ಐಜ್ವಾಲ: ಅಸ್ಸಾಂ ಮತ್ತು ಮಿಜೋರಾಂ ರಾಜ್ಯಗಳ ನಡುವಿನ ಗಡಿ ಸಂಘರ್ಷ ತಾರಕಕ್ಕೇರಿದ್ದು, ಉದ್ವಿಘ್ನ ಸ್ಥಿತಿ ನಿರ್ಮಾಣವಾಗಿದೆ. ಇದರ ನಡುವೆ ಮಿಜೋರಾಂ ಪೊಲೀಸರು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ವಿರುದ್ಧ ಎಫ್ಐಆರ್ ದಾಖಲಿಸಿರುವುದು ಎರಡು ರಾಜ್ಯಗಳ ನಡುವಿನ ಸಂಬಂಧ ಮತ್ತಷ್ಟು ಹಳಸಿದೆ ಎಂಬುದಕ್ಕೆ ನಿದರ್ಶನವಾಗಿದೆ.
ಜುಲೈ 26ರಂದು ಉಭಯರಾಜ್ಯಗಳ ಅಂತಾರಾಜ್ಯ ಗಡಿಯಲ್ಲಿ ಉಂಟಾದ ಸಂಘರ್ಷಕ್ಕೆ ಸಂಬಂಧಿಸಿದಂತೆ ಕೊಲೆ ಯತ್ನ ಮತ್ತು ಅಪರಾಧಕ್ಕೆ ಸಂಚು ರೂಪಿಸಿರುವ ಆರೋಪದ ಮೇಲೆ ಅಸ್ಸಾಂ ಸಿಎಂ ವಿರುದ್ಧ ಮಿಜೋರಾಂ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಸಿಎಂ ಮಾತ್ರವಲ್ಲದೆ, ಅಸ್ಸಾಂ ಹಿರಿಯ ಪೊಲೀಸ್ ಅಧಿಕಾರಿಗಳು, ಇಬ್ಬರು ಉನ್ನತ ಅಧಿಕಾರಿಗಳು ಮತ್ತು ಗುರುತಿಸಲಾಗದ 200 ಪೊಲೀಸ್ ಸಿಬ್ಬಂದಿಯ ಹೆಸರನ್ನು ಎಫ್ಐಆರ್ನಲ್ಲು ಉಲ್ಲೇಖಿಸಲಾಗಿದೆ. ಜುಲೈ 26ರಂದು ಎಫ್ಐಆರ್ ಮಾಡಲಾಗಿದೆ. ಭಾರತೀಯ ದಂಡ ಸಂಹಿತೆ (ಐಪಿಸಿ), ಶಸ್ತ್ರಾಸ್ತ್ರ ಕಾಯಿದೆ ಮತ್ತು ಮಿಜೋರಾಂ ನಿಯಂತ್ರಣ ಮತ್ತು ಕೋವಿಡ್ -19 ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
200 ಸಂಪೂರ್ಣ ಶಸ್ತ್ರಸಜ್ಜಿತ ಅಸ್ಸಾಂ ಪೊಲೀಸ್ ತಂಡವು ಐಜಿಪಿ ನೇತೃತ್ವದ ನಮ್ಮ 20 ಅಧಿಕಾರಿಗಳ ತಂಡವನ್ನು ಬೆದರಿಸಿದ್ದಾರೆ ಮತ್ತು ನಮ್ಮ ಪೊಲೀಸ್ ಶಿಬಿರವನ್ನು “ಬಲವಂತವಾಗಿ ಆಕ್ರಮಿಸಿಕೊಳ್ಳಲು” ಪ್ರಯತ್ನಿಸುತ್ತಿದ್ದಾರೆ ಎಂದು ಮಿಜೋರಾಂ ಪೊಲೀಸರು ಆರೋಪಿಸಿದ್ದಾರೆ. ನಮ್ಮ ಪೋಲಿಸರು ಅಧಿಕ ಸಂಖ್ಯೆಯಲ್ಲಿದ್ದರೂ ಶಿಬಿರವನ್ನು ರಕ್ಷಿಸಲು ನಮ್ಮ ಕ್ರಮಗಳು ವ್ಯರ್ಥವಾಗಿದ್ದವು. ಈ ಘಟನೆಯ ಬಗ್ಗೆ ಗೊತ್ತಾದ ಕೂಡಲೇ ಪೊಲೀಸ್ ವರಿಷ್ಠಧಿಕಾರಿ ಕೊಲಾಸಿಬ್ ಮತ್ತು ತಂಡವು ತಕ್ಷಣವೇ ಆ ಪ್ರದೇಶಕ್ಕೆ ಧಾವಿಸಿ, ಅಸ್ಸಾಂ ಪೊಲೀಸರೊಂದಿಗೆ ಸೌಹಾರ್ದಯುತ ಸಂವಾದ ನಡೆಸಲು ತಕ್ಕ ಮಟ್ಟಿಗೆ ಪ್ರಯತ್ನಿಸಿದರು. ಆದರೆ ಅವರು ಬುದ್ಧಿಮಾತನ್ನು ಕೇಳಲು ಸಿದ್ಧರಿರಲಿಲ್ಲ ಮತ್ತು ಬದಲಾಗಿ ಆ ಪ್ರದೇಶವು ಅಸ್ಸಾಂನ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಎಸ್ಪಿ ಕೋಲಾಸಿಬ್ ಅವರಿಗೆ ಬಲವಾಗಿ ವಾದಿಸಿದರು. ಪೊಲೀಸರು ಅಸ್ಸಾಂನ ಮುಖ್ಯಮಂತ್ರಿಯ ಸೂಚನೆಯಂತೆ ಶಿಬಿರವನ್ನು ನಿರ್ಮಿಸಲು ಉದ್ದೇಶಿಸಿದ್ದರು ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಿದ್ದಾರೆ.
ಮಿಜೋರಾಂ ಬಿಒಪಿಯನ್ನು ಬಲವಂತವಾಗಿ ಆಕ್ರಮಿಸಿಕೊಳ್ಳುವ ಉದ್ದೇಶದಿಂದ ಅಸ್ಸಾಂ ಪೊಲೀಸ್ ತಂಡವು 20 ವಾಹನಗಳೊಂದಿಗೆ ಟೆಂಟ್ಗಳು ಮತ್ತು ಇತರ ಸಾಮಗ್ರಿಗಳೊಂದಿಗೆ ಸ್ಥಳಕ್ಕೆ ಆಗಮಿಸಿದೆ ಎಂದು ಆರೋಪಿಸಿದ್ದಾರೆ. ಆದರೆ, ಮಿಜೋರಾಂ ಆರೋಪ ಅಲ್ಲಗೆಳೆದಿರುವ ಅಸ್ಸಾಂ, ನಮ್ಮ ಪೊಲೀಸರ ಮೇಲೆ ಮೊದಲು ಗುಂಡಿನ ದಾಳಿ ನಡೆಸಿದ್ದು, ಅವರೇ. ಹೀಗಾಗಿ ರಕ್ಷಣೆಗಾಗಿ ನಾವು ದಾಳಿ ಮಾಡಬೇಕಾಯಿತು ಎಂದಿದೆ.
ಮಿಜೋರಾಂನ ಮೂರು ಜಿಲ್ಲೆಗಳಾದ ಐಜಾಲ್, ಕೋಲಾಸಿಬ್ ಮತ್ತು ಮಾಮಿತ್, ಅಸ್ಸಾಂನ ಕ್ಯಾಚರ್, ಹೈಲಕಂಡಿ ಮತ್ತು ಕರಿಮಗಂಜ್ ಜಿಲ್ಲೆಗಳೊಂದಿಗೆ 164.6 ಕಿ.ಮೀ ಉದ್ದದ ಅಂತರಾಜ್ಯ ಗಡಿಯನ್ನು ಹಂಚಿಕೊಂಡಿವೆ. ಈ ಪ್ರದೇಶವು ದಶಕಗಳಿಂದ ಘರ್ಷಣೆಗೆ ಒಳಗಾಗುತ್ತಲೇ ಇದೆ. ಸ್ಥಳೀಯರು ಮತ್ತು ಭದ್ರತಾ ಪಡೆಗಳು ಪ್ರತಿ ಕಡೆ ಒಳನುಗ್ಗುವಿಕೆ ಸಾಮಾನ್ಯವಾಗಿವೆ ಎಂದು ಆರೋಪಿಸಿವೆ.
ಗಡಿ ಗುರುತಿಸುವಿಕೆಯನ್ನು ಎದುರಿಸಲು ಮಿಜೋರಾಂ ಸರ್ಕಾರ ಗಡಿ ಆಯೋಗವನ್ನು ರಚಿಸಿದೆ. ಅಸ್ಸಾಂ ಮೇಘಾಲಯ ಮತ್ತು ಅರುಣಾಚಲ ಪ್ರದೇಶದೊಂದಿಗೆ ಗಡಿ ವಿವಾದಗಳನ್ನು ಮಿಜೋರಾಂ ಹೊಂದಿದೆ. (ಏಜೆನ್ಸೀಸ್)
ಅಸ್ಸಾಂ-ಮಿಜೋರಾಂ ಗಡಿ ವಿವಾದದ ಘರ್ಷಣೆಯಲ್ಲಿ ಅಸ್ಸಾಂನ ಐವರು ಪೊಲೀಸ್ ಸಿಬ್ಬಂದಿಯ ದುರಂತ ಸಾವು