ತಿರುವನಂತಪುರಂ: ಪಾಫುಲ್ಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಗೆ ಶಾಕ್ ಮೇಲೆ ಶಾಕ್ ಎದುರಾಗುತ್ತಿದೆ. ಸಂಘಟನೆಯನ್ನೇ ಬ್ಯಾನ್ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ಕೇರಳ ಹೈಕೋರ್ಟ್ ಪಿಎಫ್ಐಗೆ ಮತ್ತೊಂದು ಶಾಕ್ ನೀಡಿದೆ. ಎರಡು ವಾರದ ಒಳಗೆ 5.20 ಕೋಟಿ ರೂಪಾಯಿ ಡೆಪಾಸಿಟ್ ಮಾಡುವಂತೆ ಕೋರ್ಟ್ ಆದೇಶಿಸಿದೆ.
ಪಿಎಫ್ಐ ಕಚೇರಿ ಹಾಗೂ ಮುಖಂಡರ ಮನೆಗಳನ್ನು ಗುರಿಯಾಗಿರಿಸಿ ರಾಷ್ಟ್ರೀಯ ತನಿಖಾ ಆಯೋಗ(ಎನ್ಐಎ) ಮತ್ತು ಜಾರಿ ನಿರ್ದೇಶನಾಲಯ ಸೆ.22ರಂದು ನಡೆದ ದಾಳಿಯನ್ನು ಖಂಡಿಸಿ, ಕೇರಳದಲ್ಲಿ ಸೆ.24ರಂದು ಪಿಎಫ್ಐ ಕಾರ್ಯಕರ್ತರು ಬಂದ್ಗೆ ಕರೆ ನೀಡಿ, ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆ ಹಿಂಸೆಗೆ ತಿರುಗಿ ಸಾಕಷ್ಟು ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟವಾಗಿತ್ತು. ಪೊಲೀಸರ ಮೇಲೆಯೂ ಹಲ್ಲೆ ನಡೆದಿತ್ತು. ಅದೇ ದಿನ ಪಿಎಫ್ಐಗೆ ಕೇರಳ ಹೈಕೋರ್ಟ್ ಎಚ್ಚರಿಕೆ ನೀಡಿತ್ತು. ಪಿಎಫ್ಐ ನಾಯಕರ ವಿರುದ್ಧ ಸುಮೊಟೋ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಆದೇಶಿಸಿತ್ತು. ಅಲ್ಲದೆ, ಅನುಮತಿ ಇಲ್ಲದೆ ಯಾರೊಬ್ಬರು ಬಂದ್ಗೆ ಕರೆ ನೀಡುವಂತಿಲ್ಲ ಎಂದು ಕೋರ್ಟ್ ಖಡಕ್ ಆಗಿ ಹೇಳಿತ್ತು.
ಇದೀಗ ಮಹತ್ವದ ಆದೇಶ ಹೊರಡಿಸಿರುವ ಕೇರಳ ಹೈಕೋರ್ಟ್ ಹಿಂಸಾತ್ಮಕ ಪ್ರತಿಭಟನೆಯ ದಿನ ಸರ್ಕಾರಿ ಆಸ್ತಿ-ಪಾಸ್ತಿಗೆ ಹಾನಿಯುಂಟು ಮಾಡಿದ್ದಕ್ಕೆ ನಷ್ಟ ಪರಿಹಾರ ಕಟ್ಟಿಕೊಡಲು ಆದೇಶ ಹೊರಡಿಸಿದೆ. ಎರಡು ವಾರಗಳ ಒಳಗೆ 5.20 ಕೋಟಿ ರೂಪಾಯಿಯನ್ನು ಡೆಪಾಸಿಟ್ ಮಾಡಲು ಸೂಚಿಸಿದೆ. ಒಂದು ವೇಳೆ ಪರಿಹಾರ ಹಣವನ್ನು ಪಾವತಿಸದೇ ಹೋದರೆ, ಸಂಘಟನೆಗೆ ಸೇರಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಕಾನೂನುಬಾಹಿರ ಚಟುವಟಿಕೆ ಹಿನ್ನೆಲೆಯಲ್ಲಿ ಪಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಯನ್ನು ಬ್ಯಾನ್ ಮಾಡಿ ಕೇಂದ್ರ ಸರ್ಕಾರ ಸೆ.28ರಂದು ಆದೇಶ ಹೊರಡಿಸಿದೆ. ಪಿಎಫ್ಐ ಮತ್ತು ಅದರ ಅಂಗ ಸಂಸ್ಥೆಗಳು ಸೇರಿದಂತೆ 8 ಸಂಘಟನೆಗಳನ್ನು 5 ವರ್ಷಗಳವರೆಗೆ ನಿಷೇಧಿಸಿ ಕೇಂದ್ರ ಗೃಹ ಸಚಿವಾಲಯ ಆದೇಶವನ್ನು ಹೊರಡಿಸಿದೆ. ಯುಎಪಿಎ (ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ) ಅಡಿಯಲ್ಲಿ ಸಂಘಟನೆಗಳನ್ನು ಸರ್ಕಾರ ಬ್ಯಾನ್ ಮಾಡಿದೆ.
ಭಯೋತ್ಪಾದಕ ಕೃತ್ಯಗಳಿಗೆ ನಿಧಿ ಸಂಗ್ರಹ, ತರಬೇತಿ ಶಿಬಿರಗಳ ಆಯೋಜನೆ, ನಿಷೇಧಿತ ಸಂಸ್ಥೆಗಳಿಗೆ ಸೇರಲು ಜನರ ಮನವೊಲಿಸುವುದು ಮತ್ತು ಉಗ್ರರೊಂದಿಗೆ ಸಂಪರ್ಕ ಸೇರಿದಂತೆ ಇನ್ನಿತರ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಆರೋಪ ನಿಷೇಧಿತ ಸಂಘಟನೆಗಳ ಮೇಲಿದ್ದು, ಈ ಹಿನ್ನೆಲೆಯಲ್ಲಿ ತನಿಖಾ ಸಂಸ್ಥೆಗಳು ದಾಳಿ ನಡೆಸಿತ್ತು. ದಾಳಿಯ ಬಳಿಕ ಬಂದ ವರದಿಯನ್ನು ಆಧರಿಸಿ ಕೇಂದ್ರ ಸರ್ಕಾರ ಬ್ಯಾನ್ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದೆ. (ಏಜೆನ್ಸೀಸ್)
ನಟ ಮಹೇಶ್ ಬಾಬು ಮನೆಯಲ್ಲಿ ಕಳ್ಳತನ ಮಾಡಲು ಕಾಂಪೌಂಡ್ ಏರಿದ ಬೆನ್ನಲ್ಲೇ ಖದೀಮನಿಗೆ ಕಾದಿತ್ತು ಶಾಕ್!
ರಾಜಸ್ಥಾನ ಬಿಕ್ಕಟ್ಟು ಅಂತ್ಯ: ಅಧ್ಯಕ್ಷ ಸ್ಥಾನದ ಸ್ಪರ್ಧೆಗೆ ಗೆಹ್ಲೋಟ್ ಬೈ ಬೈ- ಶಶಿ, ಸಿಂಗ್ ನಡುವೆ ಫೈಟ್
ಬಾರ್ಗರ್ಲ್ಗೆ 80 ಲಕ್ಷ ರೂ. ಕೊಟ್ಟು ರೇಪ್ ಕೇಸ್ನಿಂದ ಕೈತೊಳೆದುಕೊಂಡ ಸಚಿವನ ಪುತ್ರ! ಕೋರ್ಟ್ ಅಸ್ತು