ಶಿವಮೊಗ್ಗ: ಹುಬ್ಬಳ್ಳಿಯ ಬಿವಿಬಿ ಇಂಜಿನಿಯರಿಂಗ್ ಕಾಲೇಜಿನ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರನ್ನು ಬರ್ಬರ ಹತ್ಯೆ ಮಾಡಿದ ಫಯಾಜ್ಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಮತ್ತು ವಿಶ್ವ ಹಿಂದು ಪರಿಷದ್, ಬಜರಂಗದಳ, ದುರ್ಗಾ ವಾಹಿನಿ ಕಾರ್ಯಕರ್ತರು ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಶುಕ್ರವಾರ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.
ಶಾಲಾ ಕಾಲೇಜುಗಳು ದೇಗುಲ ಇದ್ದಂತೆ. ಅಂತಹ ಸ್ಥಳದಲ್ಲಿ ಕ್ರೂರ ಮನಸ್ಥಿತಿಯ ಫಯಾಜ್, ನೇಹಾಳನ್ನು ಚಾಕುವಿನಿಂದ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಘಟನೆ ನಿಜಕ್ಕೂ ವಿದ್ಯಾರ್ಥಿ ಸಮೂಹದಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿದೆ. ಪ್ರೀತಿಸುವಂತೆ ಪೀಡಿಸುತ್ತಿದ್ದ ಫಯಾಜ್ ಅಕ್ರಮವಾಗಿ ಕಾಲೇಜಿಗೆ ಪ್ರವೇಶಿಸಿ ಆಕೆಗೆ ಒಂಬತ್ತು ಬಾರಿ ಇರಿದು ಕೊಲೆ ಮಾಡಿರುವುದು ಘೋರ ಕೃತ್ಯ ಎಂದು ಕಿಡಿಕಾರಿದರು.
ಕಾಲೇಜು ಕ್ಯಾಂಪಸ್ನೊಳಗೆ ಬಂದು ವಿದ್ಯಾರ್ಥಿನಿಗೆ ಚಾಕುವಿನಿಂದ ಇರಿದು ಕೊಲೆ ಮಾಡುತ್ತಾನೆಂದರೆ ಆತನಿಗೆ ಕಾನೂನಿನ ಮೇಲೆ ಭಯ ಇಲ್ಲ ಎಂದೇ ಅರ್ಥ. ರಾಜಾರೋಷವಾಗಿ ಕಾಲೇಜಿಗೆ ಬಂದು ಕೊಲೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ದೂರಿದರು.
ಪ್ರಕರಣದ ಕುರಿತು ಪೊಲೀಸರು ಕೂಡಲೇ ತನಿಖೆ ನಡೆಸಬೇಕು. ಆತನಿಗೆ ಕಠಿಣ ಶಿಕ್ಷೆ ಆಗುವಂತೆ ಕ್ರಮ ಕೈಗೊಂಡು ವಿದ್ಯಾರ್ಥಿನಿಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ರಾಜ್ಯಾದ್ಯಂತ ಪೊಲೀಸರು ಮಫ್ತಿಯಲ್ಲಿ ಶಾಲಾ ಕಾಲೇಜುಗಳಿಗೆ ತೆರಳಿ ಸಂಭಾವ್ಯ ಘಟನೆಗಳನ್ನು ತಡೆಯಲು ಪ್ರಯತ್ನಿಸಬೇಕು ಎಂದು ಒತ್ತಾಯಿಸಿದರು.
ಎಬಿವಿಪಿ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಎಚ್.ಕೆ.ಪ್ರವೀಣ್, ಪುನೀತ್, ಅಭಿಷೇಕ್, ರಘುನಂದನ್, ರವಿ, ಪ್ರಖ್ಯಾತ್, ವರುಣ್, ಲೋಹಿತ್, ಅವಿನಾಶ್, ರೋಹಿತ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಹತ್ಯೆಗೆ ಖಂಡನೆ: ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ್ ಹತ್ಯೆ ಘೋರ ಘಟನೆಯಾಗಿದ್ದು ತಕ್ಷಣವೇ ಫಯಾಜ್ಗೆ ಕಠಿಣ ಶಿಕ್ಷೆ ವಿಧಿಸಬೇಕು ಇಲ್ಲವೇ ಎನ್ಕೌಂಟರ್ ಮಾಡಬೇಕು ಎಂದು ವಿಶ್ವ ಹಿಂದು ಪರಿಷತ್, ಬಜರಂಗದಳ, ದುರ್ಗಾ ವಾಹಿನಿ ಕಾರ್ಯಕರ್ತರು ಆಗ್ರಹಿಸಿದರು.