ಮಂಗಳೂರು: ದೇಶದಲ್ಲಾಗುತ್ತಿರುವ ಪೆಟ್ರೋಲ್ ಬೆಲೆ ಏರಿಕೆಯ ಹಿಂದೆ ಕೇಂದ್ರ ಸರಕಾರದ ಪಾತ್ರ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ.
ಪುತ್ತೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಹಿಂದೆ ಅಧಿಕಾರದಲ್ಲಿದ್ದ ಸರಕಾರದ ಕರ್ಮಕಾಂಡದಿಂದಾಗಿ ಬೆಲೆ ಏರಿಕೆಯಾಗಿದೆ. ಹಿಂದಿನ ಸರಕಾರದ ತಪ್ಪು ನೀತಿಯಿಂದಾಗಿ ತೈಲ ಕಂಪನಿಗಳೇ ತಮ್ಮಷ್ಟಕ್ಕೆ ಬೆಲೆ ನಿಗದಿಪಡಿಸುವಂತಾಗಿದೆ ಎಂದು ಹೇಳಿದರು.
ರಷ್ಯಾ-ಯೂಕ್ರೇನ್ ನಡುವಿನ ಯುದ್ಧವು ಕೂಡ ತೈಲ ಬೆಲೆ ಏರಿಕೆಗೆ ಕಾರಣವಾಗಿದೆ. ರಷ್ಯಾದಿಂದ ತೈಲ ಆಮದು ಮಾಡುವ ಕಂಪನಿಗಳಿಗೆ ಯುದ್ಧದಿಂದ ತೊಂದರೆಯಾಗಿದೆ. ಹೀಗಾಗಿ ಬೆಲೆಯಲ್ಲಿ ಈ ರೀತಿಯ ಏರಿಳಿತಗಳು ಆಗುತ್ತಿವೆ ಎಂದು ತಿಳಿಸಿದರು.
ಕೇಂದ್ರ ಸರಕಾರ ತೈಲ ಬೆಲೆಯನ್ನು ನಿಯಂತ್ರಣದಲ್ಲಿರಿಸಲು ಕ್ರಮ ಕೈಗೊಳ್ಳುತ್ತಿದೆ. ಕೆಲವೇ ದಿನಗಳಲ್ಲಿ ಬೆಲೆ ನಿಯಂತ್ರಣವನ್ನು ಕೇಂದ್ರ ಸರಕಾರ ಮಾಡಲಿದೆ ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಹಲಾಲ್, ಜಟ್ಕಾ ಕಟ್ ಎಲ್ಲವೂ ಬಿಜೆಪಿಯ ತಂತ್ರ ಎಂಬ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು ಕುಮಾರಸ್ವಾಮಿಯವರಿಗೆ ಇನ್ನೊಬ್ಬರ ಮೇಲೆ ಆರೋಪ ಮಾಡುವುದೇ ಕೆಲಸ. ಹಿಂದೆ ಸಿದ್ಧರಾಮಯ್ಯ, ಡಿಕೆಶಿ ಮತ್ತು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಆರೋಪ ಮಾಡುತ್ತಿದ್ದರು. ಈಗ ಬಿಜೆಪಿ ವಿರುದ್ಧ ಮಾತಾನಾಡುತ್ತಿದ್ದಾರೆ. ರಾಜ್ಯದಲ್ಲಿ ಜೆಡಿಎಸ್ ಎಂಬುವುದು ಮುಗಿದ ಅಧ್ಯಾಯ. ಆ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣೆಗೆಯನ್ನು ರಾಜ್ಯದ ಜನ ಗಮನಿಸುತ್ತಿದ್ದಾರೆ. ಕುಮಾರಸ್ವಾಮಿಯವರು ಸ್ಥಿರತೆ ಕಳೆದಕೊಂಡು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಈ ಆರೋಪಗಳಿಗೆ ಬಿಜೆಪಿ ಪ್ರತಿಕ್ರಿಯೆ ನೀಡೋದಿಲ್ಲ ಎಂದರು. (ದಿಗ್ವಿಜಯ ನ್ಯೂಸ್)
ಮಸೀದಿಗಳಲ್ಲಿನ ಲೌಡ್ ಸ್ಪೀಕರ್ ತೆಗೆಸಿರಿ, ಇಲ್ಲದಿದ್ದರೆ..; ಸರ್ಕಾರಕ್ಕೆ ಸವಾಲೆಸೆದ ರಾಜ್ ಠಾಕ್ರೆ
ಭಾರತ-ನೇಪಾಳ ಮಧ್ಯೆ ರೈಲು ಸಂಚಾರಕ್ಕೆ ಚಾಲನೆ; ಮುಕ್ತಗಡಿ ದುರ್ಬಳಕೆ ಆಗದಿರಲಿ ಎಂದ ಮೋದಿ