More

    ರಸ್ತೆ, ವೃತ್ತಕ್ಕೆ ಪುನೀತ್‌ರಾಜಕುಮಾರ್ ಹೆಸರಿಡಿ: ಎಂಎಲ್‌ಸಿಗಳಾದ ದಿನೇಶ್, ಮಧು ಮನವಿ

    ಮಂಡ್ಯ: ಮಂಡ್ಯ ನಗರದ ಯಾವುದಾದರೂ ಒಂದು ಪ್ರಮುಖ ರಸ್ತೆ ಅಥವಾ ವೃತ್ತಕ್ಕೆ ನಟ ದಿವಂಗತ ಪುನೀತ್‌ರಾಜಕುಮಾರ್ ಅವರ ಹೆಸರನ್ನು ನಾಮಕರಣ ಮಾಡಲು ಕ್ರಮ ವಹಿಸುವಂತೆ ಎಂಎಲ್‌ಸಿಗಳಾದ ದಿನೇಶ್ ಗೂಳಿಗೌಡ ಮತ್ತು ಮಧು ಜಿ.ಮಾದೇಗೌಡ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅಜಯ್ ನಾಗಭೂಷಣ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
    ಬೆಂಗಳೂರಲ್ಲಿ ಮಂಗಳವಾರ ಭೇಟಿ ಮಾಡಿರುವ ಅವರು, ಪುನೀತ್ ಅವರ ಸಾಮಾಜಿಕ ಕಾರ್ಯ ಶ್ಲಾಘನೀಯ. ಎಲ್ಲರನ್ನೂ ಅಗಲಿ ವರ್ಷ ಗತಿಸಿದರೂ ಜನಮಾನಸದಿಂದ ದೂರವಾಗಿಲ್ಲ. ಅವರು ಮಾಡಿದ ಕಾರ್ಯಗಳು ಇಂದಿಗೂ ಜೀವಂತವಾಗಿದೆ. ನಟನೆಯಲ್ಲಿಯೂ ಉತ್ತಮ ಸಂದೇಶವನ್ನು ಜನರಿಗೆ ನೀಡುತ್ತಾ ಬಂದಿದ್ದರು. ಅಲ್ಲದೆ, ಬಡವರಿಗೆ, ಅನಾಥರಿಗೆ, ವೃದ್ಧರಿಗೆ ಆಶ್ರಯ ನೀಡಿದ್ದರು. ಮಂಡ್ಯದಲ್ಲಿಯೂ ಇವರ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಹೆಸರನ್ನು ನಾಮಕರಣ ಮಾಡಬೇಕು ಎಂದಿದ್ದಾರೆ.
    ಪುನೀತ್ ಅವರು ಕನ್ನಡಿಗರ ಹೃದಯ ಸಾಮ್ರಾಜ್ಯದಲ್ಲಿ ಅಚ್ಚಳಿಯದ ನೆನಪನ್ನು ಉಳಿಸಿ ಹೋಗಿದ್ದಾರೆ. ಅವರ ಕಲೆ ಮತ್ತು ಅಭಿನಯ ಅಷ್ಟೇ ಅಲ್ಲದೆ ಸರಳ ಜೀವನ, ಸಾಮಾಜಿಕ ಸೇವೆಗಳನ್ನು ನೋಡಿದಾಗ ಸಾವಿನಲ್ಲೂ ಸಾರ್ಥಕತೆಯನ್ನು ಕಂಡಿದ್ದಾರೆ. ಇಷ್ಟೆಲ್ಲ ಕಾರ್ಯಕ್ರಮಗಳು ಅವರ ನಿಧನ ನಂತರವೇ ಸಮಾಜಕ್ಕೆ ಗೊತ್ತಾಯಿತು. ಹಾಗಾಗಿ, ಅವರ ಆದರ್ಶ, ಸೇವಾಗುಣ ಮುಂದಿನ ಪೀಳಿಗೆಗೂ ತಲುಪುವಂತೆ ಪುನೀತ್ ಹೆಸರನ್ನು ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಬೇಕಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts