ಲಖನೌ: ಉತ್ತರ ಪ್ರದೇಶ ರಾಜಧಾನಿ ಲಖನೌದಲ್ಲಿ ತನ್ನ 82 ವರ್ಷದ ಮಾಲಕಿಯನ್ನೇ ಕಚ್ಚಿ ಕಚ್ಚಿ ಭೀಕರವಾಗಿ ಕೊಂದ ಪಿಟ್ಬುಲ್ ಶ್ವಾನವನ್ನು ದತ್ತು ಪಡೆಯಲು ಸಾಕಷ್ಟು ಮಂದಿ ಉತ್ಸಾಹ ತೋರಿರುವುದು ಭಾರೀ ಅಚ್ಚರಿಗೆ ಕಾರಣವಾಗಿದೆ.
ಸುಮಾರು ಅರ್ಧ ಡಜನ್ಗೂ ಹೆಚ್ಚು ಮಂದಿ ಮತ್ತು ಎನ್ಜಿಒಗಳು ಲಖನೌ ಮಹಾನಗರ ಪಾಲಿಕೆಯನ್ನು ಸಂಪರ್ಕಿಸಿದ್ದು, ಶ್ವಾನವನ್ನು ದತ್ತು ಪಡೆಯುವ ಬಯಕೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಮಾಲಕಿಯನ್ನು ಅಷ್ಟೊಂದು ಭೀಕರವಾಗಿ ಶ್ವಾನ ಕಚ್ಚಿ ಕಚ್ಚಿ ಕೊಂದು ಹಾಕಿದ್ದರೂ, ಅದನ್ನು ದತ್ತು ಪಡೆಯಲು ಜನರು ಅಷ್ಟೊಂದು ಉತ್ಸಾಹ ಯಾಕೆ ಹೊಂದಿದ್ದಾರೆ ಎಂಬುದೇ ಅನೇಕರಿಗೆ ಹುಬ್ಬೇರಿಸುವ ಸಂಗತಿಯಾಗಿದೆ. ಅಲ್ಲದೆ, ಕಾರಣವನ್ನು ಹುಡುಕುವ ಪ್ರಯತ್ನವನ್ನು ಮಾಡುತ್ತಿದ್ದಾರೆ.
ಲಖನೌದ ಕೈಸರ್ಬಾಘ್ನಲ್ಲಿ ಸುಶೀಲಾ ತ್ರಿಪಾಠಿ ಎಂಬುವರು ತಮ್ಮ 25 ವರ್ಷದ ಮಗ ಅಮಿತ್ ತ್ರಿಪಾಠಿ ಜೊತೆ ವಾಸವಿದ್ದರು. ಅಮಿತ್, ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಜುಲೈ 12ರಂದು ಸಾಕು ನಾಯಿ ಪಿಟ್ ಬುಲ್ ಸುಶೀಲಾ ಅವರ ಮೇಲೆ ದಾಳಿ ಮಾಡಿ ಭೀಕರವಾಗಿ ಕೊಂದಿತ್ತು. ಮನೆಯಲ್ಲಿ ಯಾರೂ ಇಲ್ಲದ ಕಾರಣ, ನಾಯಿಯಾದರೂ ಸಾಕೋಣ ಎಂಬ ಆಸೆಯಿಂದ ಸುಶೀಲಾ ಅವರು ಪಿಟ್ಬುಲ್ ನಾಯಿಯನ್ನು ಮೂರು ವರ್ಷಗಳ ಹಿಂದಷ್ಟೇ ತೆಗೆದುಕೊಂಡು ಬಂದಿದ್ದರು.
ದಾಳಿಯ ಬಳಿಕ ದೆಹಲಿಯ ಪಾಲಿಕೆ ಶ್ವಾನವನ್ನು ನಗರ್ ನಿಗಮ್ನಲ್ಲಿರುವ ಪ್ರಾಣಿಗಳ ಜನನ ನಿಯಂತ್ರಣ ಕೇಂದ್ರಕ್ಕೆ ಕಳುಹಿಸಿತು. ಶ್ವಾನವನ್ನು ನೋಡಿಕೊಳ್ಳಲು ನಾಲ್ಕು ಮಂದಿಯನ್ನು ನೇಮಿಸಲಾಯಿತು. ಇದೀಗ ಅಧಿಕಾರಿಗಳ ಪ್ರಕಾರ ಅರ್ಧ ಡಜನ್ಗೂ ಅಧಿಕ ಮಂದಿ ಮತ್ತು ಎನ್ಜಿಒಗಳು ನಾಯಿಯನ್ನು ದತ್ತು ಸ್ವೀಕರಿಸಲು ಮುಂದೆ ಬಂದಿದ್ದಾರೆ. ಬೆಂಗಳೂರು, ದೆಹಲಿ, ಲಖನೌ ಮತ್ತು ದೇಶದ ಇತರೆ ಭಾಗದ ಎನ್ಜಿಒಗಳು ಶ್ವಾನವನ್ನು ದತ್ತು ಪಡೆಯಲು ಉತ್ಸುಕರಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಸಂಸದೆ ಮತ್ತು ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಮನೇಕಾ ಗಾಂಧಿ ಅವರು ನಾಯಿಯನ್ನು ಅದರ ಮಾಲೀಕರಿಗೆ ಹಿಂತಿರುಗಿಸುವಂತೆ ಕೇಳಿಕೊಂಡಿದ್ದಾರೆ. ಆದರೆ, ಅಧಿಕಾರಿಗಳು ನಿಯಮಾನುಸಾರ ಕ್ರಮ ಕೈಗೊಂಡು ನಂತರ ದತ್ತು ನೀಡುವ ಬಗ್ಗೆ ತೀರ್ಮಾನಿಸುತ್ತಾರೆ. (ಏಜೆನ್ಸೀಸ್)
ದಕ್ಷಿಣ ಕನ್ನಡದಲ್ಲಿ ಪುನಃ ಆಧಿಪತ್ಯಕ್ಕೆ ಕಮಲೋತ್ಸಾಹ; ಕಾಂಗ್ರೆಸ್ಗೆ ಎಸ್ಡಿಪಿಐ ತಲೆನೋವು..
ಯಶ್-ಉಪ್ಪಿ ಜತೆ ನಟಿಸಲು ಇಷ್ಟ; ದಿ ಲೆಜೆಂಡ್ ಸುದ್ದಿಗೋಷ್ಠಿಯಲ್ಲಿ ಊರ್ವಶಿ ಮಾತು