More

    ಆನ್​ಲೈನ್​ನಲ್ಲಿ 1.45 ಕೋಟಿ ರೂ. ವ್ಯವಹಾರ ನಡೆಸಿದ್ದ ಸಾಮಾನ್ಯ ಮಹಿಳೆಯ ಸಾವಿನ ರಹಸ್ಯ ಕೊನೆಗೂ ಬಯಲು

    ಕೊಯಿಕ್ಕೋಡ್​: ಕೇರಳದಲ್ಲಿ ನಿಗೂಢವಾಗಿ ಮೃತಪಟ್ಟಿದ್ದ ಬಿಜಿಶಾ ಎಂಬಾಕೆಯ ಸಾವಿನ ಪ್ರಕರಣದ ತನಿಖೆ ನಡೆಸುತ್ತಿದ್ದ ಕೇರಳದ ಸಿಸಿಬಿ ತಂಡ ಕೊನೆಗೂ ಸಾವಿಗೆ ಕಾರಣವನ್ನು ಕೊಂಡುಕೊಂಡಿದೆ. ಬಿಜಿಶಾ ಸಾವು ಆತ್ಮಹತ್ಯೆಯಾಗಿದ್ದು, ಆನ್​ಲೈನ್​ ರಮ್ಮಿ ಗೇಮ್​ ಆಕೆಯ ಸಾವಿಗೆ ಕಾರಣ ಎಂದು ತಿಳಿದುಬಂದಿದೆ.

    ಚೆಲಾಯಿಲ್​ ಮೂಲದ ಬಿಜಿಶಾ ಖಾಸಗಿ ಟೆಲಿಕಾಂ ಸ್ಟೋರ್​ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. 2021ರ ಡಿಸೆಂಬರ್​ 12ರಂದು ಜೊಯಿಲ್ಯಾಂಡಿಯಲ್ಲಿರುವ ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಆರಂಭದಲ್ಲಿ ಆತ್ಮಹತ್ಯೆ ಹಿಂದಿನ ಪ್ರೇರಣೆಯನ್ನು ಕಂಡುಹಿಡಿಯುವಲ್ಲಿ ಪೊಲೀಸರು ವಿಫಲವಾಗಿದ್ದರು. ಪ್ರಕರಣ ನಡೆದ ಒಂದು ತಿಂಗಳ ಬಳಿಕ ಆಕೆಯ ಸಾವಿನ ಹಿಂದಿನ ಪ್ರೇರಣೆಯನ್ನು ಪೊಲೀಸರು ಬಯಲು ಮಾಡಿದ್ದರು. ಯುಪಿಐ ಆ್ಯಪ್​ ಮೂಲಕ ತನ್ನ ಎರಡು ಬ್ಯಾಂಕ್​ ಖಾತೆಗಳಿಂದ ಬರೋಬ್ಬರಿ 1 ಕೋಟಿ ರೂ. ವ್ಯವಹಾರ ನಡೆಸಿರುವುದು ಬೆಳಕಿಗೆ ಬಂದಿತ್ತು. ಆದರೆ, ಯಾವುದಕ್ಕಾಗಿ ಹಣಕಾಸು ವ್ಯವಹಾರ ಎಂದು ತಿಳಿದಿರಲಿಲ್ಲ.

    ಆಕೆಯ ಆಪ್ತರಿಗಾಗಲಿ ಅಥವಾ ಕುಟುಂಬಕ್ಕಾಗಲಿ ಹಣದ ವ್ಯವಹಾರದ ಬಗ್ಗೆ ಮಾಹಿತಿ ಇರಲಿಲ್ಲ. ಇದಲ್ಲದೇ ಆಕೆಯ ಮದುವೆಗಾಗಿ ಇಟ್ಟಿದ್ದ 35 ಸವರನ್​ ಚಿನ್ನವನ್ನು ಸಹ ಒತ್ತೆ ಇಟ್ಟು ಬ್ಯಾಂಕ್ ಸಾಲ ಪಡೆದಿದ್ದಳು. ಬಿಜಿಶಾ ಸಾವಿನ ನಂತರ ಬ್ಯಾಂಕ್​ ವ್ಯವಹಾರಗಳಿಗೆ ಸಂಬಂಧಿಸಿದಂತೆ ಯಾರೂ ತಮ್ಮನ್ನು ಸಂಪರ್ಕಿಸಿಲ್ಲ ಎಂದು ಕುಟುಂಬವು ಸಹ ಇದೇ ಸಂದರ್ಭದಲ್ಲಿ ಬಹಿರಂಗಪಡಿಸಿತ್ತು.

    ಸಂಪೂರ್ಣ ವಹಿವಾಟುಗಳು UPI ಅಪ್ಲಿಕೇಶನ್‌ಗಳ ಮೂಲಕ ನಡೆದಿರುವುದಿಂದ ಯಾವುದೇ ಮಾಹಿತಿಯನ್ನು ಹಿಂಪಡೆಯಲು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ. ಆದರೆ, ತಾಜಾ ಬೆಳವಣಿಗೆಯಲ್ಲಿ ಬಿಜಿಶಾ ಸಾವಿಗೆ ಆನ್​ಲೈನ್​ ರಮ್ಮಿ ಜೂಜಾಟವೇ ಕಾರಣ ಎಂಬುದು ಸ್ಪಷ್ಟವಾಗಿದೆ. ರಮ್ಮಿ ಗೇಮ್​ಗಾಗಿ ಬಿಜಿಶಾ ಅವರು 1.45 ಕೋಟಿ ರೂಪಾಯಿಗಳ ಹಣಕಾಸು ವ್ಯವಹಾರ ನಡೆಸಿರುವುದು ಪೊಲೀಸರಿಗೆ ಗೊತ್ತಾಗಿದೆ. ರಮ್ಮಿ ಆಟದಿಂದ ಬಿಜಿಶಾಗೆ ಲಕ್ಷ ಲಕ್ಷ ರೂಪಾಯಿ ನಷ್ಟವಾಗಿರುವುದು ಬೆಳಕಿಗೆ ಬಂದಿದೆ.

    ಕೋವಿಡ್​ ಸಮಯದಲ್ಲಿ ಬಿಜಿಶಾ ಆನ್​ಲೈನ್​ ಗೇಮ್​ನಲ್ಲಿ ಬಿಜಿಯಾಗಿರುತ್ತಿದ್ದಳು ಎಂಬುದು ತನಿಖಾ ತಂಡ ಪತ್ತೆಹಚ್ಚಿದೆ. ಆರಂಭದಲ್ಲಿ ಸಣ್ಣ ಪುಟ್ಟ ಗೇಮ್​ಗಳನ್ನು ಆಡಲು ಆರಂಭಿಸಿದ ಬಿಜಿಶಾ, ನಂತರ ದೊಡ್ಡ ಮೊತ್ತವನ್ನು ವ್ಯಯಿಸಿ ಆನ್‌ಲೈನ್ ರಮ್ಮಿಯಂತಹ ಆಟಗಳಿಗೆ ಬದಲಾದಳು. ಆಕೆ ಯುಪಿಐ ಆ್ಯಪ್ ಮೂಲಕ ಆನ್‌ಲೈನ್ ಗೇಮಿಂಗ್‌ಗಾಗಿ ಹಣಕಾಸು ವಹಿವಾಟು ನಡೆಸಿದ್ದಾಳೆ. ಸತತವಾಗಿ ಹಣ ಕಳೆದುಕೊಂಡ ಬಳಿಕ ಮನೆಯವರು ತನ್ನ ಮದುವೆಗಾಗಿ ಇಟ್ಟಿದ್ದ ಚಿನ್ನವನ್ನು ಸಹ ಒತ್ತೆ ಇಟ್ಟಿದ್ದಾಳೆ. ಇದಲ್ಲದೆ, ಆನ್‌ಲೈನ್‌ನಲ್ಲಿ ಸಾಲ ನೀಡುವ ಕೆಲವು ಕಂಪನಿಗಳಿಂದಲೂ ಬಿಜಿಶಾ ಹಣವನ್ನು ಎರವಲು ಪಡೆದಿದ್ದಾಳು. ಸಾಲವನ್ನು ಮರುಪಾವತಿಸಲು ವಿಫಲವಾದಾಗ, ಕಂಪನಿಗಳು ಅವಳ ಸ್ನೇಹಿತರಿಗೆ ಸಂದೇಶಗಳನ್ನು ಕಳುಹಿಸುವ ಮೂಲಕ ಸಾಲ ಮರುಪಾವತಿಗೆ ಒತ್ತಾಯಿಸಿವೆ. ಇದರ ಒತ್ತಡದಿಂದಲೇ ಬಿಜಿಶಾ ಆತ್ಮಹತ್ಯೆಗೆ ಶರಣಾಗಿದ್ದಾಳೆಂದು ತನಿಖಾ ತಂಡ ಹೇಳಿದೆ.

    ಅಂದಹಾಗೆ ಬಿ.ಇಡಿ ಪದವೀಧರೆಯಾಗಿದ್ದ ಬಿಜಿಶಾ ಖಾಸಗಿ ಟೆಲಿಕಾಂ ಕಂಪನಿಯೊಂದರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಆಕೆ ಇಷ್ಟೊಂದು ಹಣದ ವ್ಯವಹಾರ ಮಾಡಿರುವುದನ್ನು ನೋಡಿ ಪೊಲೀಸರೇ ಬೆರಗಾಗಿದ್ದರು. ಡಿಸೆಂಬರ್​ 12ರಂದು ಎಂದಿನಂತೆ ಕೆಲಸ ಮುಗಿಸಿಕೊಂಡು ಮನೆಗೆ ಮರಳಿದ ಬಳಿಕ ಆಕೆಯ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. (ಏಜೆನ್ಸೀಸ್​)

    ಬಿರು ಬಿಸಿಲಿಗೆ ಜನತೆ ಸುಸ್ತು!; ಮುಂದಿನ 3 ದಿನ ತಾಪಮಾನ ಏರಿಕೆ..

    ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು?

    ಕರೊನಾ ಪರಿಹಾರ ಮಾರ್ಗಸೂಚಿ: ಮೇ 23ರೊಳಗೆ ಅರ್ಜಿ ಸಲ್ಲಿಸಲು ಸೂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts