ಪುದುಕ್ಕೊಟ್ಟೈ: ಮೇಕೆ ಕಳ್ಳರನ್ನು ಹಿಡಿಯಲು ಹೋಗಿ ಬರ್ಬರ ಹತ್ಯೆಯಾಗಿದ್ದ ಸಹಾಯಕ ಇನ್ಸ್ಪೆಕ್ಟರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದು, ಮೂವರಲ್ಲಿ ಇಬ್ಬರು ಅಪ್ರಾಪ್ತರು ಎಂಬ ಸಂಗತಿ ಸ್ಥಳೀಯ ಜನತೆ ಹಾಗೂ ಪೊಲೀಸ್ ಇಲಾಖೆಯನ್ನು ಆತಂಕಕ್ಕೆ ದೂಡಿದೆ.
ಮೂವರು ಆರೋಪಿಗಳನ್ನು ತಮಿಳುನಾಡಿನ ಕೀರನೂರು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ತಿರುಚಿರಾಪಳ್ಳಿ ಜಿಲ್ಲೆಯ ನವಲ್ಪಟ್ಟು ಪೊಲೀಸ್ ಠಾಣೆಯಲ್ಲಿ ವಿಶೇಷ ಸಹಾಯಕ ಇನ್ಸ್ಪೆಕ್ಸರ್ ಆಗಿದ್ದ ಭೂಮಿನಾಥನ್ (50) ಅವರು ನ.21ರ ಮುಂಜಾನೆ ಕೊಲೆಯಾಗಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗಿರುವ ಮೂವರು ಆರೋಪಿಗಳಲ್ಲಿ ಇಬ್ಬರು 9 ಮತ್ತು 14 ವಯಸ್ಸಿನವರು. ಉಳಿದ ಇನ್ನೊಬ್ಬ ಆರೋಪಿ ಮಣಿಕಂದನ್ ವಯಸ್ಸು 19. ಭಾನುವಾರ ಮುಂಜಾನೆ ಮೇಕೆ ಕಳ್ಳತನ ಮಾಡಿ ಬೈಕ್ನಲ್ಲಿ ಪರಾರಿಯಾಗುತ್ತಿದ್ದ ಆರೋಪಿಗಳನ್ನು ಹಿಡಿಯಲು ಭೂಮಿನಾಥನ್ ಬೆನ್ನಟ್ಟಿ ಹೋಗಿದ್ದರು. ಆದರೆ, ಆರೋಪಿಗಳು ಕುಡುಗೋಲಿನಿಂದ ಭೂಮಿನಾಥನ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಈ ಘಟನೆ ಬೆಳಗ್ಗೆ 2 ರಿಂದ 3 ಗಂಟೆ ಸಮಯದಲ್ಲಿ ನಡೆದಿತ್ತು.
ಆರೋಪಿ ಮಣಿಕಂದನ್ ಥಂಜಾವೂರ್ ಜಿಲ್ಲೆಯ ನಿವಾಸಿ. ಉಳಿದ ಇಬ್ಬರು ಅಪ್ರಾಪ್ತ ಆರೋಪಿಗಳು ಪುದುಕ್ಕೊಟ್ಟೈ ಜಿಲ್ಲೆಯ ನಿವಾಸಿಗಳು. ಮೇಕೆ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದ ಆರೋಪಿಗಳನ್ನು ಭೂಮಿನಾಥನ್ ತಡೆದಿದ್ದಾರೆ. ಆದರೆ, ಆರೋಪಿಗಳು ಬೈಕ್ ನಿಲ್ಲಿಸದೇ ಅಲ್ಲಿಂದ ಪರಾರಿಯಾಗಲು ಯತ್ನಿಸಿದರು. ಬಳಿಕ ಅವರನ್ನು ಹಿಮ್ಮೆಟ್ಟಿಸಿ ಹೋಗಿ, ಮೂವರನ್ನು ತಿರುಚಿ-ಪುದುಕ್ಕೊಟ್ಟೈ ಗಡಿ ಹತ್ತಿರದ ಪಲ್ಲಥುಪಟ್ಟಿಯಲ್ಲಿ ಹಿಡಿದಿದ್ದಾರೆ. ಈ ವೇಳೆ ಅವರ ಮೇಲೆ ಕುಡುಗೋಲಿನಿಂದ ಮೂವರು ದಾಳಿ ಮಾಡಿದ್ದಾರೆ. ತಲೆಯ ಮೇಲೆ ಹೆಚ್ಚು ದಾಳಿ ಮಾಡಿದ್ದರಿಂದ ರಕ್ತಸ್ರಾವವಾಗಿ ಸ್ಥಳದಲ್ಲೇ ಭೂಮಿನಾಥನ್ ಮೃತಪಟ್ಟಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರು ಮೂವರು ಆರೋಪಿಗಳನ್ನು ಸೋಮವಾರ ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಭೂಮಿನಾಥನ್ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಭಾನುವಾರವೇ ನೆರವೇರಿತು. ಮೃತರ ಕುಟುಂಬಕ್ಕೆ 1 ಕೋಟಿ ಪರಿಹಾರ ಹಾಗೂ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಕೆಲಸವನ್ನು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಘೋಷಿಸಿದ್ದಾರೆ. (ಏಜೆನ್ಸೀಸ್)
ಮೇಕೆ ಕಳ್ಳರನ್ನು ಚೇಸ್ ಮಾಡಿದ ಇನ್ಸ್ಪೆಕ್ಟರ್ ಬರ್ಬರ ಹತ್ಯೆ: ದುಷ್ಕರ್ಮಿಗಳ ಕೃತ್ಯಕ್ಕೆ ಬೆಚ್ಚಿದ ಸ್ಥಳೀಯರು
ಬದಲಾದ ಸಮಂತಾ ನಿಲುವು: ಮಾಜಿ ಪತಿ ವಿರುದ್ಧ ಸೇಡು ತೀರಿಸಿಕೊಳ್ಳಲು ಆರಂಭಿಸಿದ್ರಾ ಸೌತ್ ಬ್ಯೂಟಿ!
LLB ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್: ಠಾಣಾಧಿಕಾರಿಯ ಕರಾಳ ಮುಖ ಮತ್ತೊಮ್ಮೆ ಬಯಲು..!