ನವದೆಹಲಿ: ರಾಜ್ಯದಲ್ಲಿ ನಿರಂತರವಾಗಿ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದಾಗಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕಳೆದ ಮೂರು ದಿನಗಳಿಂದ ಮಳೆ ಬಿಟ್ಟು ಬಿಡದಂತೆ ಹಿಡಿದುಕೊಂಡಿದೆ. ಆಕಾಶ ತೂತು ಬಿದ್ದಿರುವಂತೆ ಮಳೆ ಬರುತ್ತಲೇ ಇದೆ. ಸೂರ್ಯನನ್ನು ನೋಡಿ ತುಂಬಾ ದಿನಗಳೇ ಕಳೆದಿರುವಂತೆ ಜನರಿಗೆ ಭಾಸವಾಗುತ್ತಿದೆ. ಕರಾವಳಿ ಭಾಗವಂತೂ ಪ್ರವಾಹದಿಂದ ಅಕ್ಷರಶಃ ತತ್ತರಿಸಿ ಹೋಗಿದೆ. ಮಳೆ ಕಡಿಮೆಯಾಗಬಹುದು ಎಂಬ ನಿರೀಕ್ಷೆಯಲ್ಲಿರುವ ಜನರಿಗೆ ಮತ್ತೊಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ.
ನೈರುತ್ಯ ಮಾನ್ಸೂನ್ ಮಳೆ ಆರಂಭದೊಂದಿಗೆ ಮುಂದಿನ ಕೆಲವು ದಿನಗಳವರೆಗೆ ದೇಶದ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಮಹಾರಾಷ್ಟ್ರ, ಕರ್ನಾಟಕ, ಗೋವಾ ಮತ್ತು ಕೇರಳ ರಾಜ್ಯಗಳಲ್ಲಿ ಮಳೆ ಮುಂದುವರಿಯಲಿದೆ. ಅಲ್ಲದೆ, ದೆಹಲಿ ಮತ್ತು ಗುಜರಾತ್ ಪ್ರದೇಶವನ್ನು ಮಳೆ ಆವರಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ಮಹಾರಾಷ್ಟ್ರ ರಾಜಧಾನಿ ಮುಂಬೈನಲ್ಲಿ ಶುಕ್ರವಾರ ಭಾರೀ ಮಳೆಯಾಗಿದ್ದು, ಐಎಂಡಿ ರೆಡ್ ಅಲರ್ಟ್ ಘೋಷಿಸಿದೆ. ಕೊಂಕಣ ಪ್ರದೇಶದಲ್ಲಿ ಜುಲೈ 11ರವರೆಗೂ ಭಾರೀ ಮಳೆಯಾಗಲಿದೆ. ಕೊಂಕಣ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಎಲ್ಲ ಜಿಲ್ಲೆಗಳಲ್ಲಿ ಜುಲೈ 11ರವರೆಗೆ ಧಾರಾಕಾರ ಮಳೆಯಾಗಲಿದೆ ಎಂದು ಐಎಂಡಿ ಎಚ್ಚರಿಸಿದೆ.
ಇನ್ನೂ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಐಎಂಡಿ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಮುಂದಿನ ಕೆಲ ದಿನಗಳವರೆಗೆ ಮಳೆರಾಯ ತನ್ನ ಆರ್ಭಟ ಮುಂದುವರಿಸಲಿದ್ದಾನೆ. ಬಡಾಕೆರೆ ಗ್ರಾಮದಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಉಡುಪಿ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಜಮೀನು ಜಲಾವೃತಗೊಂಡಿದೆ. ಕಲಬುರಗಿಯ ಜಿಲ್ಲಾಧಿಕಾರಿ ಯಶವಂತ್ ಗುರುಕರ್ ಶಾಲಾಕಾಲೇಜುಗಳಿಗೆ ಜುಲೈ 9ರವರೆಗೆ ರಜೆ ಘೋಷಣೆ ಮಾಡಿದ್ದಾರೆ. ಅಲ್ಲದೆ, ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಿದ್ದಾರೆ. ತಮ್ಮ ಅಧ್ಯಕ್ಷತೆಯಲ್ಲಿ ಶುಕ್ರವಾರ ಮಳೆ ಪೀಡಿತ 13 ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ಸಭೆ ನಡೆಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಪರಿಸ್ಥಿತಿ ಅವಲೋಕನ ನಡೆಸಿದರು.
ಕೇರಳದಲ್ಲಿ ಮಳೆರಾಯನ ಅಬ್ಬರ ಕೊಂಚ ತಗ್ಗಿದೆ. ಹೀಗಾಗಿ ಅಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಮುಂದಿನ ಐದು ದಿನಗಳವರೆಗೆ ಕೇರಳದ ಕೆಲವು ಪ್ರದೇಶಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ. ಕೇರಳ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ವ್ಯಾಪಕ ಮಳೆ ಮತ್ತು ಗುಡುಗು-ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು IMD ಈ ಹಿಂದೆಯು ಹೇಳಿದೆ.
ರೆಡ್ ಅಲರ್ಟ್ ಘೋಷಿಸಿದ ನಂತರ ಗೋವಾ ಸರ್ಕಾರ ಜುಲೈ 9 ರಂದು 1 ರಿಂದ 8 ನೇ ತರಗತಿಯವರೆಗೆ ಓದುತ್ತಿರುವ ವಿದ್ಯಾರ್ಥಿಗಳಿಗೆ ರಜೆ ಘೋಷಿಸಿತು. ಜುಲೈ 9 ಕ್ಕೆ ಹಿಮಾಚಲ ಪ್ರದೇಶದ ಕಂಗ್ರಾ, ಮಂಡಿ, ಸಿರ್ಮೌರ್ ಮತ್ತು ಸೋಲನ್ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಿದೆ. ಮುಂದಿನ ಐದು ದಿನಗಳವರೆಗೆ ಮಳೆ ಮುಂದುವರಿಯಲಿದೆ ಎಂದು ಐಎಂಡಿ ಶಿಮ್ಲಾದ ಹಿರಿಯ ವಿಜ್ಞಾನಿ ಎಸ್.ಕೆ. ಶರ್ಮಾ ಎಚ್ಚರಿಸಿದ್ದಾರೆ. (ಏಜೆನ್ಸೀಸ್)
ಅಮರನಾಥ ಮೇಘಸ್ಫೋಟ: ಸಾವಿನ ಸಂಖ್ಯೆ 16ಕ್ಕೇರಿಕೆ, 15 ಸಾವಿರಕ್ಕೂ ಹೆಚ್ಚು ಯಾತ್ರಿಗಳ ರಕ್ಷಣೆ
ಪ್ರಿಯಾ ಆನಂದ್ಗೆ ನಿತ್ಯಾನಂದರನ್ನು ಮದ್ವೆಯಾಗೋ ಆಸೆಯಂತೆ! ಕಾಲಿವುಡ್ ಬ್ಯೂಟಿ ಕೊಟ್ಟ ಕಾರಣ ಹೀಗಿದೆ…
ಇಂಡೋನೇಷ್ಯಾದ ಕುವರಿಯನ್ನು ವರಿಸಿದ ಕೇರಳದ ಕುಬ್ಜ: ಇವರಿಬ್ಬರ ಲವ್ ಸ್ಟೋರಿಯೇ ರೋಚಕ!