ನವದೆಹಲಿ: ನಿನ್ನೆ (ಡಿಸೆಂಬರ್ 8) ಭಾರತದ ಪಾಲಿಗೆ ಅತ್ಯಂತ ಕರಾಳ ದಿನ. ತಮಿಳುನಾಡಿನ ಕೂನೂರಿನಲ್ಲಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ಪತನದಲ್ಲಿ ಭಾರತೀಯ ಸೇನಾಪಡೆಯ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಸೇರಿದಂತೆ 13 ಮಂದಿ ಮೃತಪಟ್ಟಿದ್ದಾರೆ. ಬಿಪಿನ್ ರಾವತ್ ಅನಿರೀಕ್ಷಿತ ನಿಧನದಿಂದ ಇಡೀ ದೇಶವೇ ಶೋಕ ಸಾಗರದಲ್ಲಿ ಮುಳುಗಿರುವಾಗ ಭಾರತೀಯ ಸೇನೆಯ ನಿವೃತ್ತ ಕರ್ನಲ್ ಒಬ್ಬರು ಮಾಡಿರುವ ಟ್ವೀಟ್ ತೀವ್ರ ಟೀಕೆಗೆ ಗುರಿಯಾಗಿದೆ.
ನಿನ್ನೆ ಸೇನಾ ಹೆಲಿಕಾಪ್ಟರ್ ಪತನವಾದ ಬೆನ್ನಲ್ಲೇ ಇಡೀ ದೇಶವೇ ಒಗ್ಗಟ್ಟು ಪ್ರದರ್ಶಿಸಿ ಸೇನಾ ಮುಖ್ಯಸ್ಥರು ಹಾಗೂ ಅವರ ಸಿಬ್ಬಂದಿಯ ಚೇತರಿಕೆಗಾಗಿ ಪಾರ್ಥನೆ ಸಲ್ಲಿಸುತ್ತಿದ್ದರೆ, ನಿವೃತ್ತ ಕರ್ನಲ್ ಬಲ್ಜಿತ್ ಬಕ್ಷಿ, ಹೆಲಿಕಾಪ್ಟರ್ ಪತನವನ್ನು ಕರ್ಮಕ್ಕೆ ಹೋಲಿಸಿ ಟ್ವೀಟ್ ಮಾಡಿದ್ದರು. ಒಂದೆಡೆ ಬಿಪಿನ್ ರಾವತ್ ಸೇರಿ ಅವರ ಸಿಬ್ಬಂದಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರೆ, “ಕರ್ಮವೂ ಜನರೊಂದಿಗೆ ವ್ಯವಹರಿಸಲು ತನ್ನದೇಯಾದ ಮಾರ್ಗವನ್ನು ಹೊಂದಿದೆ” ಎಂದು ಬಲ್ಜಿತ್ ಬಕ್ಷಿ ಅವರು ಟ್ವೀಟ್ ಮಾಡುವ ಮೂಲಕ ತಮ್ಮ ಸಣ್ಣತನವನ್ನು ಪ್ರದರ್ಶಿಸಿ ದೇಶದ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇನ್ನು ಬಕ್ಷಿ ಅವರು ಟ್ವೀಟ್ನಲ್ಲಿ ಯಾರ ಹೆಸರನ್ನೂ ಉಲ್ಲೇಖಿಸಿದ್ದರೂ, ಅವರು ಟ್ವೀಟ್ ಮಾಡಿದ್ದ ಸಮಯ ಅದರ ಹಿಂದಿನ ಉದ್ದೇಶವನ್ನು ಸಾರಿ ಹೇಳುತ್ತಿತ್ತು. ಯಾವಾಗ ಟ್ವೀಟ್ ಎಲ್ಲಡೆ ವೈರಲ್ ಆಗಿ ಸಾಕಷ್ಟು ಟೀಕೆಗಳು ಹರಿದುಬರಲು ಆರಂಭಿಸಿತೋ ತಕ್ಷಣ ಟ್ವೀಟ್ ಅನ್ನು ಬಕ್ಷಿ ಅವರು ಡಿಲೀಟ್ ಮಾಡಿದ್ದಾರೆ. ಆದರೂ, ಟ್ವೀಟ್ನ ಸ್ಕ್ರೀನ್ಶಾಟ್ ಎಲ್ಲೆಡೆ ವೈರಲ್ ಆಗುತ್ತಿದ್ದು, ಟೀಕೆಗಳು ವ್ಯಕ್ತವಾಗುತ್ತಿವೆ.
Not a mockery of an either an individual or Indian Army but honestly Col. Baljit Bakshi mocked his upbringing .
भारतीय सेना गर्व था, हैं और रहेगा! pic.twitter.com/1eWEVPBjta
— अणिमा सोनकर (@AnimaSonkar) December 8, 2021
ನಿನ್ನೆ ನಡೆದಿದ್ದೇನು?
ವೆಲ್ಲಿಂಗ್ಟನ್ನ ಮಿಲಿಟರಿ ಶಾಲೆಯಲ್ಲಿ ನಿಗದಿಯಾಗಿದ್ದ ಸೆಮಿನಾರ್ಗೆಂದು ಸಿಡಿಎಸ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್, ಬ್ರಿಗೇಡಿಯರ್ ಎಲ್.ಎಸ್.ಲಿಡ್ಡರ್, ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ನಾಯಕ್ ಗುರುಸೇವಕ್ ಸಿಂಗ್, ನಾಯಕ್ ಜಿತೇಂದರ್ ಕುಮಾರ್, ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್, ಲ್ಯಾನ್ಸ್ ನಾಯಕ್ ಬಿ ಸಾಯ್ತೇಜ್, ಹವಲ್ದಾರ್ ಸತ್ಪಾಲ್ ಸೇರಿದಂತೆ 14 ಮಂದಿ ಬುಧವಾರ ರಷ್ಯಾ ನಿರ್ಮಿತ ಸೇನಾ ಹೆಲಿಕಾಪ್ಟರ್ Mi-17V5 ನಲ್ಲಿ ಹೋಗುತ್ತಿದ್ದರು. ಮಾರ್ಗಮಧ್ಯೆ ಹೆಲಿಕಾಪ್ಟರ್ ಪತನಗೊಂಡು ಬಿಪಿನ್ ರಾವತ್ ದಂಪತಿ ಸೇರಿ 13 ಮಂದಿ ಮೃತಪಟ್ಟಿದ್ದಾರೆ. ಸಿಡಿಎಸ್ ಬಿಪಿನ್ ರಾವತ್ ನಿಧನಕ್ಕೇ ಇಡೀ ದೇಶವೇ ಕಂಬನಿ ಮಿಡಿದಿದೆ. (ಏಜೆನ್ಸೀಸ್)
ಸೇನಾ ಹೆಲಿಕಾಪ್ಟರ್ ದುರಂತ: ಸಾವು-ಬದುಕಿನ ನಡುವೆ ಶೌರ್ಯಚಕ್ರ ಪುರಸ್ಕೃತ, ಕ್ಯಾಪ್ಟನ್ ವರುಣ್ ಸಿಂಗ್ ಹೋರಾಟ