More

    ಪುತ್ತೂರು- ಉಪ್ಪಿನಂಗಡಿ ಚತುಷ್ಪಥ ರಸ್ತೆ ಕಾಮಗಾರಿ ವೇಗ: ಮಾ.30ರೊಳಗೆ ಕೆಲಸ ಪೂರ್ಣ

    ಶ್ರವಣ್ ಕುಮಾರ್ ನಾಳ ಪುತ್ತೂರು
    ಪುತ್ತೂರು-ಉಪ್ಪಿನಂಗಡಿ ರಸ್ತೆ ಮೇಲ್ದರ್ಜೆಗೇರುವ ಜತೆಗೆ ಚತುಷ್ಪಥ ರಸ್ತೆಯಾಗಿಸುವ ಶಾಸಕ ಸಂಜೀವ ಮಠಂದೂರು ಕನಸು ನನಸಾಗುವ ಹಂತದಲ್ಲಿದೆ. ಚತುಷ್ಪಥ ರಸ್ತೆ ಕಾಮಗಾರಿ ವೇಗ ಪಡೆದುಕೊಂಡಿದ್ದು, ಮಾ.30ರೊಳಗೆ ಪುತ್ತೂರು-ಉಪ್ಪಿನಂಗಡಿ ರಸ್ತೆ ಕೆಲಸ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

    ಪುತ್ತೂರು ಮತ್ತು ಉಪ್ಪಿನಂಗಡಿಯನ್ನು ಸಂಪರ್ಕಿಸುವ ಹೊಸ ರಾಜ್ಯ ಹೆದ್ದಾರಿ ಜಿಲ್ಲೆಯ ಪ್ರಮುಖ ರಸ್ತೆಯಾಗಿದ್ದು, ಮೂರು ರಾಷ್ಟ್ರೀಯ ಹೆದ್ದಾರಿಗಳನ್ನು ಇದು ಸಂಪರ್ಕಿಸುತ್ತದೆ. ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ, ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ, ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುವ ಕಾರಣ ಮುಖ್ಯ ಹೆದ್ದಾರಿಯಾಗಲಿದೆ. ಪುತ್ತೂರು ಮತ್ತು ಉಪ್ಪಿನಂಗಡಿ ಸಂಪರ್ಕಿಸುವ 10.2 ಕಿ.ಮೀ. ಜಿಲ್ಲಾ ಮುಖ್ಯರಸ್ತೆಯನ್ನು ರಾಜ್ಯ ಹೆದ್ದಾರಿ-118 ಕ್ಕೆ ಸೇರ್ಪಡೆಗೊಳಿಸಲಾಗಿದೆ. ಗುರುವಾಯನಕೆರೆ-ಉಪ್ಪಿನಂಗಡಿ ಸಂಪರ್ಕಿಸುವ 26 ಕಿ.ಮೀ. ರಸ್ತೆ ರಾಜ್ಯ ಹೆದ್ದಾರಿ ಆಗಿದ್ದು, ಇದನ್ನು ಪುತ್ತೂರು ತನಕ ವಿಸ್ತರಿಸಲಾಗಿದೆ. ಈ ಮೂಲಕ 36 ಕಿ.ಮೀ. ಉದ್ದದ ರಸ್ತೆ ರಾಜ್ಯ ಹೆದ್ದಾರಿ ಆಗಿ ಪರಿವರ್ತನೆಗೊಂಡಿದೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಪ್ರಸ್ತಾವನೆಗೆ ಅನುಮೋದನೆ ನೀಡಿ ಅನುಷ್ಠಾನಗೊಳಿಸಲಾಗಿದೆ.

    12 ಕೋಟಿ ರೂ. ವೆಚ್ಚದ ಚತುಷ್ಪಥ: ಪುತ್ತೂರಿನಿಂದ ಕೆಮ್ಮಾಯಿ ತನಕ ಚತುಷ್ಪಥ ರಸ್ತೆ ನಿರ್ಮಾಣ ಆಗಿದ್ದು, ಮುಂದೆ 12 ಕೋಟಿ ರೂ. ವೆಚ್ಚದಲ್ಲಿ ಕೆಮ್ಮಾಯಿಯಿಂದ ಚತುಷ್ಪಥ ರಸ್ತೆ ಕೆಲಸ ವೇಗವಾಗಿ ನಡೆಯುತ್ತಿದೆ. ಈಗಾಗಲೇ ಪುತ್ತೂರು ಉಪ್ಪಿನಂಗಡಿಗೆ ಸಂಬಂಧಿಸಿ ಸೇಡಿಯಾಪಿನಿಂದ ಉಪ್ಪಿನಂಗಡಿ ತನಕ ದ್ವಿಪಥ ರಸ್ತೆಗೆ ಅನುಮೋದನೆ ಸಿಕ್ಕಿದ್ದು, ಈ ಅನುಮೋದನೆಯನ್ನೇ ರಾಜ್ಯ ಸರ್ಕಾರದ ಗಮನಕ್ಕೆ ತಂದು ಚತುಷ್ಪಥಕ್ಕೆ ಬದಲಾವಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಸಮೀಪದ ರಾಷ್ಟ್ರೀಯ ಹೆದ್ದಾರಿವರೆಗೂ ಚತುಷ್ಪಥ ರಸ್ತೆ ನಿರ್ಮಾಣಗೊಳ್ಳಲಿದೆ.

    ಶೇ.75 ಕಾಮಗಾರಿ ಪೂರ್ಣ: ರಸ್ತೆ ವಿಸ್ತರಣೆ ಜತೆಗೆ ಜಲ್ಲಿ ಮಿಶ್ರಣ ಹಾಕುವ ಕಾಮಗಾರಿ ಪ್ರಗತಿಯಲ್ಲಿದೆ. ಶೇ.75ರಷ್ಟು ಭಾಗದಲ್ಲಿ ಡಾಂಬರು ಅಳವಡಿಸುವ ಕೆಲಸ ಪೂರ್ಣಗೊಂಡಿದ್ದು, ನಗರಕ್ಕೆ ಹಾದು ಹೋಗಿರುವ ಕುಡಿಯುವ ನೀರಿನ ಪೈಪ್ ಸ್ಥಳಾಂತರಗೊಳಿಸಲಾಗುತ್ತಿದೆ. ಮಾ.30ರೊಳಗೆ ಚತುಷ್ಪಥ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ವಿಜಯವಾಣಿಗೆ ತಿಳಿಸಿದ್ದಾರೆ.

    ಉಪ್ಪಿನಂಗಡಿ-ಪುತ್ತೂರು ರಾಜ್ಯ ರಸ್ತೆಯ ಕೆಮ್ಮಾಯಿ- ಸೇಡಿಯಾಪು ತನಕ 12 ಕೋಟಿ ರೂ. ವೆಚ್ಚದಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದೆ. ನೆಕ್ಕಿಲಾಡಿ ತನಕ ಚತುಷ್ಪಥ ರಸ್ತೆ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ಉಪ್ಪಿನಂಗಡಿ ಪುತ್ತೂರು ಚತುಷ್ಪಥ ರಸ್ತೆಯಾಗಿ ರೂಪುಗೊಳ್ಳಲಿದೆ.

    -ಸಂಜೀವ ಮಠಂದೂರು ಪುತ್ತೂರು ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts