ನವದೆಹಲಿ: ದೇಶದ ಅತ್ಯುನ್ನತ ಕ್ರೀಡಾ ಗೌರವವಾದ ಖೇಲ್ರತ್ನ ಪ್ರಶಸ್ತಿ ತಮ್ಮ ಹೆಸರು ಶಿಫಾರಸು ಮಾಡಿರುವುದನ್ನು ವಾಪಸ್ ಪಡೆಯುವಂತೆ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಮನವಿ ಸಲ್ಲಿಸಿದ್ದಾರೆ. ಪಂಜಾಬ್ ಸರ್ಕಾರ ತಮ್ಮ ಹೆಸರು ವಾಪಸ್ ಪಡೆದ ಬೆನ್ನಲ್ಲೇ ಹರಡಿದ ಗೊಂದಲಗಳಿಗೆ ಹರ್ಭಜನ್ ಶನಿವಾರ ಸರಣಿ ಟ್ವೀಟ್ಗಳ ಮೂಲಕ ಸ್ಪಷ್ಟನೆ ನೀಡಿದ್ದು, ಪ್ರಶಸ್ತಿ ಸ್ವೀಕರಿಸಲು ತಾನು ಅರ್ಹನಲ್ಲ ಎಂದಿದ್ದಾರೆ.
‘ಖೇಲ್ರತ್ನ ಪ್ರಶಸ್ತಿ ಶಿಫಾರಸಿನಿಂದ ಪಂಜಾಬ್ ಸರ್ಕಾರ ನನ್ನ ಹೆಸರು ವಾಪಸ್ ಪಡೆದ ಬೆನ್ನಲ್ಲೇ ನನಗೆ ಹಲವಾರು ಕರೆಗಳು ಬಂದವು. ನಿಜವೇನೆಂದರೆ, ನಾನು ಈ ಪ್ರಶಸ್ತಿಗೆ ಅರ್ಹನಾಗಿಲ್ಲ. ಈ ಪ್ರಶಸ್ತಿಗೆ ಕಳೆದ 3 ವರ್ಷಗಳ ಅಂತಾರಾಷ್ಟ್ರೀಯ ಸಾಧನೆಯನ್ನು ಪರಿಗಣಿಸಲಾಗುತ್ತದೆ’ ಎಂದು 40 ವರ್ಷದ ಹರ್ಭಜನ್ ಟ್ವೀಟಿಸಿದ್ದಾರೆ. ಹರ್ಭಜನ್ 2015ರಲ್ಲಿ ಕೊನೆಯದಾಗಿ ಭಾರತ ಪರ ಆಡಿದ್ದಾರೆ.
ಇದನ್ನೂ ಓದಿ: ಕ್ರಿಕೆಟಿಗನಾಗದಿದ್ದರೆ ರಾಹುಲ್ ದ್ರಾವಿಡ್ ಏನು ಆಗಲು ಬಯಸಿದ್ದರು..?
‘ನನ್ನ ಹೆಸರು ವಾಪಸ್ ಪಡೆದಿರುವುದರಲ್ಲಿ ಪಂಜಾಬ್ ಸರ್ಕಾರದ ಯಾವ ತಪ್ಪು ಕೂಡ ಇಲ್ಲ. ಈ ಬಗ್ಗೆ ಯಾವ ಊಹಾಪೋಹಗಳನ್ನೂ ಹರಡಬೇಡಿ ಎಂದು ನನ್ನ ಮಾಧ್ಯಮಮಿತ್ರರಿಗೆ ಮನವಿ ಮಾಡುತ್ತೇನೆ. ಕಳೆದ ವರ್ಷ ನನ್ನ ಹೆಸರನ್ನು ತಡವಾಗಿ ಕಳುಹಿಸಲಾಗಿತ್ತು. ಆದರೆ ಈ ಬಾರಿ ನಾನೇ ವಾಪಸ್ ಪಡೆಯಲು ಕೇಳಿಕೊಂಡಿದ್ದೆ. ಕಳೆದ 3 ವರ್ಷಗಳ ಸಾಧನೆಯ ಮಾನದಂಡದ ಅಡಿಯಲ್ಲಿ ನಾನು ಬರುವುದಿಲ್ಲ’ ಎಂದು ಹರ್ಭಜನ್ ವಿವರಿಸಿದ್ದಾರೆ.
1.Dear friends
I have been flooded with calls as to why Punjab Govt withdrew my name from Khel Ratna nominations. The truth is I am not eligible for Khel Ratna which primarily considers the international performances in last three years.— Harbhajan Turbanator (@harbhajan_singh) July 18, 2020
ಹರ್ಭಜನ್ ಸಿಂಗ್ ಭಾರತ ಪರ 103 ಟೆಸ್ಟ್ ಮತ್ತು 236 ಏಕದಿನ ಪಂದ್ಯ ಆಡಿದ್ದು, ಕ್ರಮವಾಗಿ 417 ಮತ್ತು 269 ವಿಕೆಟ್ ಕಬಳಿಸಿದ್ದಾರೆ. 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರೂ ಆಗಿದ್ದರು. ಅನಿಲ್ ಕುಂಬ್ಳೆ (619) ಮತ್ತು ಕಪಿಲ್ ದೇವ್ (434) ಬಳಿಕ ಭಾರತ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿದ ಬೌಲರ್ ಎಂಬ ಹೆಗ್ಗಳಿಕೆಯನ್ನೂ ಹರ್ಭಜನ್ ಹೊಂದಿದ್ದಾರೆ. ಅವರು ಐಪಿಎಲ್ನಲ್ಲಿ ಚೆನ್ನೈ ಸೂಪರ್ಕಿಂಗ್ಸ್ ತಂಡದ ಸದಸ್ಯರಾಗಿದ್ದಾರೆ.