ಚೆನ್ನೈ: ಚಲಿಸುವ ರೈಲಿಗೆ ಮಗಳನ್ನು ನೂಕಿ ಕೊಲೆ ಮಾಡಿರುವ ಸುದ್ದಿ ಕೇಳಿದ ಕೂಡಲೇ ಹೃದಯಾಘಾತಕ್ಕೀಡಾಗಿದ್ದ ತಂದೆ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಚೆನ್ನೈನಲ್ಲಿ ನಡೆದಿದೆ.
ಮೃತ ಯುವತಿಯನ್ನು ಎಂ. ಸತ್ಯ ಎಂದು ಗುರುತಿಸಲಾಗಿದೆ. ಆಕೆಯ ತಂದೆ ಮಾಣಿಕ್ಯಂ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಚೆನ್ನೈನ ಸೆಂಟ್ ಥಾಮಸ್ ಮೌಂಟ್ ರೈಲು ನಿಲ್ದಾಣದಲ್ಲಿ ಚಲಿಸುವ ರೈಲಿಗೆ ಸತ್ಯಳನ್ನು ನೂಕಿ, ಕೊಲೆ ಮಾಡಲಾಗಿದೆ.
ಮಗಳ ಸಾವಿನ ಸುದ್ದಿ ಕೇಳಿ ಮಾಣಿಕ್ಯಂಗೆ ಎದೆ ನೋವು ಕಾಣಿಸಿಕೊಂಡಿತ್ತು. ಬಳಿಕ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಸತ್ಯ ಅವರ ತಾಯಿ ರಾಮಲಕ್ಷ್ಮೀ ಅಡಂಬಕ್ಕಮ್ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸತೀಶ್ (23)ನನ್ನು ವಶಕ್ಕೆ ಪಡೆಯಲಾಗಿದೆ. ಘಟನೆಯ ಬಳಿಕ ಪರಾರಿಯಾಗಿದ್ದ ಆರೋಪಿಯನ್ನು ಥೊರೈಪಕ್ಕಂ ಬಳಿ ಬಂಧಿಸಲಾಗಿದೆ. ಪ್ರೇಮ ವಿಚಾರಕ್ಕೆ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಸತೀಶ್ ಯಾವಾಗಲು ಸತ್ಯಳ ಹಿಂದೆ ಬಿದ್ದಿದ್ದ ಎಂದು ತಿಳಿದುಬಂದಿದೆ.
ಈ ಘಟನೆ ನಿನ್ನೆ (ಅ. 13) ಮಧ್ಯಾಹ್ನ ಸೆಂಟ್ ಥಾಮಸ್ ಮೌಂಟ್ ರೈಲು ನಿಲ್ದಾಣದಲ್ಲಿ ನಡೆದಿದೆ. ತೃತೀಯ ವರ್ಷದ ಬಿಬಿಎ ವಿದ್ಯಾರ್ಥಿನಿಯಾಗಿದ್ದ ಸತ್ಯ, ನಿನ್ನೆ ಕಾಲೇಜಿಗೆ ತೆರಳಲು ರೈಲು ನಿಲ್ದಾಣಕ್ಕೆ ಬಂದಿದ್ದಳು. ಈ ಸಮಯದಲ್ಲಿ ಆರೋಪಿ ಮತ್ತು ಸತ್ಯ ನಡುವೆ ಮಾತಿನ ಚಕಮಕಿ ನಡೆದಿದ್ದು, ತಾಳ್ಮೆ ಕಳೆದುಕೊಂಡ ಆರೋಪಿ, ಸತ್ಯಳನ್ನು ಚಲಿಸುವ ರೈಲಿನ ಮುಂದೆ ನೂಕಿದ್ದಾನೆ. ಈ ವೇಳೆ ರೈಲು ನಿಲ್ದಾಣದಲ್ಲಿದ್ದವರು ಆಕೆಯನ್ನು ರಕ್ಷಿಸಲು ಯತ್ನಿಸಿದಾದರೂ ಅದು ಸಾಧ್ಯವಾಗಲಿಲ್ಲ.
ಪೊಲೀಸರು ಸ್ಥಳಕ್ಕೆ ಬರುವ ಮುನ್ನವೇ ಆರೋಪಿ ಸತೀಶ್ ಅಲ್ಲಿಂದ ಪರಾರಿಯಾಗಿದ್ದ. ವಿಶೇಷ ತಂಡ ರಚಿಸಿ, ಶೋಧ ಕಾರ್ಯಾಚರಣೆಗೆ ಇಳಿದು, ಆರೋಪಿಯನ್ನು ನಿನ್ನೆಯೇ ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ಆರೋಪಿ ವಿರುದ್ಧ ಸತ್ಯಳ ಪಾಲಕರು ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)
18 ಶಾಸಕರು ಸೇರಿ 25 ಪ್ರಭಾವಿಗಳನ್ನು ಹನಿಟ್ರ್ಯಾಪ್ ಬಲೆಗೆ ಕಡೆವಿ ಸರ್ಕಾರಕ್ಕೆ ಕುತ್ತು ತಂದಿಟ್ಟ ಖತರ್ನಾಕ್ ಲೇಡಿ!
ಪುಣ್ಯಕೋಟಿ ದತ್ತು ಯೋಜನೆಗೆ ಸರ್ಕಾರಿ ನೌಕರರ 1 ದಿನದ ಸಂಬಳ: ಸಿಎಂಗೆ ಸಮ್ಮತಿಪತ್ರ ಹಸ್ತಾಂತರಿಸಿದ ಸಂಘ
ವಿದ್ಯಾಭ್ಯಾಸದ ಜತೆಜತೆಗೆ ಟೀ ಸ್ಟಾರ್ಟ್ಅಪ್ ಆರಂಭಿಸಿದ ಬಿ.ಟೆಕ್ ವಿದ್ಯಾರ್ಥಿನಿ: ಚಾಯ್ವಾಲಿಯ ಸ್ಫೂರ್ತಿಯ ಕತೆಯಿದು