ಕೋಯಿಕ್ಕೋಡ್: ದಿನಗೂಲಿ ನೌಕರನೊಬ್ಬ ಪಂಚಾಯತ್ ಕಚೇರಿ ಮಹಿಳಾ ಉದ್ಯೋಗಿಯೊಬ್ಬರಿಗೆ ಬೆಂಕಿಯಿಟ್ಟು, ತಾನೂ ಬೆಂಕಿ ಹಚ್ಚಿಕೊಂಡು ದಾರುಣವಾಗಿ ಮೃತಪಟ್ಟಿರುವ ಘಟನೆ ಕೇರಳದ ಕೋಯಿಕ್ಕೋಡ್ನಲ್ಲಿ ನಡೆದಿದೆ.
ಸಿಂಧೂರಿ ಅಲಿಯಾಸ್ ಕೃಷ್ಣಪ್ರಿಯಾ (22) ಕೊಲೆಯಾದ ದುರ್ದೈವಿ. ಥಿಕ್ಕೋಡಿ ನಿವಾಸಿ ನಂದನ್ಕುಮಾರ್ (26) ಎಂಬಾತ ಕೃಷ್ಣಪ್ರಿಯಾಗೆ ಬೆಂಕಿಯಿಟ್ಟು ತಾನೂ ಬೆಂಕಿ ಹಚ್ಚಿಕೊಂಡಿದ್ದ. ಗಂಭೀರ ಸುಟ್ಟಗಾಯಗಳಿಂದ ಬಳಲುತ್ತಿದ್ದ ಆತನನ್ನು ಕೋಯಿಕ್ಕೋಡ್ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಶುಕ್ರವಾರ ಕೊನೆಯುಸಿರೆಳೆದಿದ್ದಾನೆ. ಕೃಷ್ಣಪ್ರಿಯಾ ಕೂಡ ಶುಕ್ರವಾರ ರಾತ್ರಿ ಮೃತಪಟ್ಟರು.
ಸ್ನಾತಕೋತ್ತರ ಪದವಿಯಲ್ಲಿ ಕಂಪ್ಯೂಟರ್ ಸೈನ್ಸ್ ಮುಗಿಸಿದ್ದ ಕೃಷ್ಣಪ್ರಿಯಾ, ಪಂಚಾಯತ್ ಕಚೇರಿಯಲ್ಲಿ ಯೋಜನಾ ಸಹಾಯಕಿ ಹುದ್ದೆಗೆ ಕೇವಲ 8 ದಿನಗಳ ಹಿಂದಷ್ಟೇ ಸೇರಿದ್ದರು. ನಂದನ್ಕುಮಾರ್ ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದ.
ಶುಕ್ರವಾರ ಪಂಚಾಯತ್ ಕಚೇರಿಯ ಮುಂದೆಯೇ ಕೃಷ್ಣಪ್ರಿಯಾಗೆ ನಂದನ್ ಬೆಂಕಿ ಹಚ್ಚಿದ್ದ. ಬಳಿಕ ತಾನೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ. ಈ ವೇಳೆ ಪಂಚಾಯತ್ ಕಚೇರಿಯ ಸಿಬ್ಬಂದಿ ಗೋವಿಂದನ್ ಎಂಬುವರು ಸ್ಥಳೀಯರ ನೆರವಿನೊಂದಿಗೆ ಬೆಂಕಿಯನ್ನು ನಂದಿಸಿ, ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಮೃತಪಟ್ಟಿದ್ದಾರೆ.
ಮದುವೆ ಪ್ರಸ್ತಾಪವನ್ನು ಕೃಷ್ಣಪ್ರಿಯಾ ತಿರಸ್ಕರಿಸಿದ್ದಕ್ಕೆ ನಂದನ್ ಈ ಕೃತ್ಯ ಎಸಗಿದ್ದಾನೆಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಘಟನೆಗೆ ನಿಖರ ಕಾರಣ ಏನೆಂದು ತಿಳಿಯಲು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)
ಆತ್ಮಹತ್ಯೆ ತಡೆಗೆ ಹಾಸ್ಟೆಲ್ನಲ್ಲಿ ಸೀಲಿಂಗ್ ಫ್ಯಾನ್ಸ್ ತೆರವು: ವಿರೋಧದ ಮಧ್ಯೆಯೂ ಬೆಂಗ್ಳೂರಿನ IISc ಕಾರ್ಯಾಚರಣೆ
ಮದ್ವೆಯಾದ ಎರಡೇ ವರ್ಷದಲ್ಲಿ ಗಂಡ ನಾಪತ್ತೆ: ಮತ್ತೊಂದು ಮದ್ವೆಯಾದವಳಿಗೆ 12 ವರ್ಷದ ಬಳಿಕ ಶಾಕ್!