ಮಂಗಳೂರು: ಲೇಡಿಹಿಲ್ ಸಮೀಪ ಬಸ್ ನಿಲ್ದಾಣ ಬಳಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಪ್ರಕರಣದ ಅಪರಾಧಿ ತಲಪಾಡಿಯ ಮುಹಮ್ಮದ್ ಮುಸ್ತಫಾ ಎಂಬಾತನಿಗೆ ಮಂಗಳೂರಿನ ಮೂರನೇ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶೆ ತಾರಾ ಕೆ.ಸಿ 4 ತಿಂಗಳ ಸಜೆ ಮತ್ತು 2,500 ರೂ. ದಂಡ ವಿಧಿಸಿದ್ದಾರೆ.
2017ರ ಜೂನ್ 29ರಂದು ಸಂಜೆ ಲೇಡಿಹಿಲ್ ಬಸ್ ನಿಲ್ದಾಣ ಬಳಿ ನಿಂತಿದ್ದ ಮಹಿಳೆ ಜೊತೆ ಆರೋಪಿ ಅನುಚಿತವಾಗಿ ವರ್ತಿಸಿದ್ದ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಉರ್ವ ಪೊಲೀಸ್ ಠಾಣೆ ಎಎಸ್ಐ ಐತಪ್ಪ ಪ್ರಕರಣ ದಾಖಲಿಸಿದ್ದರು. ಎಸ್ಐ ಕೃಷ್ಣಾ ಬಿ. ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ನೇತ್ರಾವತಿ ವಾದ ಮಂಡಿಸಿದ್ದರು.