ಬೆಂಗಳೂರು: ಬಿಜೆಪಿ ಶಾಸಕ ಸತೀಶ್ ರೆಡ್ಡಿಯವರ ಮನೆಯಲ್ಲಿ ನಿಲ್ಲಿಸಿದ್ದ ಎರಡು ಕಾರುಗಳಿಗೆ ಬೆಂಕಿ ಇಟ್ಟು ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ನಡೆದ ಕೇವಲ 48 ಗಂಟೆಗಳಲ್ಲಿ ಪ್ರಕರಣ ಅಂತ್ಯಗೊಂಡಿದೆ. ಆಗ್ನೇಯ ವಿಭಾಗದ 5 ತಂಡ 123 ಸಿಸಿಟಿವಿ ಫುಟೇಜ್ ಪರಿಶೀಲನೆ ನಡೆಸಿ, ನಾಲ್ಕು ಆಯಾಮಗಳಲ್ಲಿ ತನಿಖೆ ಮಾಡಿ ಮೂವರು ಆರೋಪಿಗಳನ್ನು ಬಂಧಿಸಿದೆ. ಬಂಧಿತರನ್ನು ನೇಪಾಳ ಮೂಲದ ಸಾಗರ್ ತಾಪ, ಶ್ರೀಧರ್ ಹಾಗೂ ನವೀನ್ ಎಂದು ಗುರುತಿಸಲಾಗಿದೆ.
ಇನ್ನು ಈ ಪ್ರಕರಣದಲ್ಲಿ ಮೂವರು ಆರೋಪಿಗಳು ಸಿಕ್ಕಿಬಿದ್ದಿದ್ದೇ ರಣ ರೋಚಕವಾಗಿದೆ. ಇನ್ನೇನು ಆರೋಪಿಗಳು ಮಿಸ್ ಆದ್ರು, ಅನ್ನೋವಾಗಲೇ ತನಿಖಾ ತಂಡಕ್ಕೆ ಸಿಕ್ಕ ಆ ಎರಡು ಸುಳಿವು ಪ್ರಕರಣದ ಅಂತ್ಯಕ್ಕೆ ಕರೆದೊಯ್ಯಿತು. ಯಾವುದು ಆ ಎರಡು ಸುಳಿವು ಅಂತಾ ನೋಡಿದಾಗ… ಒಂದು ಕದ್ದ ಬೈಕ್…ಇನ್ನೊಂದು ಬೆಂಕಿ ಹಚ್ಚುವಾಗ ಆರೋಪಿ ಗಾಯಗೊಂಡಿದ್ದ ಸುಳಿವು.
123 ಸಿಸಿಟಿವಿ ವಿಡಿಯೋಗಳ ಪೈಕಿ ಬಹುತೇಕ ಪುಟೇಜ್ಗಳಲ್ಲಿ ಆರೋಪಿಗಳ ಚಟುವಟಿಕೆ ದಾಖಲಾಗಿತ್ತು. ಕದ್ದ ಬೈಕ್, ಗಾಯಗೊಂಡಿದ್ದ ಅರೋಪಿ ನವೀನ್ ಓಡಾಟವೂ ಸೆರೆಯಾಗಿತ್ತು. ಎರಡು ಸುಳಿವು ಸಿಗುತ್ತಿದ್ದಂತೆ ಕಾರ್ಯಾಚರಣೆಗೆ ಇಳಿದ ತನಿಖಾ ತಂಡ ಮೊದಲು ಕದ್ದ ಬೈಕ್ ಮಾಡೆಲ್ ಬಗ್ಗೆ ಮಾಹಿತಿ ಪಡೆದರು. ಇದಾದ ಬಳಿಕ ಸೈಬರ್ ಪರಿಣಿತರ ಮೂಲಕ ಆರೋಪಿಗಳಿಗಾಗಿ ಬಲೆ ಬೀಸಿದರು. ಕೊನೆಗೆ ಕದ್ದ ಬೈಕ್ ನೀಡಿದ ಸುಳಿವಿನ ಮೆರೆಗೆ ಪೊಲೀಸ್ ಬಲೆಗೆ ಬಿದ್ದಿದ್ದಾರೆ. ಆರೋಪಿಗಳಲ್ಲಿ ಇಬ್ಬರನ್ನು ಗಾರ್ವೇಬಾವಿಪಾಳ್ಯ ಬಳಿ ಬಂಧಿಸಿರುವ ಪೊಲೀಸರು ಮತ್ತೊಬ್ಬನನ್ನು ಬಂಡೇಪಾಳ್ಯದ ಸ್ಮಶಾನದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆಗೆ ಕಾರಣವೇನು?
ಶಾಸಕ ಸತೀಶ್ ರೆಡ್ಡಿ ಈ ಭಾಗದಲ್ಲಿ ಶ್ರೀಮಂತ ಎಂಬ ಒಂದೇ ಕಾರಣಕ್ಕೆ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ. ಶ್ರೀಮಂತರೇ ಶ್ರೀಮಂತರಾಗುತ್ತಾ ಇದ್ದಾರೆ, ಬಡವರು ಬಡವರಾಗಿಯೇ ಇದ್ದಾರೆ ಎಂದು ಆರೋಪಿಗಳು ಹೀಗೆ ಮಾಡಿದ್ದು, ಶಾಸಕರಿಗೂ ಆರೋಪಿಗಳಿಗೂ ಯಾವುದೇ ಸಂಬಂಧವಿಲ್ಲ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿರುವುದಾಗಿ ಮೂಲಗಳು ತಿಳಿಸಿವೆ. (ದಿಗ್ವಿಜಯ ನ್ಯೂಸ್)
ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಇಟ್ಟ ಮೂವರ ಬಂಧನ, ಸ್ಮಶಾನದಲ್ಲಿ ಸಿಕ್ಕಿಬಿದ್ದ ಆರೋಪಿ
Inside Story: ರಾಜ್ಯಸಭಾ ಸಭಾಪತಿ ವೆಂಕಯ್ಯನಾಯ್ಡು ಕಣ್ಣೀರಿಗೆ ಸಂಸತ್ತಿನಲ್ಲಿ ನಡೆದ ಈ ಘಟನೆಗಳೇ ಕಾರಣ!