವಲ್ಲಿ ಕೇಂದ್ರ ಸಚಿವಾಲಯ ವಿಫಲವಾಗಿದೆ. ನಮ್ಮ ಮಕ್ಕಳು ಸತ್ತು ಹೋದ್ರು, ಇದಕ್ಕೆ ಯಾರು ಹೊಣೆ? ನಾವು ಯಾರಿಗೆ ಸಂಪರ್ಕಿಸಲು ಕರೆ ಮಾಡಿದ್ರೂ ಸಿಕ್ತಾ ಇಲ್ಲಾ ಎಂದು ಆಕ್ರೋಶ ಹೊರ ಹಾಕಿದ್ದಾರೆ. (ದಿಗ್ವಿಜಯ ನ್ಯೂಸ್)
ಯೂಕ್ರೇನ್ನಲ್ಲಿ ಕ್ಷಿಪಣಿ ದಾಳಿಗೆ ಕನ್ನಡಿಗ ಬಲಿ: ಮುಗಿಲು ಮುಟ್ಟಿದೆ ಪಾಲಕರ ಆಕ್ರಂದನ
ಯೂಕ್ರೇನ್ನಲ್ಲಿ ರಷ್ಯಾ ದಾಳಿಗೆ ಹಾವೇರಿ ಯುವಕ ಬಲಿ: ಮೃತನ ತಂದೆಗೆ ಕರೆ ಮಾಡಿ ಸಿಎಂ ಸಾಂತ್ವನ
ಎಂಬಿಬಿಎಸ್ ಕಲಿತು ಬರೋದ್ಹಾಗಿ ಹೇಳಿ ಹೋದ್ಯಲ್ಲೋ ಮಗನೇ… ಮನಕಲಕುತ್ತೆ ಹೆತ್ತಮ್ಮನ ಗೋಳಾಟ