ಪಡುಬಿದ್ರಿ: ಮಹಾರಾಷ್ಟ್ರದಿಂದ ಊರಿಗೆ ಬಂದ ಕುಟುಂಬಗಳು ಕ್ವಾರಂಟೈನ್ ಗೊಂದಲದಿಂದ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸುವ ಹೆಜಮಾಡಿ ಗಡಿ ತಪಾಸಣಾ ಕೇಂದ್ರ ಬಳಿ ಬುಧವಾರ ತಾಸುಗಟ್ಟಲೆ ಕಾದು ಕುಳಿತಿರಬೇಕಾಯಿತು.
ಮಹಾರಾಷ್ಟ್ರದಿಂದ ದ.ಕ ಜಿಲ್ಲೆಗೆ ಆಗಮಿಸಿದ ಬಂಟ್ವಾಳ, ಬೆಳ್ತಂಗಡಿ, ಸುಳ್ಯ, ಮಂಗಳೂರು, ಮೂಡುಬಿದಿರೆ ಮೂಲದ ಕುಟುಂಬಗಳು ಹೆಜಮಾಡಿ ಗಡಿಯಲ್ಲಿ ತಪಾಸಣೆಗೊಳಪಟ್ಟು ಕ್ವಾರಂಟೈನ್ಗೆ ಒಳಪಟ್ಟರೂ, ಆಯಾ ಪ್ರದೇಶದ ಅಧಿಕಾರಿಗಳ ವಿಳಂಬದಿಂದ ಗಡಿಯಲ್ಲಿಯೇ ಪರದಾಡುವಂತಾಯಿತು.
ಕರೆ ಮಾಡಿದರೂ ಅಧಿಕಾರಿಗಳು ಪ್ರತಿಕ್ರಿಯೆ ನೀಡಿಲ್ಲ, ಬೆಳಗ್ಗೆ 10ಕ್ಕೆ ದ.ಕ.ಗಡಿ ತಲುಪಿದವರು ಮಧ್ಯಾಹ್ನ 3 ಗಂಟೆಯಾದರೂ ತಪಾಸಣಾ ಕೇಂದ್ರದಲ್ಲೇ ಸಮಯ ಕಳೆಯುತ್ತಿದ್ದೇವೆ ಎಂದು ಸಮಸ್ಯೆಗೊಳಗಾದ ಕುಟುಂಬದವರು ದೂರಿದರು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅನುಮತಿ ಪತ್ರ ಪಡೆದು ಮುಂಬೈನಿಂದ ಆಗಮಿಸಿದ ಎಲ್ಲ ಕುಟುಂಬಗಳನ್ನು ಆಯಾ ಪ್ರದೇಶದಲ್ಲಿ ಕ್ವಾರಂಟೈನ್ಗೆ ಒಳಪಡಿಸಲಾಗಿದೆ.
ಆದರೆ ಉಡುಪಿ ಜಿಲ್ಲಾಧಿಕಾರಿ ಅನುಮತಿ ಪತ್ರ ಪಡೆದು ಬಂದ ದಕ್ಷಿಣ ಕನ್ನಡದ ಇಬ್ಬರಿಗೆ ಉಡುಪಿಯಲ್ಲೇ ಕ್ವಾರಂಟೈನ್ ಮಾಡಬೇಕಿದೆ. ಈ ಮಂದಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕ್ವಾರಂಟೈನ್ಗೆ ಒಳಪಡಬೇಕಿದ್ದರೆ ಸೇವಾಸಿಂಧು ಮೂಲಕ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅನುಮತಿ ಪತ್ರ ಪಡೆಯಬೇಕು ಎಂದು ತಪಾಸಣಾ ಕೇಂದ್ರದ ಕರ್ತವ್ಯದಲ್ಲಿದ್ದ ಗ್ರಾಮಕರಣಿಕರೊಬ್ಬರು ಮಾಹಿತಿ ನೀಡಿದರು.