ಮಂಡ್ಯ: ನಾನು ಯಾವ ಪಕ್ಷದ ಮುಂದೆಯೂ ಟಿಕೆಟ್ಗೆ ಬೇಡಿಕೆ ಇಟ್ಟಿಲ್ಲ. ನನ್ನ ಮಗನಿಗೆ ಟಿಕೆಟ್ ಕೊಡಿ ಅಂತಾ ಬೇಡಿಕೆ ಇಟ್ಟಿಲ್ಲ. ಮುಂದೆಯೂ ಬೇಡಿಕೆ ಇಡುವುದಿಲ್ಲ. ಹಾಗೇ ನಾನು ಮಂಡ್ಯ ಬಿಟ್ಟು ಯಾವ ಕ್ಷೇತ್ರಕ್ಕೂ ಹೋಗುವುದಿಲ್ಲ ಎಂದು ಸಂಸದೆ ಸುಮಲತಾ ಅಂಬರೀಷ್ ಹೇಳಿದರು.
ಮಂಡ್ಯ ರಾಜಕೀಯದ ಬಗ್ಗೆ ಇತ್ತೀಚೆಗೆ ಕೇಳಿಬಂದು ಕೆಲವು ವಿಚಾರಗಳ ಬಗ್ಗೆ ಮಂಡ್ಯದಲ್ಲಿ ಮಂಗಳವಾರ (ಜೂನ್.28) ಸುದ್ದಿಗಾರರೊಂದಿಗೆ ಸಂಸದೆ ಸುಮಲತಾ ಅಂಬರೀಶ್ ಮಾತನಾಡಿದರು.
ಬಿಜೆಪಿ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಸುಮಲತಾ, ನಾನು ಸದ್ಯ ಯಾವ ಪಕ್ಷವನ್ನು ಸೇರ್ಪಡೆಯಾಗುವ ಆಲೋಚನೆ ಮಾಡಿಲ್ಲ. ಬೆಂಗಳೂರು ಉತ್ತರದಿಂದ ಟಿಕೆಟ್ ಕೇಳಿರುವುದು ಸುಳ್ಳು. ಇದೊಂದು ಹಾಸ್ಯಾಸ್ಪದ ಸುದ್ದಿ. ಈ ರೀತಿ ಕೆಲವರು ಮೂರ್ಖತನದ ಮಾತುಗಳನ್ನು ಹೇಳಿದ್ದಾರೆ. ನಾನು ಯಾವ ಪಕ್ಷದ ಮುಂದೆಯು ಟಿಕೆಟ್ಗೆ ಬೇಡಿಕೆ ಇಟ್ಟಿಲ್ಲ. ನನ್ನ ಮಗನಿಗೂ ಟಿಕೆಟ್ ಬೇಡಿಕೆ ಇಟ್ಟಿಲ್ಲ. ಮುಂದೆಯೂ ಮಗನಿಗಾಗಿ ಟಿಕೆಟ್ ಬೇಡಿಕೆ ಇಡುವುದಿಲ್ಲ.
ಮೊದಲಿಗೆ ಅಭಿಷೇಕ್ಗೆ ರಾಜಕೀಯದ ಆಸಕ್ತಿ ಇರಬೇಕು. ಈಗ ಅಭಿ ಸಿನಿಮಾ ಕ್ಷೇತ್ರದಲ್ಲಿ ಇದ್ದಾನೆ. ಅವನು ಆ ಕ್ಷೇತ್ರದಲ್ಲಿ ಬೆಳೆಯುತ್ತಾ ಇದ್ದಾನೆ. ನಾನು ಅವನಿಗಾಗಿ ರಾಜಕೀಯದ ಸ್ಟೂಲ್ ಹಾಕಿಕೊಡಲ್ಲ. ಅವನಿಗೆ ಬೇರೆ ಪಕ್ಷದಿಂದ ಆಫರ್ ಬಂದಿರೋದು ನಿಜ. ಅದನ್ನು ನಿರ್ಧಾರ ಮಾಡುವುದು ಅಭಿಷೇಕ್ಗೆ ಬಿಟ್ಟಿದ್ದು. ಈ ವಿಚಾರದಲ್ಲಿ ನಾನು ನಿರ್ಧಾರ ಮಾಡುವುದಿಲ್ಲ ಎಂದರು.
ನಾನು ಮಂಡ್ಯ ಬಿಟ್ಟು ಯಾವ ಕ್ಷೇತ್ರಕ್ಕೂ ಹೋಗುವುದಿಲ್ಲ. ನನಗೆ ರಾಜಕೀಯ ಅನಿವಾರ್ಯ ಅಲ್ಲ. ಮಂಡ್ಯ ಹಾಗೂ ಮಂಡ್ಯದ ಜನತೆಗಾಗಿ ರಾಜಕೀಯಕ್ಕೆ ಬಂದಿದ್ದೇನೆ. ಮಂಡ್ಯ ಜನರ ಋಣವನ್ನು ತೀರಿಸಲು ನಾನು ರಾಜಕೀಯದಲ್ಲಿ ಇದ್ದೀನಿ. ನಾನು ಮಂಡ್ಯ ಬಿಟ್ಟು ಹೋಗಲ್ಲ, ಮಂಡ್ಯ ನನ್ನ ಬಿಡಲ್ಲ. ನಾನು ಮಂಡ್ಯ ಬಿಡುವ ಹಗಲುಗನಸನ್ನು ಕೆಲವರು ಕಾಣುತ್ತಿದ್ದಾರೆ. ಆ ಕನಸು ಯಾವತ್ತೂ ನನಸು ಆಗಲ್ಲ. ನಾನು ಎಂದಿಗೂ ಮಂಡ್ಯದಲ್ಲೇ ಇರುತ್ತೇನೆ. ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಕೆಲವರು ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆ. ಈ ರೀತಿಯ ಚೀಪ್ ಗಿಮಿಕ್ಗಳನ್ನು ಹೀಗಲಾದರೂ ಬಿಡಬೇಕು. ಎಲ್ಲರೂ ಮಂಡ್ಯ ಅಭಿವೃದ್ಧಿ ಕಡೆಗೆ ಗಮನಹರಿಸೋಣ. ನನಗೆ ಅಧಿಕಾರದ ಆಸೆ ಇಲ್ಲ. ಹೀಗಾಗಿ ಯಾವುದೇ ಭಯ ನಂಗೆ ಇಲ್ಲ ಎಂದರು.
ಪ್ರತಾಪ್ ಸಿಂಹ ಪದೇ ಪದೇ ಮಂಡ್ಯಕ್ಕೆ ಭೇಟಿ ವಿಚಾರವಾಗಿ ಮಾತನಾಡಿ, ನನಗೆ ಯಾರ ಮೇಲು ಕೋಲ್ಡ್ ವಾರ್ ಇಲ್ಲ. ನನಗೆ ಕ್ರೆಡಿಟ್ ತೆಗೆದುಕೊಳ್ಳುವ ಅನಿವಾರ್ಯವೂ ಇಲ್ಲ. ಎಲ್ಲಾ ಕೆಲಸವನ್ನು ಅವರೇ ಮಾಡಿಸುತ್ತಿದ್ದಾರೆ ಅಂದ್ರೂ ನಂಗೆ ಬೇಸರ ಇಲ್ಲ. ಹೆದ್ದಾರಿಯ ವಿಚಾರದಲ್ಲಿ ನಮ್ಮ ಜನರಿಗೆ ತೊಂದರೆ ಆದ್ರೆ ನಾನು ಹೋರಾಟ ಮಾಡುತ್ತೇನೆ. ನನ್ನಿಂದ ಯಾವುದೇ ಕಾಮಗಾರಿಗಳು ವಿಳಂಬ ಆಗಿಲ್ಲ. ಕೆಹೆಚ್ಪಿ ಕಾಲೋನಿಯ ರಸ್ತೆಯ ಬಗ್ಗೆ ಈ ಹಿಂದೆ ಅಧಿಕಾರಿಗಳಿಗೆ ಹೇಳಿದ್ದೆ. ದಿಶಾ ಸಭೆಯಲ್ಲಿ ರಸ್ತೆ ಸರಿ ಪಡಿಸಲು ಸೂಚನೆ ನೀಡಿದ್ದೆ. ಆ ಕಾಮಗಾರಿ ಪೂರ್ಣವಾಗುವಾಗ ಅವರು ಅಲ್ಲಿಗೆ ಬಂದಿದ್ದಾರೆ. ಅಲ್ಲಿ ಹೋಗಿ ಫೋಟೋ ತೆಗೆಸಿಕೊಂಡು ಹಾಕುವುದರಿಂದ ಏನು ಆಗಲ್ಲ. ಅವರಿಂದಲೇ ಕೆಲಸ ಆಯ್ತು ಅಂದ್ರೆ ನಾನು ಏನು ಮಾಡೋಕು ಆಗಲ್ಲ. ನಾನು ಎಲ್ಲವನ್ನೂ ಫೋಟೋ ತೆಗೆದುಕೊಂಡು ಮಾಧ್ಯಮಗಳ ಮುಂದೆ ಬರೋಕು ಆಗಲ್ಲ. ಮಾಧ್ಯಮಗಳ ಮುಂದೆ ಬಂದು ಕೂತರೆ ಕೆಲಸ ಆಗಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಪ್ರತಾಪ್ ಸಿಂಹ ಭೇಟಿಗೆ ಸುಮಲತಾ ತಿರುಗೇಟು ನೀಡಿದರು. (ದಿಗ್ವಿಜಯ ನ್ಯೂಸ್)
VIDEO| ಎಲ್ಲರೆದುರು ಅಂಕಲ್ ಎಂದು ಕರೆದಿದ್ದಕ್ಕೆ ಸಾರಾ ಅಲಿ ಖಾನ್ಗೆ ಸಲ್ಮಾನ್ ಕೊಟ್ಟ ಪ್ರತಿಕ್ರಿಯೆ ಹೀಗಿತ್ತು…
ತನ್ನನ್ನು ತಾನೇ ಲೇಡಿ ಸಿಂಗಂ ಎಂದು ಕರೆದುಕೊಂಡು ಮಾಡಬಾರದ್ದನ್ನು ಮಾಡಿ ಸಿಕ್ಕಿಬಿದ್ದ ಸಬ್ ಇನ್ಸ್ಪೆಕ್ಟರ್!
ಮೈಸೂರಲ್ಲಿ 2ನೇ ಪತ್ನಿಯ ರುಂಡ-ಮುಂಡ ಕತ್ತರಿಸಿ ಭೀಕರ ಕೊಲೆ! ತಂದೆಯ ಕರಾಳ ಮುಖ ಬಿಚ್ಚಿಟ್ಟ 20 ವರ್ಷದ ಮಗಳು