ಚಂಡೀಗಢ: ಪಂಜಾಬ್ನ ಭಟಿಂಡಾದಲ್ಲಿ ಶನಿವಾರ ಇಬ್ಬರು ಅಪರಿಚಿತ ವ್ಯಕ್ತಿಗಳು ಅಂಗಡಿಯ ಮಾಲೀಕನನ್ನು ಗುಂಡಿಕ್ಕಿ ಕೊಂದಿದ್ದಾರೆ. ಕೊಲೆಯಾದ ಹರ್ಜಿಂದರ್ ಸಿಂಗ್ ಜೋಹಲ್ ತನ್ನ “ಅಮೃತಸರಿ ಕುಲ್ಚಾ” ಅಂಗಡಿಯ ಹೊರಗೆ ಕುಳಿತಿದ್ದಾಗ ಶೂಟರ್ಗಳು ಬೈಕ್ ನಲ್ಲಿ ಬಂದು ಅವರ ಮೇಲೆ ಗುಂಡು ಹಾರಿಸಿದರು.
ಇದನ್ನೂ ಓದಿ: ಮಹಿಳೆ ಮೇಲೆ ಡೆಲಿವರಿ ಬಾಯ್ ಅತ್ಯಾಚಾರ: ಪೊಲೀಸ್ ಫೈರಿಂಗ್- ಆರೋಪಿ ಅರೆಸ್ಟ್
ಜೋಹಾಲ್ ಅಂಗಡಿ ಹೊರಗೆ ಕುರ್ಚಿಯಲ್ಲಿ ಕುಳಿತಿದ್ದರು. ಆಗ ಇಬ್ಬರು ವ್ಯಕ್ತಿಗಳು ಬೈಕ್ನಲ್ಲಿ ಬರುತ್ತಾರೆ. ಹಿಂದೆ ಕುಳಿತಿದ್ದವನು ಕೆಳಗಿಳಿದು ಜೋಹಾಲ್ ಮೇಲೆ ಹಲವಾರು ಸುತ್ತು ಗುಂಡು ಹಾರಿಸುತ್ತಾನೆ. ಬಳಿಕ ಅದೇ ಬೈಕ್ ಏರಿ ಸ್ಥಳದಿಂದ ಪರಾರಿಯಾಗುತ್ತಾರೆ. ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಗುಂಡೇಟಿನಿಂದ ಜೋಹಾಲ್ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಬಟಿಂಡಾದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆತ ಗಂಭೀರವಾಗಿ ಗಾಯಗೊಂಡಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
“ನಾನು ಅಂಗಡಿಯ ಮೇಲೆ ನಿಂತಿದ್ದಾಗ ಯಾರೋ ಪಟಾಕಿ ಸಿಡಿಸುತ್ತಿರುವಂತೆ ಗುಂಡಿನ ಸದ್ದು ಕೇಳಿಸಿತು. ಆಗ ಜೊಹಾಲ್ ತನಗೆ ಗುಂಡು ಹಾರಿಸಲಾಗಿದೆ ಎಂದು ಕೂಗಿದರು. ಇದನ್ನು ಮಾಡಿದವರನ್ನು ಹಿಡಿಯಲು ಹೇಳಿದರು. ನಾನು ಅವರ ಬೆನ್ನಟ್ಟಿದೆ, ಆದರೆ ಅವರು ಬೈಕ್ನಲ್ಲಿ ತಪ್ಪಿಸಿಕೊಂಡರು ಎಂದು ಅಂಗಡಿಯ ಕೆಲಸಗಾರ ದೀಪು ಹೇಳಿದರು.
ಬಟಿಂಡಾ ಪೊಲೀಸ್ನ ಡಿವೈಎಸ್ಪಿ ಕುಲದೀಪ್ ಬ್ರಾರ್ ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಆರಂಭಿಸಿದ್ದಾರೆ. ಸದ್ಯ ಇಬ್ಬರನ್ನು ಗುರುತಿಸಲಾಗಿದ್ದು, ಆರೋಪಿಗಳ ಪತ್ತೆಗೆ ತನಿಖೆ ನಡೆಸಲಾಗುತ್ತಿದೆ.
ಘಟನೆಯ ನಂತರ, ಪ್ರತಿಪಕ್ಷ ನಾಯಕರು ಪಂಜಾಬ್ನಲ್ಲಿ ಭಗವಂತ್ ಮಾನ್ ನೇತೃತ್ವದ ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರವನ್ನು ಟೀಕಿಸಿದರು. “ಆಮ್ ಆದ್ಮಿ ಪಕ್ಷದ ಆಡಳಿತದಲ್ಲಿ ಪಂಜಾಬ್ನಲ್ಲಿ ಇಂತಹ ಘಟನೆಗಳು ಸಾಮಾನ್ಯವಾಗಿದೆ. ಇಡೀ ವರ್ತಕ ಸಮುದಾಯವು ಭಯದ ಸ್ಥಿತಿಯಲ್ಲಿದೆ. ಶಿರೋಮಣಿ ಅಕಾಲಿ ದಳ (ಎಸ್ಎಡಿ) ಈ ವಿಷಯದಲ್ಲಿ ತಕ್ಷಣದ ಕ್ರಮಕ್ಕೆ ಒತ್ತಾಯಿಸುತ್ತದೆ” ಎಂದು ಎಸ್ಎಡಿ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಹೇಳಿದ್ದಾರೆ.
ಕೇರಳ ಸರಣಿ ಸ್ಫೋಟ ಪ್ರಕರಣ: ಪ್ರಾಥಮಿಕ ತನಿಖೆಯಲ್ಲಿ ಸ್ಫೋಟಕ ಮಾಹಿತಿ, ಕರ್ನಾಟಕ, ದೆಹಲಿಯಲ್ಲಿ ಹೈಅಲರ್ಟ್