ಪಲಕ್ಕಾಡ್: ಹನಿಟ್ರ್ಯಾಪ್ ಮಾಡಿ ಉದ್ಯಮಿಯೊಬ್ಬರಿಂದ ಚಿನ್ನಾಭರಣ ಮತ್ತು ಹಣ ಸುಲಿಗೆ ಮಾಡಿರುವ ಆರೋಪದ ಅಡಿಯಲ್ಲಿ ಮಹಿಳೆಯೊಬ್ಬಳು ಸೇರಿದಂತೆ 6 ಮಂದಿಯನ್ನು ಕೇರಳದ ದಿ ಟೌನ್ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ದೇವು (24), ಆಕೆಯ ಪತಿ ಗೋಕುಲ್ ದೀಪ್ (29), ಶರತ್ (24), ಅಜಿತ್ (20), ವಿನಯ್ (24) ಮತ್ತು ಜಿಷ್ಣು (20) ಎಂದು ಗುರುತಿಸಲಾಗಿದೆ. ಆರೋಪಿಗಳು, ಇರಿಂಜಲಕುಡ ಮೂಲದ ಉದ್ಯಮಿಯನ್ನು ಯಕ್ಕರ ಪ್ರದೇಶಕ್ಕೆ ಕರೆದುಕೊಂಡು ಬಂದು ಚಿನ್ನಾಭರಣ ಹಾಗೂ ಹಣವನ್ನು ದೋಚಿದ್ದಾರೆ. ಬಳಿಕ ಉದ್ಯಮಿಯನ್ನು ಕೊಡುಂಗಲ್ಲೂರಿಗೆ ಕರೆದೊಯ್ಯುತ್ತಿದ್ದಾಗ ವಾಹನದಿಂದ ಹೇಗೋ ಪರಾರಿಯಾಗಿ, ಟೌನ್ ಸೌತ್ ಠಾಣೆಗೆ ದೂರು ದಾಖಲಿಸಿದ್ದರು.
ದುಷ್ಕರ್ಮಿಗಳು ಉದ್ಯಮಿಯಿಂದ ನಾಲ್ಕು ಚಿನ್ನದ ಸರ, ಕಾರು, ಮೊಬೈಲ್ ಫೋನ್, ಡೆಬಿಟ್/ಕ್ರೆಡಿಟ್ ಕಾರ್ಡ್ಗಳು, ಕಚೇರಿ ದಾಖಲಾತಿಗಳು ಮತ್ತು ಹಣವನ್ನು ಸುಲಿಗೆ ಮಾಡಿದ್ದಾರೆ. ಉದ್ಯಮಿಯ ಬೆತ್ತಲೆ ಫೋಟೋ ಮತ್ತು ವಿಡಿಯೋವನ್ನು ಸೆರೆಹಿಡಿದ ಬಳಿಕ ಆತನನ್ನು ಬೆದರಿಸಿ ಸುಲಿಗೆ ಮಾಡಿದ್ದಾರೆಂದು ತಿಳಿದುಬಂದಿದೆ.
ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದ ಉದ್ಯಮಿಗೆ, ದುಷ್ಕರ್ಮಿಗಳ ಗ್ಯಾಂಗ್ ನಿರಂತರವಾಗಿ ಸಂದೇಶಗಳನ್ನು ಕಳುಹಿಸುತ್ತಿತ್ತು. ಆರೋಪಿ ಶರತ್ ಉದ್ಯಮಿ ಜೊತೆ ಹೆಣ್ಣಿ ಧ್ವನಿಯಲ್ಲಿ ಮಾತಾಡಿಸಿ ಪರಿಚಯ ಮಾಡಿಕೊಂಡಿದ್ದ. ತನ್ನ ಪತಿ ಗಲ್ಫ್ನಲ್ಲಿದ್ದಾನೆ ಮತ್ತು ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾಳೆ ಎಂದು ಹರಟೆ ಹೊಡೆಯುತ್ತಿದ್ದ. ಭೇಟಿಯಾಗಬೇಕು ಎಂದು ಉದ್ಯಮಿ ಕೇಳಿದಾಗ, ದೇವು ಮತ್ತು ಗೋಕುಲ್ ದೀಪ್ ಎಂಬುವರನ್ನು ಶರತ್ ಬಾಡಿಗೆಗೆ ಪಡೆದಿದ್ದ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ದೇವು ಮತ್ತು ಗೋಕುಲ್ ದೀಪ್ ಅವರು 50,000 ಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಇನ್ಸ್ಟಾಗ್ರಾಂ ರೀಲ್ಸ್ ಜೋಡಿ ಎಂದೇ ಇಬ್ಬರು ಖ್ಯಾತಿಯಾಗಿದ್ದಾರೆ.
ಶರತ್ ಸಂಪರ್ಕಿಸಿದ ಬಳಿಕ ದೇವು ಉದ್ಯಮಿಗೆ ತನ್ನ ಧ್ವನಿ ಸಂದೇಶ ಕಳುಹಿಸಿದ್ದಳು. ಚಾಟ್ ಮಾಡುವಾಗ ಶರತ್ ತನ್ನ ಮನೆ ಪಾಲಕ್ಕಾಡ್ನಲ್ಲಿದೆ ಎಂದು ಹೇಳಿದ್ದ. ಬಳಿಕ ಆನ್ಲೈನ್ ಮೂಲಕ ಯಕ್ಕರದಲ್ಲಿ ಬಾಡಿಗೆಗೆ ಮನೆ ತೆಗೆದುಕೊಂಡು, ಉದ್ಯಮಿಯನ್ನು ಯಕ್ಕರದ ಮನೆಗೆ ಕರೆತಂದು ನೈತಿಕ ಪೊಲೀಸ್ ಗಿರಿ ಮಾಡಿ, ಬೆದರಿಸಿ ದೋಚಿದ್ದಾರೆ. ನಂತರ ತಮ್ಮ ಕಾರಿನಲ್ಲಿ ಕೊಡುಂಗಲ್ಲೂರಿನ ತಮ್ಮ ಫ್ಲಾಟ್ಗೆ ಕರೆದುಕೊಂಡು ಹೋಗಿ ಅವರಿಂದ ಹೆಚ್ಚಿನ ಹಣ ದೋಚಲು ಯತ್ನಿಸಿದ್ದಾರೆ. ಅವರ ಎಟಿಎಂನಿಂದ ಹೆಚ್ಚಿನ ಹಣವನ್ನು ಡ್ರಾ ಮಾಡಲು ಪ್ರಯತ್ನಿಸಿದರು. ಆದರೆ, ಸಾಧ್ಯವಾಗಲಿಲ್ಲ. ಸಂತ್ರಸ್ತನನ್ನು ಗ್ಯಾಂಗ್ ಹೇಳಿದ ಜಾಗಕ್ಕೆ ಕರೆದೊಯ್ದರೆ 40 ಸಾವಿರ ಕಮಿಷನ್ ಸಿಗುತ್ತಿತ್ತು ಎಂದು ಬಂಧಿತ ದಂಪತಿ ಪೊಲೀಸ್ ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡಿದ್ದಾರೆ.
ಸಬ್ ಇನ್ಸ್ಪೆಕ್ಟರ್ಗಳಾದ ವಿ ಹೇಮಲತಾ, ಎಂ ಅಜಾಜುದ್ದೀನ್, ಎಸ್ ಜಲೀಲ್, ಎಎಸ್ಐ ಕೆ. ಕೃಷ್ಣಪ್ರಸಾದ್, ಹಿರಿಯ ಸಿಪಿಒಗಳಾದ ಎಂ ಸುನೀಲ್, ಆರ್. ವಿನೀಶ್, ಕೆ ಗೋಪಿನಾಥ್, ಸಿಪಿಒಗಳಾದ ಎಸ್ ಶಾನೋಸ್, ಕೆ ರಾಜೇಶ್, ಕೆ ವಿನೋದ್, ಎಂ ರಾಜ್ಮೋನ್ ನೇತೃತ್ವದ ತಂಡ ದುಷ್ಕರ್ಮಿಗಳನ್ನು ಬಂಧಿಸಿದೆ. (ಏಜೆನ್ಸೀಸ್)
ಕುತೂಹಲಕ್ಕೆ ತೆರೆ ಎಳೆದ ನಟಿ ರಮ್ಯಾ: ಮತ್ತೆ ಸಿನಿಮಾಗೆ ಎಂಟ್ರಿ ಕೊಟ್ಟ ಮೋಹಕ ತಾರೆ, ಆದ್ರೆ ನಟಿಯಾಗಿ ಅಲ್ಲ
ಭಾರಿ ಮಳೆಯಿಂದ ಅವಾಂತರ ಸೃಷ್ಟಿಯಾದ್ರೂ ಮಂಡ್ಯಕ್ಕೆ ಬಾರದ ಸಂಸದೆ ಸುಮಲತಾ ವಿರುದ್ಧ ಜನಾಕ್ರೋಶ
ಹಪ್ಪಳಕ್ಕಾಗಿ ಮದುವೆ ಮಂಟಪದಲ್ಲಿ ನಡೆಯಿತು ಭಾರಿ ಗಲಾಟೆ: ನಷ್ಟವಾಗಿದ್ದು ಬರೋಬ್ಬರಿ 1.5 ಲಕ್ಷ ರೂಪಾಯಿ