ಸನಾ (ಯೆಮೆನ್): ‘ಆನೆ ಇದ್ದರೂ ಸಾವಿರ, ಸತ್ತರೂ ಸಾವಿರ’ ಎಂಬ ಗಾದೆ ಮಾತಿದೆ. ಸಾಗರದಾಳದ ದೈತ್ಯ ತಿಮಿಂಗಿಲವೂ ಹಾಗೆ. ಅದು ತಿಂದು ಉಗಿದ ವಸ್ತುವು ಸಹ ಕೋಟ್ಯಂತರ ರೂಪಾಯಿ ಬೆಲೆ ಬಾಳುತ್ತದೆ.!! ಹಾಗಾದರೆ, ಆ ವಸ್ತು ಏನಂತೀರಾ..? ತಿಮಿಂಗಿಲದ ವಾಂತಿ!!
ಹೌದು, ಮೀನುಗಾರರ ಗುಂಪೊಂದು ಯೆಮೆನ್ನ ಸಮುದ್ರದಲ್ಲಿ ತೇಲುತ್ತಿದ್ದ ವೀರ್ಯ ತಿಮಿಂಗಿಲ (ಸ್ಪರ್ಮ್ ವೇಲ್) ದ ಕಳೇಬರದ ಒಳಗೆ ಬೆಲೆಬಾಳುವ ಮೀನಿನ ವಾಂತಿಯನ್ನು ಪತ್ತೆಹಚ್ಚಿದ್ದಾರೆ. ಅದರ ಬೆಲೆ ಎಷ್ಟೆಂದು ಕೇಳಿದ್ರೆ ಶಾಕ್ ಆಗುವುದಂತೂ ಖಂಡಿತ. ತಿಮಿಂಗಿಲ ವಾಂತಿ ಬರೋಬ್ಬರಿ 10 ಕೋಟಿ ರೂ. ಬೆಲೆ ಬಾಳುತ್ತದೆ.
ಅತಿ ಬಡರಾಷ್ಟ್ರಗಳಲ್ಲಿ ಯೆಮೆನ್ ಸಹ ಒಂದು. ಜೀವನ ಸಾಗಿಸಲು ಇಲ್ಲಿ ಮೀನುಗಾರಿಕೆಯನ್ನೇ ಅವಲಂಬಿಸಲಾಗಿದೆ. ದಕ್ಷಿಣ ಯೆಮನ್ನ ಗಲ್ಫ್ ಆಫ್ ಅಡೆನ್ ನೀರಿನಲ್ಲಿ ದೋಣಿ ನಡೆಸುವಾಗ ದೈತ್ಯ ತಿಮಿಂಗಿಲವನ್ನು ಗುರುತಿಸಿದ 35 ಮೀನುಗಾರರಿಗೆ ಅಂಬರ್ಗ್ರೀಸ್ (ತಿಮಿಂಗಿಲ ವಾಂತಿ) ಪತ್ತೆಯಾಗಿದೆ.
ಸಿರಿಯಾದ ಮೀನುಗಾರನೊಬ್ಬ ಮೊದಲು ದೈತ್ಯ ತಿಮಿಂಗಿಲದ ಕಳೇಬರವನ್ನು ಗುರುತಿಸಿ, ಗಲ್ಫ್ ಆಫ್ ಅಡೆನ್ನಲ್ಲಿರುವ 35 ಮೀನುಗಾರರ ಗುಂಪಿಗೆ ಎಚ್ಚರಿಸಿದನು ಮತ್ತು ಅದರಲ್ಲಿ ಅಂಬರ್ಗ್ರಿಸ್ ಇರಬಹುದು ಎಂದು ಹೇಳಿದನು. ದೈತ್ಯ ಶವವನ್ನು ಸಮೀಪಿಸಿದ ಮೀನುಗಾರರು ಸಮುದ್ರ ಮಲ ವಾಸನೆಯನ್ನು ಗಮನಿಸಿದರು. ಕಂಡಿತ ಹೊಟ್ಟೆಯೊಳಗೆ ಏನಾದರೂ ಇದೆ ಎಂದು ಊಹಿಸಿದ ಬಳಿಕ ಮೀನುಗಾರರು ಸತ್ತ ತಿಮಿಂಗಿಲದ ಕಳೇಬರವನ್ನು ಸಮುದ್ರದ ದಡಕ್ಕೆ ಎಳೆದೊಯ್ದಿದ್ದಾರೆ.
ಇದಾದ ಬಳಿಕ ಮೀನುಗಾರರು ಕಳೇಬರವನ್ನು ಕತ್ತರಿಸಿ ನೋಡಿದಾ 127 ಕೆಜಿ ಉಂಡೆಯ ಕಪ್ಪು ಅಂಬರ್ಗ್ರಿಸ್ ಪತ್ತೆಯಗಿದೆ. ಇದನ್ನು ಕಂಡು ಎಲ್ಲರು ಆಶ್ಚರ್ಯಚಕಿತರಾದರು. ಸುಮಾರು 1.5 ಮಿಲಿಯನ್ ಡಾಲರ್ ಅಂದರೆ ಬರೋಬ್ಬರಿ 10 ಕೋಟಿ ರೂ. ಮೌಲ್ಯದ ನಿಧಿಯನ್ನು ನಿಜಕ್ಕೂ ಕುಣಿದು ಕುಪ್ಪಳಿಸಿದರು.
ಈ ಬಗ್ಗೆ ಬಿಬಿಸಿ ಮಾಧ್ಯಮದೊಂದಿಗೆ ಮಾತನಾಡಿರುವ ಮೀನುಗಾರನೊಬ್ಬ “ನಿಜಕ್ಕೂ ಇದು ಊಹಿಸಲಾಗದ ಬೆಲೆ. ನಾವೆಲ್ಲರೂ ಬಡವರಾಗಿದ್ದೇವೆ “ಎಂದು ತಿಳಿಸಿದರು. ಈ ವಸ್ತುವು ನಮಗೆ ಇಷ್ಟು ದೊಡ್ಡ ಮೊತ್ತವನ್ನು ನೀಡುತ್ತದೆ ಎಂದು ನಾವು ಎಂದಿಗೂ ಭಾವಿಸಿರಲಿಲ್ಲ ಎಂದು ತಿಳಿಸಿದರು.
ಏನಿದರ ವಿಶೇಷ..?: ಸಾಮಾನ್ಯವಾಗಿ “ಸಮುದ್ರದ ನಿಧಿ” ಅಥವಾ “ತೇಲುವ ಚಿನ್ನ” ಎಂದು ಕರೆಯಲ್ಪಡುವ ಅಂಬರ್ಗ್ರೀಸ್ ಒಂದು ಘನ ಮೇಣದ ಸುಡುವ ವಸ್ತುವಾಗಿದೆ. ಸ್ಪರ್ಮ್ ವೇಲ್ ಅಥವಾ ಕ್ಯಾಚಲೋಟ್ ಹಲ್ಲಿನ ತಿಮಿಂಗಿಲಗಳಲ್ಲಿ ಇದು ಕಂಡುಬರುತ್ತವೆ. ಅವು ಕಪ್ಪೆ ಬೊಂಡಾಸ್, ಮಣಕಿ ಎಂದು ಕರೆಯುವ ಮೀನುಗಳನ್ನು ತಿಂದು ಬದುಕುತ್ತವೆ. ಅವು ತಿನ್ನುವ ಮೀನುಗಳಿಗೆ ಅತಿ ಗಟ್ಟಿಯಾದ ಮೂಳೆಗಳಿರುತ್ತವೆ. ಅವುಗಳನ್ನು ಕರಗಿಸಲು ಕಷ್ಟವಾದ್ದರಿಂದ ತಿಮಿಂಗಿಲ ಅದನ್ನು ಜಗಿದು, ಜಗಿದು ಉಗಿಯುತ್ತದೆ. ಉಗಿದ ತಕ್ಷಣ ವಾಂತಿಯು ವಿಪರೀತ ವಾಸನೆ ಬರುತ್ತದೆ. ಕೆಲ ದಿನಗಳ ನಂತರ ಅದು ಘಟ್ಟಿಯಾಗಿ ಸುವಾಸನೆ ಬೀರಲಾರಂಭಿಸುತ್ತದೆ. ಸುಗಂಧ ದ್ರವ್ಯಗಳನ್ನು ತಯಾರಿಸಲು ಪಾಶ್ಚಿಮಾತ್ಯ ದೇಶಗಳಲ್ಲಿ ಈ ಅಂಬರ್ ಗ್ರೀಸ್ ಬಳಸಲಾಗುತ್ತದೆ. ಒಂದು ಕೆ.ಜಿ. ಅಂಬರ್ಗ್ರೀಸ್ಗೆ ಸುಮಾರು 1 ಕೋಟಿ ರೂಪಾಯಿ ಬೆಲೆ ಇದೆ. (ಏಜೆನ್ಸೀಸ್)
ಈ ವಾಂತಿಗೂ ಕೋಟ್ಯಂತರ ರೂಪಾಯಿ ಬೆಲೆ!; ಮುರ್ಡೇಶ್ವರದಲ್ಲಿ ಸಿಕ್ಕಿತು ಅಂಬರ್ ಗ್ರೀಸ್
ಇದಪ್ಪಾ ಅದೃಷ್ಟ ಅಂದ್ರೆ! ಬಡ ಮೀನುಗಾರನನ್ನು ಕೋಟ್ಯಾಧಿಪತಿ ಮಾಡಿದ ತಿಮಿಂಗಿಲ ವಾಂತಿ