ಭುವನೇಶ್ವರ್: ಬೆದರಿಕೆ ಒಡ್ಡಿ ಅನೇಕ ಹೈ ಪ್ರೊಫೈಲ್ ಜನರ ಬಳಿ ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಮಹಿಳಾ ಬ್ಲಾಕ್ಮೇಲರ್ ಅರ್ಚನಾ ನಾಗ್ ಎಂಬಾಕೆಯನ್ನು ಒಡಿಶಾ ಪೊಲೀಸರು ಬಂಧಿಸಿದ್ದು, ಇದೀಗ ಪ್ರತಿದಿನ ಸಾಕಷ್ಟು ಶಾಕಿಂಗ್ ಸಂಗತಿಗಳು ಬೆಳಕಿಗೆ ಬರುತ್ತಿವೆ.
ಈ ಪ್ರಕರಣದಲ್ಲಿ ನಡೆದಿರುವ ತಾಜಾ ಬೆಳವಣಿಗೆ ಏನೆಂದರೆ, ಆರೋಪಿ ಅರ್ಚನಾ ನಾಗ್, 18 ಶಾಸಕರು ಸೇರಿದಂತೆ 25 ಪ್ರಭಾವಿಗಳನ್ನು ತನ್ನ ಹನಿಟ್ರ್ಯಾಪ್ ಬಲೆಗೆ ಕಡೆವಿರುವುದಾಗಿ ತಿಳಿದುಬಂದಿದೆ. ಈ ವಿಚಾರ ಇದೀಗ ಒಡಿಶಾ ರಾಜ್ಯ ರಾಜಕೀಯದಲ್ಲಿ ಭಾರಿ ತಲ್ಲಣ ಉಂಟು ಮಾಡಿದೆ. ಧಾಮ್ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೂ ಮುನ್ನವೇ ಈ ಸಂಗತಿ ಬೆಳಕಿಗೆ ಬಂದಿರುವುದು ರಾಜಕೀಯ ವಾತಾವರಣವನ್ನೇ ಕೆಡಿಸಿದೆ. ಹನಿಟ್ರ್ಯಾಪ್ಗೆ ಒಳಗಾದ ಶಾಸಕರಲ್ಲಿ ಬಹುತೇಕರು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ ಸರ್ಕಾರದ ಸದಸ್ಯರಾಗಿದ್ದಾರೆ.
ಪೊಲೀಸರು ಈ ಪ್ರಕರಣವನ್ನು ಗುಟ್ಟಾಗಿ ನಿಭಾಯಿಸಿದ ಬಗ್ಗೆ ಈ ಹಿಂದೆ ಅನೇಕ ಪ್ರಶ್ನೆಗಳು ಎದ್ದಿದ್ದವು. ಆದರೆ, ಇದೀಗ ಈ ಪ್ರಕರಣದಲ್ಲಿ ಹೊರಬಂದಿರುವ ಅನೇಕ ಸಂಗತಿಗಳಿಂದಾಗಿ ಕಮಿಷನರೇಟ್ ಪೊಲೀಸರು ತನಿಖೆಯನ್ನು ಮುಂದುವರಿಸಲು ಕಷ್ಟಕರ ಪರಿಸ್ಥಿತಿಯಲ್ಲಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ, ಅರ್ಚನಾಳನ್ನು ಬಂಧಿಸಿ ಒಂದು ವಾರ ಕಳೆದರೂ ಆಕೆಯ ವಿಚಾರಣೆಯನ್ನು ಯಾಕೆ ನಡೆಸಲಿಲ್ಲ ಎಂಬ ಪ್ರಶ್ನೆಗಳೂ ಹುಟ್ಟಿಕೊಂಡಿವೆ. ಖಂಡಗಿರಿ ಪೊಲೀಸ್ ಠಾಣೆಯಲ್ಲಿ ಅರ್ಚನಾ ವಿರುದ್ಧ ಯುವತಿಯೊಬ್ಬಳು ದೂರು ದಾಖಲಿಸಿ, ಆಕೆಯ ಅಕ್ರಮ ವ್ಯವಹಾರದ ಬಗ್ಗೆ ತಿಳಿಸಿಕೊಟ್ಟರೂ ಸಹ ಪೊಲೀಸರು ತನಿಖೆ ಮಾಡಲು ಮತ್ತು ಸಿಆರ್ಪಿಸಿ ಸೆಕ್ಷನ್ 164ರ ಅಡಿಯಲ್ಲಿ ಹೇಳಿಕೆಯನ್ನು ದಾಖಲಿಸಲು ಯಾವುದೇ ಆಸಕ್ತಿ ತೋರಿಸಲಿಲ್ಲ ಎಂದು ತಿಳಿದುಬಂದಿದೆ.
ಅರ್ಚನಾ ಮತ್ತು ಆಕೆಯ ಪತಿ ಜಗಬಂಧು ಚಂದ್ ಅವರು ಅನೇಕ ರಾಜಕಾರಣಿಗಳು ಮತ್ತು ಪ್ರಭಾವಿ ವ್ಯಕ್ತಿಗಳೊಂದಿಗೆ ಇರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಕೆಲವು ರಾಜಕಾರಣಿಗಳು ಅರ್ಚನಾ ಪರಿಚಯವನ್ನು ಒಪ್ಪಿಕೊಂಡರೆ, ಇನ್ನು ಕೆಲವರು ಆಕೆಯೊಂದಿಗಿನ ಸಂಬಂಧವನ್ನು ನಿರಾಕರಿಸಿದ್ದಾರೆ. ಅಲ್ಲದೆ, ಪೊಲೀಸರು ಸಹ ಆ ಆಯಾಮದಲ್ಲಿ ಸಕ್ರಿಯವಾಗಿ ತನಿಖೆ ನಡೆಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಅಂದಹಾಗೆ ಅರ್ಚನಾ ಮತ್ತು ಆಕೆಯ ಪತಿ ಪ್ರಭಾವಿ ವ್ಯಕ್ತಿಗಳನ್ನು ಹನಿಟ್ರ್ಯಾಪ್ ಬಲೆಗೆ ಕೆಡವಿ, ಅವರ ಲೈಂಗಿಕ ವಿಡಿಯೋಗಳನ್ನು ರೆಕಾರ್ಡ್ ಮಾಡುವ ಮೂಲಕ ಬ್ಲಾಕ್ಮೇಲ್ ಮಾಡಿ, ಹಣ ಸುಲಿಗೆ ಮಾಡುತ್ತಿದ್ದರು. ಆದರೆ, ಒಡಿಶಾದ ಚಲನಚಿತ್ರ ನಿರ್ಮಾಪಕ ಅಕ್ಷಯ್ ಪಾರಿಜಾ ಅವರನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸುವ ಅರ್ಚನಾರ ಯೋಜನೆ ವಿಫಲವಾದ ಬಳಿಕ ಆಕೆ ಪೊಲೀಸರ ಅತಿಥಿಯಾಗಿದ್ದು, ಆಕೆಯ ಎಲ್ಲ ಪುರಾಣಗಳು ಇದೀಗ ಬಯಲಾಗುತ್ತಿದೆ.
ಲೇಡಿ ಬ್ಲಾಕ್ಮೇಲರ್ ಅರ್ಚನಾ ಪ್ರಕರಣದಲ್ಲಿ ಬಿಜೆಡಿ ಶಾಸಕರು ಮತ್ತು ಸಚಿವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮತ್ತು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಒಡಿಶಾ ಸರ್ಕಾರವನ್ನು ಗುರಿಯಾಗಿಸಿಕೊಂಡಿವೆ. ಲೇಡಿ ಬ್ಲಾಕ್ಮೇಲರ್ ಅರ್ಚನಾಳಿಂದ ಹನಿಟ್ರ್ಯಾಪ್ ಆಗಿರುವ ಆರೋಪ ಹೊತ್ತಿರುವ 11 ಶಾಸಕರಲ್ಲಿ ರಾಜ್ಯ ಸರ್ಕಾರದ 3 ಸಚಿವರೂ ಇದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಬಾಬು ಸಿಂಗ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಆಡಳಿತಾರೂಢ ಬಿಜೆಡಿಯ ಹಲವಾರು ಯುವ ನಾಯಕರು ಅರ್ಚನಾ ಅವರ ಮನೆಗೆ ಹೋಗುತ್ತಿದ್ದರು ಎಂದು ತಿಳಿದುಬಂದಿದೆ. ಇದೆಲ್ಲವು ಗೊತ್ತಿದ್ದರೂ ಪೊಲೀಸರು ಉದ್ದೇಶಪೂರ್ವಕವಾಗಿ ಪ್ರಕರಣದ ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ ಮತ್ತು ಅರ್ಚನಾ ಮತ್ತು ಆಕೆಯ ಪತಿಗೆ ಡ್ರಗ್ಸ್ ದಂಧೆಯೊಂದಿಗೆ ಸಂಪರ್ಕವಿದೆ ಎಂದು ಬಾಬು ಆರೋಪಿಸಿದ್ದಾರೆ.
ಬಿಜೆಪಿಯ ಹಿರಿಯ ನಾಯಕ ಪ್ರತಾಪ್ ಸಾರಂಗಿ ಅವರು ಅರ್ಚನಾ ಪ್ರಕರಣದಿಂದ ಹೆಚ್ಚಿನ ಅಂಶಗಳನ್ನು ಹೊರ ತೆಗೆಯಲು ಸಿಬಿಐನಂತಹ ನಿಷ್ಪಕ್ಷಪಾತ ಸಂಸ್ಥೆಯಿಂದ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಮತ್ತೊಂದೆಡೆ ರಾಜ್ಯ ಸರ್ಕಾರದ ಹಲವು ಶಾಸಕರು ಮತ್ತು ಸಚಿವರು ಭಾಗಿಯಾಗಿರುವ ಬಗ್ಗೆ ಸತ್ಯ ಬಹಿರಂಗವಾದರೆ ಬಿಜೆಡಿ ಸರ್ಕಾರ ಪತನವಾಗಲಿದೆ ಎಂದು ಕಾಂಗ್ರೆಸ್ ಮುಖಂಡ ಸಂತೋಷ್ ಸಲೂಜಾ ಹೇಳಿದ್ದಾರೆ. ಅಲ್ಲದೆ, ಅರ್ಚನಾ ಅವರ ಲ್ಯಾಪ್ಟಾಪ್ ಮತ್ತು ಮೊಬೈಲ್ನಲ್ಲಿ ಅವರ ಎಲ್ಲ ವ್ಯವಹಾರಗಳ ವಿವರಗಳಿವೆ ಎಂದು ತಿಳಿಸಿದ್ದಾರೆ.
ಆದರೆ, ಇಷ್ಟೆಲ್ಲ ಆರೋಪಗಳು ಬಂದರೂ ಆಡಳಿತಾರೂಢ ಬಿಜೆಡಿ ಮಾತ್ರ ಯಾವುದೇ ಪ್ರತಿಕ್ರಿಯೆಗಳನ್ನು ನೀಡಿಲ್ಲ. (ಏಜೆನ್ಸೀಸ್)
ವಿದ್ಯಾಭ್ಯಾಸದ ಜತೆಜತೆಗೆ ಟೀ ಸ್ಟಾರ್ಟ್ಅಪ್ ಆರಂಭಿಸಿದ ಬಿ.ಟೆಕ್ ವಿದ್ಯಾರ್ಥಿನಿ: ಚಾಯ್ವಾಲಿಯ ಸ್ಫೂರ್ತಿಯ ಕತೆಯಿದು
ಶಾಸಕ ಹರೀಶ್ ಪೂಂಜಾಗೆ ಜೀವ ಬೆದರಿಕೆ: ತಡರಾತ್ರಿ ಕಾರನ್ನು ಅಡ್ಡಗಟ್ಟಿ ಮಾರಕಾಸ್ತ್ರ ತೋರಿಸಿದ ದುಷ್ಕರ್ಮಿಗಳು
ಮದುವೆ ಎಂದರೇನು? ವಿದ್ಯಾರ್ಥಿ ಬರೆದ ಉತ್ತರ ನೋಡಿ ತಬ್ಬಿಬ್ಬಾದ ಶಿಕ್ಷಕ! ವೈರಲ್ ಆಯ್ತು ಉತ್ತರ ಪತ್ರಿಕೆ