ಲಂಡನ್: ಕಳೆದು ಹೋಗಿದ್ದ ವೆಡ್ಡಿಂಗ್ ರಿಂಗ್ 50 ವರ್ಷಗಳ ಬಳಿಕ ಪತ್ತೆಯಾಗಿರುವ ವಿರಾಳಾತಿವಿರಳ ಘಟನೆ ಬ್ರಿಟನ್ ಬಳಿಯ ಔಟರ್ ಹೆಬ್ರಿಡೆಸ್ ದ್ವೀಪದಲ್ಲಿ ನಡೆದಿದೆ. ಮೂರು ದಿನಗಳ ಹುಡುಕಾಟದ ಬಳಿಕ ಕೊನೆಗೂ ರಿಂಗ್ ಪತ್ತೆಹಚ್ಚಲಾಗಿದೆ.
ಪೆಗ್ಗಿ ಮ್ಯಾಕ್ಸ್ವೀನಿ (86) ಎಂಬಾಕೆ 50 ವರ್ಷಗಳ ಹಿಂದೆ ತಮ್ಮ ಮನೆಯ ಮುಂಭಾಗದ ಆವರಣದಲ್ಲಿ ಆಲುಗೆಡ್ಡೆ ಸಂಗ್ರಹಿಸುವ ವೇಳೆ ಕೈ ಬೆರಳಿಂದ ಉಂಗುರ ಜಾರಿ ಕೆಳಗೆ ಬಿದ್ದಿತ್ತು. ಬಳಿಕ ಉಂಗುರಕ್ಕಾಗಿ ಸಾಕಷ್ಟು ಹುಡುಕಾಡಿದರೂ ಕೂಡ ಪ್ರಯೋಜನವಾಗಲಿಲ್ಲ. ಕೊನೆಗೆ ಮ್ಯಾಕ್ಸ್ವೀನಿ ಅವರು ಹುಡುಕುವ ಭರವಸೆಯನ್ನೇ ಕಳೆದುಕೊಂಡರು.
ಮೆಟಲ್ ಡಿಟೆಕ್ಟರ್ (ಲೋಹಪತ್ತೆಗಾರ) ಡೊನಾಲ್ಡ್ ಮ್ಯಾಕ್ಫೀ ಅವರು ಇತ್ತೀಚೆಗೆ ರಿಂಗ್ ಕಳೆದು ಹೋಗಿರುವುದರ ಬಗ್ಗೆ ತಿಳಿದುಕೊಂಡರು. ಬಳಿಕ ಅದನ್ನು ಹುಡುಕುವ ನಿರ್ಧಾರ ಮಾಡಿ ಮ್ಯಾಕ್ಸ್ವೀನಿ ಅವರ ಮನೆಗೆ ಹೋದರು. ಬಳಿಕ ರಿಂಗ್ ಕಳೆದು ಹೋದ ಜಾಗದಲ್ಲಿ ಮೆಟಲ್ ಡಿಟೆಕ್ಟರ್ ಸಹಾಯದಿಂದ ಹುಡುಕಲು ಆರಂಭಿಸಿದ ಮ್ಯಾಕ್ಫೀಗೆ ಮೊದಲ ದಿನ ರಿಂಗ್ ಪತ್ತೆಯಾಗಲಿಲ್ಲ. ಎರಡನೇ ದಿನವೂ ನಿರಾಸೆ ಕಾದಿತ್ತು. ಮೂರನೇ ದಿನದ ಕಾರ್ಯಾಚರಣೆಗೆ ಇಳಿದ ಮ್ಯಾಕ್ಫೀಗೆ ಅಚ್ಚರಿ ಕಾದಿತ್ತು. ಅದೇನೆಂದರೆ, 50 ವರ್ಷದ ಹಿಂದೆ ಕಳೆದು ಹೋಗಿದ್ದ ರಿಂಗ್ ಮತ್ತೆ ಪತ್ತೆಯಾಯಿತು.
ಈ ಬಗ್ಗೆ ಮಾತನಾಡಿರುವ ಮ್ಯಾಕ್ಫೀ, ಇದು ಸ್ವಲ್ಪ ಭಾವನಾತ್ಮಕವಾಗಿದೆ ಎಂದಿದ್ದಾರೆ. ಉಂಗುರ ಕಳೆದುಹೋದ ಪ್ರದೇಶವು ಮದ್ಯ ಪ್ರಿಯರ ಪ್ರಮುಖ ಕೇಂದ್ರವೆಂದು ಗುರುತಿಸಲ್ಪಟ್ಟಿದೆ. ಒಟ್ಟು 5,000 ಚದರ ಮೀಟರ್ ಪ್ರದೇಶದಲ್ಲಿ 90 ಗಂಟೆಗಳ ಹುಡುಕಾಟದ ನಂತರ ಉಂಗುರವು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ಇಷ್ಟು ದಿನಗಳಲ್ಲಿ ಸುಮಾರು 90 ಗುಂಡಿ ತೋಡಿದ್ದೇನೆ. ಕುದುರೆ ಬೆಲ್ಟ್ಗಳು, ಬಂಡಿಗಳು ಮತ್ತು ಇತರ ವಸ್ತುಗಳು ಸಹ ಪತ್ತೆಯಾಗಿವೆ. ಉಂಗುರ ಪತ್ತೆಯಾಗುವುದು ಒಂದು ಲಕ್ಷದಲ್ಲಿ ಒಂದು ಪ್ರಕರಣಗಳಲ್ಲಿ ಮಾತ್ರ ಸಾಧ್ಯವಾಗುತ್ತದೆ. ನಿಜವಾಗಿಯೂ ಇದು ಬಹುದೊಡ್ಡ ಅದೃಷ್ಟವೇ ಸರಿ ಎಂದು ಮ್ಯಾಕ್ಫೀ ಆ ಕ್ಷಣವನ್ನು ವರ್ಣಿಸಿದ್ದಾರೆ. 50 ವರ್ಷಗಳ ಹಿಂದೆ ಕಳೆದು ಹೋದ ಉಂಗುರವನ್ನು ಮ್ಯಾಕ್ಸ್ವೀನಿ ಅವರ ಕೈಗೆ ನೀಡಿದಾಗ ಅವರು ಆಶ್ಚರ್ಯಚಕಿತರಾದರು ಮತ್ತು ತುಂಬಾ ಸಂತೋಷಪಟ್ಟರು ಎಂದು ಮ್ಯಾಕ್ಫೀ ಹೇಳಿದ್ದಾರೆ.
ಮ್ಯಾಕ್ಸ್ವೀನಿ ಸಹ ಮಾತನಾಡಿದ್ದು, ಮ್ಯಾಕ್ಫೀ ನನ್ನ ಬಳಿಗೆ ಬಂದಾಗ ನಿನ್ನ ಕೈಯಲ್ಲಿ ಏನಾದರೂ ಇದೆಯೇ ಎಂದು ಕೇಳಿದೆ. ಅವರು ನನಗೆ ಉಂಗುರವನ್ನು ತೋರಿಸಿದಾಗ ನನಗೆ ನಂಬಲಾಗಲಿಲ್ಲ. ಆದರೆ, ನಾನು ಅದನ್ನು ಮತ್ತೆ ನೋಡುತ್ತೇನೆ ಎಂದು ನಾನು ಭಾವಿಸಿಯೂ ಇರಲಿಲ್ಲ. ಆ ದಿನ ಉಂಗುರವು ನನ್ನ ಕೈಯಿಂದ ಕಣ್ಮರೆಯಾಯಿತು. ಸಾಕಷ್ಟ ಹುಡುಕಾಡಿದರೂ ಸಿಗಲಿಲ್ಲ ಎಂದು ಹೇಳಿದ್ದಾರೆ. (ಏಜೆನ್ಸೀಸ್)
ಎಂ.ಎಸ್. ಧೋನಿ ಜತೆ ಬ್ರೇಕಪ್ ಆಗಿದ್ದೇಕೆ? ಬೆಳಗಾವಿ ಬ್ಯೂಟಿ ಲಕ್ಷ್ಮೀ ರೈ ಹೇಳಿದ್ದು ಹೀಗೆ…
ಒಮಿಕ್ರಾನ್ ಎಲ್ಲರನ್ನು ಕೊಲ್ಲಲಿದೆ: ಪತ್ನಿ, ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ವೈದ್ಯ!
ನನ್ಮೇಲೆ ರೇಪ್ ಆಗಿದೆ ಎಂದು ತಾಯಿಯ ವಿರುದ್ಧವೇ 13 ವರ್ಷದ ಮಗನ ದೂರು: ತನಿಖೆಯಲ್ಲಿ ಸತ್ಯಾಂಶ ಬಯಲು