ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ನ 8 ತಂಡಗಳು ತನ್ನಲ್ಲೇ ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಿದೆ. ಉಳಿದ ಆಟಗಾರರನ್ನು ಖರೀದಿಸುವ ಇಡೀ ತಂಡಗಳ ಬಹುದೊಡ್ಡ ಹರಾಜು ಪ್ರಕ್ರಿಯೆಯನ್ನು ಕ್ರೀಡಾಭಿಮಾನಿಗಳು ಎದುರು ನೋಡುತ್ತಿದ್ದಾರೆ. ಈ ಬಾರಿ ಐಪಿಎಲ್ಗೆ ಹೊಸದಾಗಿ ಎರಡು ತಂಡಗಳು ಸೇರಿಕೊಂಡಿದ್ದು, 2022ರ 15ನೇ ಆವೃತ್ತಿಯ ಐಪಿಎಲ್ಗೆ ಉತ್ಸಾಹ ಇಮ್ಮಡಿಯಾಗಿದೆ.
ಕೆಲ ಆಟಗಾರರನ್ನು ತಂಡದಲ್ಲೇ ಉಳಿಸಿಕೊಂಡ ವಿಚಾರಕ್ಕೆ ಬಂದರೆ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡ ಎಲ್ಲರ ಗಮನ ಸೆಳೆದಿದೆ. ಸಿಎಸ್ಕೆ ತಂಡವೂ ರವೀಂದ್ರ ಜಡೇಜಾ, ಎಂ.ಎಸ್. ಧೋನಿ, ರುತುರಾಜ್ ಗಾಯಕವಾಡ್ ಮತ್ತು ಮೋಯಿನ್ ಅಲಿಯನ್ನು ತಮ್ಮಲ್ಲೇ ಉಳಿಸಿಕೊಂಡಿದ್ದು, ಉಳಿದ ಆಟಗಾರರನ್ನು ಬಿಟ್ಟುಕೊಟ್ಟಿದೆ. ಗಮನಾರ್ಹ ಅಂದರೆ ಈ ಬಾರಿ ಸಿಎಸ್ಕೆ ತನ್ನ ಮೊದಲ ಆಟಗಾರನಾಗಿ 16 ಕೋಟಿ ಸಂಬಳದೊಂದಿಗೆ ರವೀಂದ್ರ ಜಡೇಜಾರನ್ನು ಉಳಿಸಿಕೊಂಡಿತು.
ಈ ಹಿಂದಿನ ಆವೃತ್ತಿಗಳಲ್ಲಿ ಮೊದಲು ಎಂ.ಎಸ್. ಧೋನಿ ಅವರನ್ನು ಮೊದಲ ಆಟಗಾರನಾಗಿ ಸಿಎಸ್ಕೆ ಉಳಿಕೊಂಡು ಬಂದಿತ್ತು. ಆದರೆ, ಈ ಬಾರಿ ಆ ಸಂಪ್ರದಾಯಕ್ಕೆ ಸಿಎಸ್ಕೆ ಅಂತ್ಯವಾಡಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಅಲ್ಲದೆ, ಅಭಿಮಾನಿಗಳಿಗೂ ಇದೊಂದು ರೀತಿಯಲ್ಲಿ ಶಾಕ್ ಆಗಿದೆ.
ಐಪಿಎಲ್ನಲ್ಲೇ ಸಿಎಸ್ಕೆ ಶ್ರೇಷ್ಠ ತಂಡ ಎನ್ನುವುದರಲ್ಲಿ ಎರಡು ಮಾತಿಲ್ಲ. ಪ್ಲಾನ್ ಅನ್ನು ಅಚ್ಚುಕಟ್ಟಾಗಿ ಕಾರ್ಯರೂಪಕ್ಕೆ ತರುವಲ್ಲಿ ಸಿಎಸ್ಕೆ ಮೇಲುಗೈ ಸಾಧಿಸಿದೆ. ಇದೀಗ ರವೀಂದ್ರ ಜಡೇಜಾರನ್ನು ಮೊದಲ ಆಟಗಾರನಾಗಿ ಉಳಿಸಿಕೊಂಡಿದ್ದರ ಹಿಂದೆ ಒಂದು ಬಲವಾದ ಕಾರಣ ಇದೆ ಎಂದು ಕೆಲವು ವಿಶ್ಲೇಷಣೆಗಳು ನಡೆದಿವೆ.
ಸಂದರ್ಶನದಲ್ಲಿ ಮಾತನಾಡಿರುವ ರಾಬಿನ್ ಉತ್ತಪ್ಪ, ಎಂ.ಎಸ್. ಧೋನಿ ಪ್ಲಾನ್ ಬಗ್ಗೆ ನನಗೆ ಖಚಿತವಿದೆ. ತಂಡದಲ್ಲಿ ರವೀಂದ್ರ ಜಡೇಜಾ ಮಹತ್ವ ಏನು ಎಂಬುದು ಧೋನಿಗೆ ಚೆನ್ನಾಗಿ ತಿಳಿದಿದೆ. ನಾನು ಕೇಳಿರುವ ಪ್ರಕಾರ ಧೋನಿ ನಿವೃತ್ತಿಯ ಬಳಿಕ ಮುಂದಿನ ಆವೃತ್ತಿಗಳಲ್ಲಿ ಜಡೇಜಾ ಸಿಎಸ್ಕೆ ನಾಯಕರಾಗಲಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಪೃಥ್ವಿ ಪಟೇಲ್ ಕೂಡ ಇದೇ ಆಲೋಚನೆಯನ್ನು ಟ್ವೀಟ್ ಮಾಡಿದ್ದಾರೆ. ಮುಂದಿನ ನಾಯಕ ಸ್ಥಾನಕ್ಕೆ ಈಗಲೇ ಸುಳಿವು ಸಿಕ್ಕಿದೆ. ಜಡೇಜಾ ಓರ್ವ ಉತ್ತಮ ಆಟಗಾರ. ಏಕದಿನ ಪಂದ್ಯಗಳಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ ಪಂದ್ಯದ ದಿಕ್ಕು ಬದಲಾಯಿಸಿರುವುದನ್ನು ನೋಡಿದ್ದೇವೆ. ಇದೀಗ ನಾಯಕರಾಗಿ ಹೇಗೆ ಆಡಲಿದ್ದಾರೆ ಎಂಬುದನ್ನು ನೋಡಲು ಕಾತುರದಿಂದ ಕಾಯುತ್ತಿದ್ದೇವೆ. ಧೋನಿ ನಿವೃತ್ತಿ ಘೋಷಿಸಿದರೆ, ಜಡೇಜಾ ಜವಬ್ದಾರಿ ಹೊತ್ತುಕೊಳ್ಳಲಿದ್ದಾರೆ ಎಂದು ಪಟೇಲ್ ಹೇಳಿದ್ದಾರೆ. (ಏಜೆನ್ಸೀಸ್)
ಇಂದು ಐಪಿಎಲ್ ಆಟಗಾರರ ರಿಟೇನ್ ಪಟ್ಟಿ ಪ್ರಕಟ; ಯಾರು ರಿಟೇನ್, ಯಾರು ರಿಲೀಸ್?
ಯಾರಾಗಲಿದ್ದಾರೆ ಆರ್ಸಿಬಿ ಕ್ಯಾಪ್ಟನ್? ಇಲ್ಲಿದೆ ನೋಡಿ ಅಭಿಮಾನಿಗಳು ಹಾಗೂ ವಿಶ್ಲೇಷಕರ ಲೆಕ್ಕಾಚಾರ!
ಹಸೆಮಣೆ ಏರಿದ 65 ವರ್ಷದ ಮೈಸೂರಿನ ವೃದ್ಧಜೋಡಿ: 35 ವರ್ಷದ ಬಳಿಕ ಪ್ರಿಯಕರನ ಸೇರಿದ ಪ್ರೇಯಸಿ