ಕೊಚ್ಚಿ: ಸ್ನೇಹಿತನ ಮನೆಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿರುವ ಆರೋಪದ ಮೇಲೆ ಪೊಲೀಸ್ ಪೇದೆಯೊಬ್ಬರನ್ನು ಬಂಧಿಸಿರುವ ಘಟನೆ ಕೇರಳದ ಕೊಚ್ಚಿಯಲ್ಲಿ ಶುಕ್ರವಾರ (ಅ.21) ನಡೆದಿದೆ.
ಬಂಧಿತ ಪೇದೆಯನ್ನು ಅಮಲ್ ದೇವ್ ಎಂದು ಗುರುತಿಸಲಾಗಿದೆ. ಈತ ಕೊಚ್ಚಿಯ ಎ.ಆರ್. ಕ್ಯಾಂಪ್ನಲ್ಲಿ ಕಾನ್ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಎರ್ನಾಕುಲಂನ ಜರಾಕಲ್ನಲ್ಲಿರುವ ಸ್ನೇಹಿತ ನಟೇಸನ್ ಮನೆಯಲ್ಲಿ ಕಳ್ಳತನ ಮಾಡಿರುವ ಆರೋಪ ಕೇಳಿಬಂದಿದೆ.
ಕದ್ದ ಚಿನ್ನಾಭರಣಗಳು ನಟೇಸನ್ ಅವರ ಸೊಸೆಗೆ ಸಂಬಂಧಿಸಿದ್ದಾಗಿವೆ. ಸುಮಾರು 10 ಸವರನ್ ಚಿನ್ನ ಕಳ್ಳತವಾಗಿದೆ. ಮನೆಗೆ ಬಂದಿದ್ದ ಅಮಲ್, ಚಿನ್ನಾಭರಣ ಕದ್ದು ಪರಾರಿಯಾಗಿದ್ದ. ಈ ಸಂಬಂಧ ನಟೇಸನ್ ದೂರು ದಾಖಲಿಸಿದ್ದರು. ದೂರಿನ ಅನ್ವಯ ಪರಾರಿಯಾಗಿದ್ದ ಆರೋಪಿ ಅಮಲ್ನನ್ನು ನಿನ್ನೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಅಮಲ್ಗೆ ಸಾಕಷ್ಟು ಸಾಲ ಇರುವುದಾಗಿ ತಿಳಿದುಬಂದಿದೆ. ಆನ್ಲೈನ್ ಜೂಜಿನ ಚಟ ಅಂಟಿಸಿಕೊಂಡಿದ್ದ ಅಮಲ್, ಸಾಲವನ್ನು ತೀರಿಸಲು ಕಳ್ಳತನ ಮಾಡಿದ್ದಾನೆಂದು ವಿಚಾರಣೆಯಲ್ಲಿ ತಿಳಿದುಬಂದಿದೆ.
ಇನ್ನೊಂದು ಪ್ರಕರಣದಲ್ಲಿ ಕೇರಳದ ಕಂಜಿರಪಲ್ಲಿಯ ಅಂಗಡಿಯೊಂದರಲ್ಲಿ ಮಾವಿನ ಹಣ್ಣುಗಳನ್ನು ಕಳ್ಳತನ ಮಾಡಿದ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯನ್ನು ಆರೋಪಿ ಎಂದು ಹೆಸರಿಸಲಾಗಿದ್ದು, ಈ ಪ್ರಕರಣವನ್ನು ಕೋರ್ಟ್ನಲ್ಲಿ ಇತ್ಯರ್ಥಪಡಿಸಲಾಗಿದೆ. ಇಡುಕ್ಕಿ ಎಆರ್ ಕ್ಯಾಂಪ್ನ ಪೊಲೀಸ್ ಪೇದೆ ಪಿ.ವಿ.ಶಿಹಾಬ್ ಸೆ.30ರಂದು ಕಂಜಿರಪಲ್ಲಿಯ ಹಣ್ಣಿನ ಅಂಗಡಿಗೆ ನುಗ್ಗಿ ಮಾವಿನ ಹಣ್ಣುಗಳನ್ನು ಕಳವು ಮಾಡಿದ್ದರು. ಕೆಜಿಗೆ 600 ರೂ.ಮೌಲ್ಯದ ಸುಮಾರು 10 ಕೆಜಿ ಮಾವಿನ ಹಣ್ಣನ್ನು ಶಿಹಾಬ್ ಕದ್ದಿದ್ದಾರೆ. ಘಟನೆ ನಡೆದ ಸ್ಥಳದ ಸಿಸಿಟಿವಿ ದೃಶ್ಯಾವಳಿಯಿಂದ ಈ ಪ್ರಕರಣ ಬೆಳಕಿಗೆ ಬಂದಿತು. ಇದಾದ ಬಳಿಕ ಅಕ್ಟೋಬರ್ 3 ರಂದು ಕೇರಳ ಡಿಜಿಪಿ, ಆರೋಪಿ ಶಿಹಾಬ್ನನ್ನು ಅಮಾನತುಗೊಳಿಸಿದ್ದಾರೆ.
ಕಂಜಿರಪಲ್ಲಿಯ ಹಣ್ಣು ಮಾರಾಟಗಾರ ಕಂಜಿರಪಲ್ಲಿ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥಕ್ಕೆ ಅರ್ಜಿ ಸಲ್ಲಿಸಿದ್ದರು. ಅಲ್ಲದೆ ತನಗಾದ ನಷ್ಟವನ್ನು ಭರಿಸುವಂತೆ ಕೇಳಿಕೊಂಡಿದ್ದರು. ಹಣ್ಣು ಮಾರಾಟಗಾರನ ಅರ್ಜಿಯನ್ನು ಪುರಸ್ಕರಿಸಿದ್ದ ಕೋರ್ಟ್ ಪ್ರಕರಣವನ್ನು ಇತ್ಯರ್ಥಪಡಿಸಿದೆ. (ಏಜೆನ್ಸೀಸ್)
ಮಾವಿನ ಹಣ್ಣುಗಳನ್ನು ಕದ್ದ ಪೊಲೀಸ್ ಅಧಿಕಾರಿಯ ಸುಳಿವೇ ಇಲ್ಲ: ಕೋರ್ಟ್ ಮೆಟ್ಟಿಲೇರಿದ ಹಣ್ಣು ಮಾರಾಟಗಾರ
ಹಿಂದು ಹುಡುಗಿಯನ್ನು ಅಪಹರಿಸಿದ ಆರೋಪಿ ಪರ ತೀರ್ಪು ನೀಡಿದ ಪಾಕ್ ಕೋರ್ಟ್! ಕಣ್ಣೀರಿಟ್ಟ ಸಂತ್ರಸ್ತೆಯ ಪಾಲಕರು
50 ಸಾವಿರ ನಕಲಿ ಕ್ಲಿನಿಕ್; ನಕಲಿ ಸರ್ಟಿಫಿಕೇಟ್: ಭ್ರಷ್ಟ ರಿಜಿಸ್ಟ್ರಾರ್ಗಳ ರಕ್ಷಣೆಗೆ ನಿಂತ ಸರ್ಕಾರ