ವಿಜಯವಾಡ: ಆಂಧ್ರ ಪ್ರದೇಶದ ಈಸ್ಟ್ ಗೋದಾವರಿ ಜಿಲ್ಲೆಯ ಗೊಕವರಂನಿಂದ ವಂಚನೆ ಪ್ರಕರಣವೊಂದು ವರದಿಯಾಗಿದೆ. ಟಿಕ್ಟಾಕ್ ವಿಡಿಯೋಗಳಿಂದಲೇ ಸ್ಥಳೀಯವಾಗಿ ಪ್ರಖ್ಯಾತವಾಗಿರುವ ದಂಪತಿ, ವ್ಯಕ್ತಿಯೊಬ್ಬನಿಗೆ ಆತನ ಮಗಳನ್ನು ವಿದೇಶಕ್ಕೆ ಕಳುಹಿಸಲು ಸಹಾಯ ಮಾಡುವ ನೆಪದಲ್ಲಿ 44 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ.
ವಿವರಣೆಗೆ ಬರುವುದಾದರೆ, ಆರೋಪಿ ದಂಪತಿಯನ್ನು ಮಾಮಿದಲ ಶ್ರೀಧರ್ ಮತ್ತು ಛೆರುಕುಮಿಲಿ ಗಾಯತ್ರಿ ಎಂದು ಗುರುತಿಸಲಾಗಿದೆ. ಗೌರಿಶಂಕರ್ ಎಂಬುವವರಿಗೆ 44 ಲಕ್ಷ ರೂಪಾಯಿ ಹಣ ಪಡೆದು ದಂಪತಿ ವಂಚನೆ ಮಾಡಿದ್ದಾರೆ. ಮಗಳನ್ನು ವಿದೇಶಕ್ಕೆ ಕಳುಹಿಸಲು ಸಹಾಯ ಮಾಡುವ ಭರವಸೆಯನ್ನು ನೀಡಿ ಹಣವನ್ನು ಸ್ವೀಕರಿಸಿ ಇದೀಗ ಮೋಸ ಮಾಡಿದ್ದಾರೆ.
ದಂಪತಿಯ ಅದ್ಧೂರಿ ಟಿಕ್ಟಾಕ್ ವಿಡಿಯೋಗಳಿಗೆ ಗೌರಿಶಂಕರ್ ಮಾರು ಹೋಗಿದ್ದ. ಅಲ್ಲದೆ, ಗಣ್ಯ ವ್ಯಕ್ತಿಗಳ ದಂಪತಿ ಜತೆಯಲ್ಲಿರುವ ವಿಡಿಯೋವನ್ನು ಸಹ ವೀಕ್ಷಣೆ ಮಾಡಿದ್ದ. ಅವರ ವಿಡಿಯೋದಲ್ಲಿ ಕಾಣುತ್ತಿದ್ದ ಅದ್ಧೂರಿತನವನ್ನು ನೋಡಿ ಮರುಳಾಗಿದ್ದ ಗೌರಿಶಂಕರ್ ಅವರನ್ನು ನಂಬಿದ್ದ. ಮಗಳನ್ನು ಖಂಡಿತ ವಿದೇಶಕ್ಕೆ ಕಳುಹಿಸುಕೊಡುತ್ತಾರೆ ವಿಶ್ವಾಸವನ್ನು ಹೊಂದಿದ್ದ.
ಆದರೆ, ದಿನ ಕಳೆದರೂ ಮಗಳನ್ನು ವಿದೇಶಕ್ಕೆ ಕಳುಹಿಸಿಕೊಡುವ ಪ್ರಯತ್ನವನ್ನು ಮಾಡದಿದ್ದಾಗ ಅನುಮಾನ ಬಂದು ತನ್ನ ಹಣವನ್ನು ಹಿಂತಿರುಗಿಸುವಂತೆ ದಂಪತಿ ಬಳಿ ಕೇಳಿದ್ದ. ಇದಾದ ಬೆನ್ನಲ್ಲೇ ದಂಪತಿ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಇದರಿಂದ ಗೌರಿಶಂಕರ್ ಅನುಮಾನ ಮತ್ತಷ್ಟು ಬಲವಾಗಿದೆ. ಬಳಿಕ ಇಬ್ಬರ ವಿರುದ್ಧ ಗೊಕವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.
ಇದರ ಬೆನ್ನಲ್ಲೇ ಆರೋಪಿ ದಂಪತಿಯನ್ನು ಪೊಲೀಸರು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿ 15 ದಿನಗಳ ಕಾಲ ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ವಿದೇಶದಲ್ಲಿ ಅಧ್ಯಯನ ಮಾಡಬೇಕೆಂಬ ಆಸೆ ಇಟ್ಟುಕೊಂಡಿರುವ ವಿದ್ಯಾರ್ಥಿಗಳೇ ದಂಪತಿ ಟಾರ್ಗೆಟ್ ಆಗಿದ್ದರು ಎಂದು ತಿಳಿದುಬಂದಿದೆ. ಇದೀಗ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ದಂಪತಿ ವಿರುದ್ಧ ಅನೇಕರು ದೂರು ನೀಡಲು ಮುಂದೆ ಬಂದಿದ್ದು, ರಾಜಮಂಡ್ರಿ ಮತ್ತು ಕಿರ್ಲಾಂಪುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿವೆ. (ಏಜೆನ್ಸೀಸ್)
ಕೃಷಿ ಅಧ್ಯಯನಕ್ಕೆಂದು ಫಾರ್ಮ್ ಹೌಸ್ಗೆ ಬಂದಿದ್ದ ಯುವತಿಗಾಗಿ ಕಾದು ಕುಳಿತಿದ್ದ ಜವರಾಯ..!
ನೀನೇಕೆ ಬಿಳಿಕೂದಲು ಮರೆಮಾಚುವುದಿಲ್ಲ? ತಂದೆಯ ಪ್ರಶ್ನೆಗೆ ಸಮೀರಾ ರೆಡ್ಡಿ ಕೊಟ್ಟ ಉತ್ತರಕ್ಕೆ ಎಲ್ಲರೂ ಫಿದಾ!
ಡಿಸೆಂಬರ್ನಲ್ಲಿ ವಿಕ್ರಾಂತ್ ರೋಣ; ತೆಲುಗು, ತಮಿಳು, ಹಿಂದಿಯಲ್ಲೂ ಕಿಚ್ಚನ ಧ್ವನಿ