ಚೆನ್ನೈ: ತಮಿಳುನಾಡಿನ ತಿರುವನ್ಮಿಯೂರ್ ರೈಲು ನಿಲ್ದಾಣದಲ್ಲಿ ನಡೆದ ರೈಲ್ವೇ ನೌಕರನ ದರೋಡೆ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಅಚ್ಚರಿಯೊಂದು ಕಾದಿತ್ತು. ಏಕೆಂದರೆ, ದೂರು ನೀಡಿದ್ದ ದೂರುದಾರನೇ ಅಪರಾಧಿ ಎಂಬುದು ಬಯಲಾಗಿದೆ.
ಇದಕ್ಕೂ ಮುನ್ನ ರೈಲ್ವೇ ನೌಕರ ನೀಡಿದ್ದ ದೂರು ಸುಳ್ಳೆಂಬುದು ಬಯಲಾಗಿದೆ. ಇಡೀ ಕೃತ್ಯವನ್ನು ನೌಕರ ಮತ್ತು ಆತನ ಪತ್ನಿ ಹಣಕ್ಕಾಗಿ ಮಾಡಿದ್ದಾರೆ. ರೈಲು ನಿಲ್ದಾಣದ ಟಿಕೆಟ್ ಕ್ಲರ್ಕ್ ಆಗಿರುವ ರಾಜಸ್ಥಾನ ಮೂಲದ ತೀಕರಂ (28) ಮತ್ತು ಆತನ ಪತ್ನಿ ಸರಸ್ವತಿ (27) ಎಂಬುವವರನ್ನು ರೈಲ್ವೇ ಪೊಲೀಸರು ಬಂಧಿಸಿದ್ದಾರೆ.
ಬೆಳಗಿನ ಜಾವ ಮೊದಲ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕರು ಟಿಕೆಟ್ ಕ್ಲರ್ಕ್ ನಿಲ್ದಾಣದಿಂದ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಹೊರಗಿನಿಂದ ಟಿಕೆಟ್ ಕೌಂಟರ್ ಕೊಠಡಿ ಲಾಕ್ ಆಗಿತ್ತು. ಲಾಕ್ ತೆರೆದು ನೋಡಿದಾಗ ತೀಕರಂ ಒಳಗಡೆ ಇದ್ದ. ಆದರೆ, ಆತನನ್ನು ಕೈ ಕಾಲು ಕಟ್ಟಿ, ಬಟ್ಟೆಯಿಂದ ಬಾಯನ್ನು ಮುಚ್ಚಲಾಗಿತ್ತು. ಬಳಿಕ ಆತನನ್ನು ವಿಚಾರಿಸಿದಾಗ ಬೆಳಗ್ಗೆ ಮೂವರು ವ್ಯಕ್ತಿಗಳು ಬಂದು ತನ್ನನ್ನು ಹೆದರಿಸಿ, ಕಟ್ಟಿಹಾಕಿ ಕೌಂಟರ್ನಲ್ಲಿದ್ದ 1.30 ಲಕ್ಷ ರೂಪಾಯಿ ಹಣವನ್ನು ಸುಲಿಗೆ ಮಾಡಿಕೊಂಡು ಪರಾರಿಯಾದರು ಎಂದು ಹೇಳಿದ್ದ.
ರೈಲು ನಿಲ್ದಾಣದಲ್ಲಿ ಸಿಸಿಟಿವಿ ಕ್ಯಾಮೆರಾಗಳು ಇಲ್ಲದಿರುವುದರಿಂದ ಏನು ನಡೆದಿದೆ ಎಂದು ತಿಳಿದುಕೊಳ್ಳುವುದು ಪೊಲೀಸರಿಗೆ ಕೊಂಚ ಕಷ್ಟವಾಯಿತು. ಆದಾಗ್ಯೂ ನಿಲ್ದಾಣದ ಸಮೀಪದಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಮಹಿಳೆಯೊಬ್ಬಳು ನಿಲ್ದಾಣದ ಏರಿಯಾದಿಂದ ಕೆಳಗೆ ಹೋಗುತ್ತಿರುವ ದೃಶ್ಯ ಮತ್ತು ಬ್ಯಾಗ್ ಜತೆಗೆ ಆಟೋದಲ್ಲಿ ಮತ್ತೆ ಮರಳಿದ ದೃಶ್ಯ ದಾಖಲಾಗಿತ್ತು.
ಬಳಿಕ ಆಟೋ ಚಾಲಕನನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿದಾಗ ಮಹಿಳೆ ಉರಪಕ್ಕಮ್ ಬಳಿ ಇಳಿಸಿದ್ದಾಗಿ ಹೇಳಿದ. ಅದೇ ಏರಿಯಾದಲ್ಲೇ ತೀಕರಂ ಮನೆಯು ಇತ್ತು. ಇದರಿಂದ ಅನುಮಾನಗೊಂಡ ಪೊಲೀಸರು ತೀಕರಂ ಮತ್ತು ಆತನ ಪತ್ನಿಯನ್ನು ವಶಕ್ಕೆ ಪಡೆದು ತೀವ್ರವಾಗಿ ವಿಚಾರಣೆ ನಡೆಸಿದಾಗ ಇಬ್ಬರು ತಪ್ಪೊಪ್ಪಿಕೊಂಡಿದ್ದಾರೆ. ಕದ್ದ ಹಣವನ್ನು ತೀಕರಂ ಮನೆಯ ಹಿಂಭಾಗದ ಬಾವಿಯಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪೊಲೀಸರ ಪ್ರಕಾರ ತೀಕರಂ ಯಾವಾಗಲೂ ಆನ್ಲೈನ್ ಗೇಮ್ಗಳನ್ನು ಆಡುತ್ತಿದ್ದ. ಆತ ಎರಡೂವರೆ ಲಕ್ಷ ರೂ. ಸಾಲ ಮಾಡಿಕೊಂಡಿದ್ದ. ಹೀಗಾಗಿ ಸಾಲ ತೀರಿಸಲು ಸುಲಿಗೆ ಮಾಡುವ ಪ್ಲಾನ್ ಅನ್ನು ದಂಪತಿ ರೂಪಿಸಿದ್ದರು. ಪ್ಲಾನ್ನಂತೆ ಸುಲಿಗೆ ಮಾಡಿ, ತೀಕರಂ ಸಿಕ್ಕಿಬಿದ್ದಿದ್ದಾರೆ. ಕಳೆದ 5 ವರ್ಷದಿಂದ ಆತ ರೈಲ್ವೇ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ. (ಏಜೆನ್ಸೀಸ್)
ಕರೊನಾ ಭೀತಿಗೆ ಒಮಿಕ್ರಾನ್ನಿಂದಲೇ ಅಂತಿಮ ಮೊಳೆ? ಸರಣಿ ಅಧ್ಯಯನದಿಂದ ಹೊರಬಂತು ಗುಡ್ನ್ಯೂಸ್!
ಹಣದ ಬದಲು RTO ಅಧಿಕಾರಿಗಳು ಸ್ವೀಕರಿಸುತ್ತಿರೋ ಲಂಚದ ಮತ್ತೊಂದು ವಿಧಾನ ತಿಳಿದ್ರೆ ಶಾಕ್ ಆಗ್ತೀರಾ!
ವಿಶೇಷತೆಗಳಿಂದ ಕೂಡಿರುವ ಕತ್ರಿನಾ ಕೈಫ್ ಧರಿಸಿರೋ ಮಂಗಳಸೂತ್ರದ ಬೆಲೆ ಕೇಳಿದ್ರೆ ಬೆರಗಾಗ್ತೀರಾ!
ಹಣಕ್ಕಾಗಿ ಒಂದೂವರೆ ವರ್ಷದಲ್ಲಿ 3 ಮದ್ವೆಯಾದ ಭೂಪ! ಮೈಸೂರಿನ ವಕೀಲನ ಹಿಸ್ಟರಿ ಕೇಳಿದ್ರೆ ಬೆಚ್ಚಿಬೀಳ್ತೀರಿ