More

    ಭಾವೈಕ್ಯ ಸಂದೇಶ ಸಾರುತ್ತಿದ್ದ ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಇನ್ನಿಲ್ಲ

    ಬಾಗಲಕೋಟೆ: ನಾಡಿನಾದ್ಯಂತ ಸಾಹಿತ್ಯ ವಾಚನ, ಪ್ರವಚನ, ಭಜನೆ ಮತ್ತು ಸಮಾಜ ಸೇವೆಯ ಮೂಲಕ ಭಾವೈಕ್ಯತೆಯ ಸಂದೇಶ ಸಾರಿದ ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಅವರು ಇಂದು (ಫೆ.05) ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ.

    ರಬಕವಿ-ಬನಹಟ್ಟಿ ತಾಲೂಕಿನ ಮಹಲಿಂಗಪುರದಲ್ಲಿನ ತಮ್ಮ ಭಾವೈಕ್ಯ ನಿವಾಸದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 82 ವರ್ಷದ ಇಬ್ರಾಹಿಂ ಸುತಾರ ಸಾವನ್ನಪ್ಪಿದ್ದರಿಂದ ಭಾವೈಕ್ಯತೆಯ ಕೊಂಡಿ ಕಳಚಿ ಬಿದ್ದಂತಾಗಿದೆ.

    ಪ್ರತಿವರ್ಷ ನೂರಾರು ಕಾರ್ಯಕ್ರಮಗಳನ್ನ ನೀಡುತ್ತ, ಹಿಂದು-ಮುಸ್ಲಿಂರಲ್ಲಿ ಭಾವೈಕ್ಯತೆ ಬೆಸೆಯುವ ಕಾಯಕದಲ್ಲಿ ತೊಡಗಿದ್ದ ಇಬ್ರಾಹಿಂ ಸುತಾರ ಇಹಲೋಕ‌ ತೊರೆದಿದ್ದು ನಾಡಿಗೆ ತುಂಬಲಾರದ ನಷ್ಟವಾಗಿದೆ.

    ಮೇ 5, 1940ರಲ್ಲಿ ಮಹಲಿಂಗಪುರದ ನಬೀಸಾಬ ಹಾಗೂ ಅಮೀನಾಬಿ ಪುಣ್ಯ ಗರ್ಭದಲ್ಲಿ ಜನಿಸಿದ ಇಬ್ರಾಹಿಂ ಅವರು ಬಡತನದ ಕಾರಣ ಕೇವಲ 3ನೇ ತರಗತಿಯವರೆಗೆ ಉರ್ದು ಶಿಕ್ಷಣವನ್ನ ಪಡೆದವರು. ನಂತರ ಶಾಲೆಯನ್ನ ಬಿಟ್ಟು ಬಾಲ್ಯದಲ್ಲಿಯೇ ರಮಝಾನ ಜಾಗರಣ ಸಂಘ ಕಟ್ಟಿ, ನಾಡಿನ ಭಾವೈಕ್ಯತೆಯ ಸೇವೆಗೆ ಚಿಕ್ಕಂದಿನಿಂದಲೇ ಅಣಿಯಾದವರು.

    ಪರಮಾರ್ಥ ಲಹರಿ (ತತ್ವಪದಗಳ ಸಂಗ್ರಹ), ತತ್ವಜ್ಞಾನಕ್ಕೆ ಸರ್ವರೂ ಅಧಿಕಾರಿಗಳು(ಚಿಂತನ ಗ್ರಂಥ), ನಾವೆಲ್ಲ ಭಾರತೀಯರು (ಕವನ ಸಂಕಲನ) ಎಂಬ ಪುಸ್ತಕಗಳನ್ನ ರಚಿಸಿ ಶ್ರೀಮಂತಗೊಳಿಸಿದವರು. ನಾವೆಲ್ಲ ಭಾರತೀಯರೆಂಬ ಭಾವ ಮೂಡಲಿ ಎಂಬ ಕವನ ಸಂಕಲನ ಬಹಳ ಪ್ರಸಿದ್ಧಿಯನ್ನ ಪಡೆದ ಭಾವೈಕ್ಯತೆಯ ಪ್ರಾರ್ಥನೆಯ ಹಾಡು. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪದವಿ ಕನ್ನಡ ಪಠ್ಯಕ್ರಮದಲ್ಲಿ ವಿದ್ಯಾರ್ಥಿಗಳ ಅಧ್ಯಯನಕ್ಕೆ ಈ ಹಾಡನ್ನ ಸರ್ಕಾರ ಅಳವಡಿಸಿದೆ.

    ಪ್ರಶ್ನೋತ್ತರಗಳ ಜೊತೆಗೆ ತತ್ವಪದಗಳನ್ನು ಹಾಡುವಂಥ ತಮ್ಮ ಆರು ಜನ ಸಹ ಕಲಾವಿದರೊಂದಿಗೆ “ಭಾವೈಕ್ಯ ಭಕ್ತಿ ರಸಮಂಜರಿ”,”ಆಧ್ಯಾತ್ಮ ಸಂವಾದ ತರಂಗಿಣಿ” ಮತ್ತು “ಗೀತ ಸಂವಾದ ತರಂಗಿಣಿ” ಎಂಬ ಹೆಸರಿನ ವಿನೂತನ ಕಲಾ ಪ್ರಕಾರವನ್ನ ಹುಟ್ಟು ಹಾಕಿದರು.

    ಇನ್ನು ಸಾಮಾಜಿಕ ಜಾಗೃತಿ, ಭಾವೈಕ್ಯತೆ ಮೂಡಿಸುವ 22 ಧ್ವನಿ ಸುರುಳಿಗಳನ್ನ ಹೊರತಂದಿದ್ದಾರೆ. ಸೌಡಿಲ್ಲದ ಸಾಹುಕಾರ, ಪಾಪ ಮಾಡಬೇಡ, ಉತ್ತಮರ ಸಂಗಮಾಡು, ದಯವೇ ಧರ್ಮದ ಮೂಲ ಸೇರಿದಂತೆ 22 ಧ್ವನಿ ಸುರುಳಿಗಳನ್ನ ನಾಡಿಗೆ ಅರ್ಪಿಸಿದ್ದಾರೆ.

    ನಾಡಿನ ಮೈಸೂರು ದಸರಾ ಉತ್ಸವ, ಹಂಪಿ ಉತ್ಸವ, ಚಾಲುಕ್ಯ ಉತ್ಸವ ನಾಡಿನ ಬಹುತೇಕ ಉತ್ಸವಗಳು ಹಾಗೂ ಪ್ರಮುಖ ಮಠಗಳಲ್ಲಿ ಭಾವೈಕ್ಯದ ಸಂದೇಶವನ್ನ ತಮ್ಮ”ಪ್ರವಚನ ಮತ್ತು ಗೀತ ಸಂವಾದ ತರಂಗಿಣಿ”ಮೂಲಕ ಸಾರಿದ್ದಾರೆ. (ದಿಗ್ವಿಜಯ ನ್ಯೂಸ್​)

    ಎಲ್ಲರೂ ಕಾಲೇಜಿಗೆ ಜಾಬ್​ಗಾಗಿ ಬರುತ್ತಾರೆ, ನೀವು ಹಿಜಾಬ್​ಗಾಗಿ ಬರುತ್ತೀದ್ದೀರಾ?: ಸಂಸದ ಪ್ರತಾಪ್​ ಸಿಂಹ

    ಗೂಗಲ್​ನಲ್ಲಿ ಕೆಲಸ ಗಿಟ್ಟಿಸಿದ ಯುವಕ: ಈ ಹಿಂದಿನ ಮತ್ತು ಈಗಿನ ಸಂಬಳದ ಅಂತರ ಕೇಳಿದ್ರೆ ಬೆರಗಾಗ್ತೀರಾ!

    ಕಿಟ್ಟಿ ಗೌಳಿಗೆ ಸ್ನೇಹಿತರ ಹಾರೈಕೆ: ಇದು ಟೀಸರ್ ಅಷ್ಟೇ, ಪಿಕ್ಚರ್ ಬೇರೆನೇ ಇದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts