More

    ಆರ್.ಪ್ರಸನ್ನಕುಮಾರ್ ಮತ್ತೆ ಒಲಿದ ಅಧ್ಯಕ್ಷ ಸ್ಥಾನ

    ಶಿವಮೊಗ್ಗ: ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಪ್ರಸನ್ನಕುಮಾರ್ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಇದರೊಂದಿಗೆ ಎಂಟು ವರ್ಷಗಳ ಬಳಿಕ ಮತ್ತೊಮ್ಮೆ ಅಧ್ಯಕ್ಷರಾದಂತಾಗಿದೆ.

    2006ರಿಂದ 2016ರವರೆಗೆ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕಾಂಗ್ರೆಸ್ ಅನೇಕ ಏಳು-ಬೀಳುಗಳನ್ನು ಕಂಡಿತ್ತು. ಈ ಅವಧಿಯಲ್ಲಿ ನಡೆದ ಯಾವ ಲೋಕಸಭೆ ಚುನಾವಣೆಯಲ್ಲೂ ಪಕ್ಷ ಜಯಗಳಿಸಿರಲಿಲ್ಲ. ಆದರೆ 2013ರ ವಿಧಾನಸಭೆ ಚುನಾವಣೆಯಲ್ಲಿ ಬದಲಾದ ರಾಜಕೀಯ ಸಂದರ್ಭದ ಪ್ರಯೋಜನ ಪಡೆದಿದ್ದ ಕಾಂಗ್ರೆಸ್ ಜಿಲ್ಲೆಯಲ್ಲಿ ಮೂರು ಸ್ಥಾನಗಳನ್ನು ಗಳಿಸಿತ್ತು. ರಾಜ್ಯದಲ್ಲಿ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಿತು.
    ಬಳಿಕ ಆರ್.ಪ್ರಸನ್ನಕುಮಾರ್ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರು. ಎರಡನೇ ಬಾರಿಗೆ ಅವರಿಗೆ ಅದೃಷ್ಟ ಕೈ ಕೊಟ್ಟಿತು. ಈಗ ಜಿಲ್ಲಾ ಕಾಂಗ್ರೆಸ್‌ನಲ್ಲಿ ಎಚ್.ಎಸ್.ಸುಂದರೇಶ್ ಅವರ ಐದು ವರ್ಷಗಳ ಆಡಳಿತ ಮುಕ್ತಾಯವಾಗಿದೆ. ಲೋಕಸಭೆ ಚುನಾವಣೆಗೆ ತಿಂಗಳು ಬಾಕಿ ಇರುವಂತೆಯೇ ಆರ್.ಪ್ರಸನ್ನಕುಮಾರ್‌ಗೆ ಸಾರಥ್ಯ ದೊರೆತಿದೆ.
    ಇದು ಪ್ರತಿಷ್ಠೆಯ ಚುನಾವಣೆ: ಈ ಬಾರಿಯ ಲೋಕಸಭೆ ಚುನಾವಣೆ ಕಾಂಗ್ರೆಸ್‌ಗೆ ಪ್ರತಿಷ್ಠೆಯಾಗಿದೆ. ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಗೀತಾ ಶಿವರಾಜ್‌ಕುಮಾರ್ ಗೌರವವನ್ನು ಉಳಿಸುವ ಕೆಲಸವನ್ನು ಕಾರ್ಯಕರ್ತರೊಂದಿಗೆ ಸೇರಿ ಮಾಡುತ್ತೇನೆ ಎಂದು ಆರ್.ಪ್ರಸನ್ನಕುಮಾರ್ ಹೇಳಿದರು.
    ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಕಾಂಗ್ರೆಸ್‌ನ ಎಲ್ಲ ಘಟಕಗಳನ್ನು ಒಟ್ಟಾಗಿ ಕೊಂಡೊಯ್ಯುತ್ತೇನೆ. ಎಲ್ಲರ ಮನಸ್ತಾಪಗಳನ್ನು ದೂರ ಮಾಡುತ್ತೇನೆ. ಎಲ್ಲರನ್ನೂ ವಿಶ್ವಾಸ ಪಡೆಯುತ್ತೇನೆ ಎಂದರು.
    ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಚುನಾವಣಾ ಬಾಂಡ್ ವಿಷಯದಲ್ಲಿ ಬಿಜೆಪಿಯ ಬಣ್ಣ ಬಯಲಾಗಿದೆ. ಇದೆಲ್ಲವನ್ನೂ ಮತದಾರರು ಗಮನಿಸಿದ್ದಾರೆ. ದೇಶದಲ್ಲೇ ಅತ್ಯಂತ ವಿಶೇಷ ಎನಿಸಿರುವ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯ ಸರ್ಕಾರ ಗಮನಸೆಳೆದಿದೆ. ಇದೆಲ್ಲವನ್ನೂ ಜನರಿಗೆ ವಿವರಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
    ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್, ಮಾಜಿ ಮೇಯರ್ ಎಸ್.ಕೆ.ಮರಿಯಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಎಸ್.ಚಂದ್ರಭೂಪಾಲ, ಎಚ್.ಸಿ.ಯೋಗೇಶ್, ಎಸ್.ಪಿ.ದಿನೇಶ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನಿತಾ ಕುಮಾರಿ, ಎಐಸಿಸಿ ಸದಸ್ಯೆ ಬಲ್ಕಿಶ್ ಬಾನು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts